ಶಿವಮೊಗ್ಗ

ಶರಾವತಿ ಸಂತ್ರಸ್ತರ ಸಮಸ್ಯೆ ಬಗೆಹರಿಸಲು ವಿಫಲ: ತೀ.ನ. ಶ್ರೀನಿವಾಸ್ ಟೀಕೆ

ಶಿವಮೊಗ್ಗ-ಶರಾವತಿ ಸಂತ್ರಸ್ತರಿಗೆ ಭೂಮಿಹಕ್ಕು ನೀಡುವಲ್ಲಿ ಜನಪ್ರತಿನಿಧಿಗಳು ಸಂಪೂರ್ಣ ವಿಫಲರಾಗಿದ್ದಾರೆ ಎಂದು ಮಲೆನಾಡು ಹೋರಾಟ ಸಮಿತಿಯ ಸಂಚಾಲಕ ತೀ.ನ. ಶ್ರೀನಿವಾಸ್ ಪತ್ರಿಕಾಗೋಷ್ಠಿಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು.

ಶಿವಮೊಗ್ಗದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡುತ್ತಾ, ಶರಾವತಿ, ತುಂಗಾ, ಭದ್ರಾ, ವರಾಹಿ, ಚಕ್ರಾ, ಸಾವೇಹಕ್ಲು, ಅಂಬ್ಲಿಗೊಳ ಮುಂತಾದ ಅಣೆಕಟ್ಟು ಯೋಜನೆಗಳ ನಿರ್ಮಾಣಕ್ಕಾಗಿ ರೈತರು ಭೂಮಿ ಒಪ್ಪಿಸಿ ತ್ಯಾಗ ಮಾಡಿದ್ದಾರೆ. ಆದರೆ ಮುಳುಗಡೆಯಾದ ರೈತರಿಗೆ ಭೂಮಿಯ ಹಕ್ಕುಪತ್ರಗಳನ್ನು ನೀಡುವಲ್ಲಿ ಸರ್ಕಾರ ಕ್ರಮ ಕೈಗೊಂಡಿಲ್ಲ ಎಂದು ದೂರಿದರು.

“ಈ ಯೋಜನೆಗಳಿಗೆ ಮುಳುಗಡೆಯಾದ ರೈತರಿಗೆ 60 ವರ್ಷಗಳ ಹಿಂದೆಯೇ ಭೂಮಿ ಮಂಜೂರು ಮಾಡಲಾಗಿತ್ತು. ಆದರೆ ಇಂದು ಅವರ ಭೂಮಿಯ ಹಕ್ಕುಪತ್ರಗಳನ್ನು ವಾಪಸ್ ಪಡೆಯುವಂತಹ ಅಕ್ರಮ ಕ್ರಮಗಳು ನಡೆಯುತ್ತಿವೆ,” ಎಂದು ಅವರು ಕಳವಳ ವ್ಯಕ್ತಪಡಿಸಿದರು.

ಸಂಸದ ಬಿ.ವೈ. ರಾಘವೇಂದ್ರ ಹಾಗೂ ಸಚಿವ ಮಧು ಬಂಗಾರಪ್ಪ ಅವರ ವಿರುದ್ಧವೂ ತೀವ್ರ ವಾಗ್ದಾಳಿ ನಡೆಸಿದ ಶ್ರೀನಿವಾಸ್, “ಈ ಇಬ್ಬರೂ ಜನಪ್ರತಿನಿಧಿಗಳು ಸಮಸ್ಯೆ ಬಗೆಹರಿಸಲು ಯಾವುದೇ ಪರಿಣಾಮಕಾರಿಯಾದ ಕ್ರಮ ಕೈಗೊಂಡಿಲ್ಲ,” ಎಂದು ಆರೋಪಿಸಿದರು.

ಹಿಂದಿನ ಸರ್ಕಾರದ ಅವಧಿಯಲ್ಲಿ ನ್ಯಾಯಾಲಯಗಳಿಂದ ರೈತವಿರೋಧಿ ತೀರ್ಪುಗಳು ಬಂದಾಗ, ಸರಕಾರ ನ್ಯಾಯಾಲಯದಲ್ಲಿ ಸಮರ್ಥವಾಗಿ ವಾದಿಸುವಲ್ಲಿ ವಿಫಲವಾಯಿತು. ಮೇಲ್ಮನವಿಯನ್ನೂ ಸಲ್ಲಿಸಿಲ್ಲ. ಇತ್ತೀಚಿನ ಸರ್ಕಾರ ಕೂಡ ಶರಾವತಿ ಸಂತ್ರಸ್ತರ ಪರವಾಗಿ ಸುಪ್ರಿಂಕೋರ್ಟ್‌ಗೆ ಮಧ್ಯಂತರ ಅರ್ಜಿ ಸಲ್ಲಿಸಿದೆ ಹೊರತು, ಯಾವುದೇ ಭೂಮಿಹಕ್ಕಿನ ಕ್ರಮ ಕೈಗೊಂಡಿಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

Leave a Comment