ಬಾಳೆಹೊನ್ನೂರು ; ಶಿಕ್ಷಣ ಎಂಬುದು ಭರವಸೆಯ ಬಹು ದೊಡ್ಡ ಶಕ್ತಿ. ಆದರ್ಶ ಸಮಾಜ ನಿರ್ಮಾಣದಲ್ಲಿ ಶಿಕ್ಷಕರ ಪಾತ್ರ ದೊಡ್ಡದು. ಬೆಳೆಯುವ ಮಕ್ಕಳಲ್ಲಿ ರಾಷ್ಟ್ರಭಕ್ತಿ, ಪ್ರಾಮಾಣಿಕತೆ, ದಕ್ಷತೆ, ಕ್ರಿಯಾಶೀಲತೆ ಮತ್ತು ನೈತಿಕ ಶಕ್ತಿಯನ್ನು ಬೆಳೆಸುವ ಅದ್ಭುತ ಶಕ್ತಿ ಶಿಕ್ಷಕರಲ್ಲಿ ಇದೆ. ಮಕ್ಕಳ ಬಾಳ ಭವಿಷ್ಯತ್ತನ್ನು ನಿರ್ಮಿಸುವ ಶಿಲ್ಪಿಗಳು ಶಿಕ್ಷಕರೆಂಬುದನ್ನು ಯಾರೂ ಮರೆಯಬಾರದೆಂದು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.
ಅವರು ಶುಕ್ರವಾರ ಶ್ರೀ ಜಗದ್ಗುರು ರಂಭಾಪುರಿ ಪೀಠದ ಗುರುಭವನದ ಸಭಾಂಗಣದಲ್ಲಿ ಮಾಜಿ ರಾಷ್ಟ್ರಪತಿ ಡಾ.ಎಸ್.ರಾಧಾಕೃಷ್ಣನ್ ಜನ್ಮ ದಿನಾಚರಣೆ ಅಂಗವಾಗಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ನಂತರ ಜರುಗಿದ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು.

ಭಾರತ ದೇಶದ ಮೊದಲ ಉಪರಾಷ್ಟçಪತಿ ಹಾಗೂ ಮಾಜಿ ರಾಷ್ಟ್ರಪತಿ ಡಾ.ಎಸ್.ರಾಧಾಕೃಷ್ಣನ್ ಸಾಮಾನ್ಯ ಕುಟುಂಬದಲ್ಲಿ ಹುಟ್ಟಿ ತಮ್ಮ ನಿರಂತರ ಪ್ರಯತ್ನ ಮತ್ತು ಸಾಧನೆಯಿಂದ ಬಹಳಷ್ಟು ಎತ್ತರಕ್ಕೆ ಬೆಳೆದವರು. ಆದರ್ಶ ಶಿಕ್ಷಣ ತಜ್ಞರಾಗಿ ಮತ್ತು ತತ್ವಜ್ಞಾನಿಗಳಾಗಿ ಭಾರತ ದೇಶದ ಗೌರವ ಘನತೆಯನ್ನು ಹೆಚ್ಚಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ. 1966ರಲ್ಲಿ ನವದೆಹಲಿ ರಾಷ್ಟ್ರಪತಿ ಭವನದಲ್ಲಿ ಬಾಳೆಹೊನ್ನೂರು ಶ್ರೀಮದ್ ರಂಭಾಪುರಿ ವೀರಗಂಗಾಧರ ಜಗದ್ಗುರುಗಳೊಡನೆ ಅವರು ಸುಮಾರು ಮುಕ್ಕಾಲು ಗಂಟೆಗಳ ಕಾಲ ಭಾರತೀಯ ಸಂಸ್ಕೃತಿ ಬೆಳೆದುಕೊಂಡು ಬಂದಂತಹ ಗುರು ಪರಂಪರೆ ಕುರಿತು ಚರ್ಚಿಸಿದ ನೆನಹುಗಳನ್ನು ನಾವಿಲ್ಲಿ ನೆನಪಿಸಿಕೊಳ್ಳಬಹುದು. ಸೆಪ್ಟಂಬರ್ 5 ರಂದು ಜರುಗುವ ತಮ್ಮ ಜನ್ಮ ದಿನವನ್ನು “ಶಿಕ್ಷಕರ ದಿನಾಚರಣೆ” ಮಾಡಲು ಸಲಹೆಯಿತ್ತ ಆದರ್ಶ ವ್ಯಕ್ತಿತ್ವ ಅವರದು. ಆಧುನಿಕ ಕಾಲದಲ್ಲಿ ಶಿಕ್ಷಕರು ಬಹಳಷ್ಟು ಎಚ್ಚರಿಕೆಯಿಂದ ಹೆಜ್ಜೆ ಇಡಬೇಕಾಗಿದೆ. ಬೆಳೆಯುವ ಮಕ್ಕಳಲ್ಲಿ ಆದರ್ಶ ಮೌಲ್ಯಗಳನ್ನು ಬೆಳೆಸುವ ಮತ್ತು ಇಂದಿನ ವಿಷಮ ಪರಿಸ್ಥಿತಿಯಲ್ಲಿ ಸಮರ್ಥವಾಗಿ ಕಾರ್ಯ ನಿರ್ವಹಿಸುವ ಜವಾಬ್ದಾರಿಯಿದೆ. ಶಿಕ್ಷಕರ ಮತ್ತು ವಿದ್ಯಾರ್ಥಿಗಳ ಮಧ್ಯೆ ಗುರು ಶಿಷ್ಯರ ಸದ್ಭಾವನೆ ಬೆಳೆದು ಆರೋಗ್ಯ ಪೂರ್ಣ ಸಮಾಜ ನಿರ್ಮಾಣಕ್ಕೆ ದಿಕ್ಸೂಚಿಯಾಗಲೆಂದರು.

ರಾಯಚೂರು ಕಿಲ್ಲೆ ಬೃಹನ್ಮಠದ ಶಾಂತಮಲ್ಲ ಶಿವಾಚಾರ್ಯರು, ಹುಡುಗಿ ಹಿರೇಮಠದ ಸೋಮೇಶ್ವರ ಶಿವಾಚಾರ್ಯರು, ಗುರುಕುಲದ ಕುಲಪತಿ ಸಿದ್ಧಲಿಂಗ ಶಾಸ್ತ್ರಿಗಳು ಚಂದ್ರಶೇಖರ ಮೊದಲಾದವರು ಉಪಸ್ಥಿತರಿದ್ದರು.
ಶಿಕ್ಷಕ ವೀರೇಶ ಕುಲಕರ್ಣಿ ಸ್ವಾಗತಿಸಿ ನಿರೂಪಿಸಿದರು. ಶಾಲಾ ಮಕ್ಕಳಿಗೆ ಸಿಹಿ ವಿತರಿಸಲಾಯಿತು.

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್ಸೈಟ್ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 7 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್ಸೈಟ್ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ ‘ಮಲ್ನಾಡ್ ಟೈಮ್ಸ್’ ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ.