ಹೊಂಬುಜ ; ಅತಿಶಯ ಹೊಂಬುಜ ಶ್ರೀಕ್ಷೇತ್ರದ ಅಧಿನಾಯಕ ಶ್ರೀ 1008 ಪಾರ್ಶ್ವನಾಥ ಸ್ವಾಮಿ, ಮಹಾಮಾತೆ ಯಕ್ಷಿ ಶ್ರೀ ಪದ್ಮಾವತಿ ದೇವಿ ಸನ್ನಿಧಿಯಲ್ಲಿ ನವರಾತ್ರಿ ಉತ್ಸವದ ಪ್ರಯುಕ್ತ ಸಪ್ತಮ ದಿನದಂದು ವಿವಿಧ ಧಾನ್ಯಗಳನ್ನು ಭಕ್ತರು ಸಮರ್ಪಿಸಿದರು.

ಅಷ್ಟವಿಧಾರ್ಚನೆ ಪೂಜೆಯನ್ನು ಜಿನಾಗಮೋಕ್ತ ವಿಧಾನದಲ್ಲಿ ಶ್ರೀ ಹೊಂಬುಜ ಶ್ರೀ ಜೈನ ಮಠದ ಪೀಠಾಧೀಶರಾದ ಪರಮಪೂಜ್ಯ ಜಗದ್ಗುರು ಸ್ವಸ್ತಿಶ್ರೀ ಡಾ. ದೇವೇಂದ್ರಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮಿಗಳವರ ದಿವ್ಯ ಸಾನಿಧ್ಯ. ನೇತೃತ್ವ ಮತ್ತು ಮಾರ್ಗದರ್ಶನದಲ್ಲಿ ಪೂರ್ವ ಪರಂಪರೆಯಲ್ಲಿ ನೆರವೇರಿಸಲಾಯಿತು.

“ನಾವು ಬೆಳೆಯುವ ಕೃಷಿ ಉತ್ಪಾದನೆಗಳು ಶಾರೀರಿಕವಾಗಿ ಆಹಾರ ದ್ರವ್ಯವಾಗಿದ್ದರೂ, ಪಂಚಭೂತಗಳ ವಿಲೀನದಿಂದ ಸಾತ್ವಿಕವಾಗಿ ಪೌಷ್ಟಿಕಾಂಶಗಳು ವ್ಯಾಧಿರಹಿತವಾಗಿ ಬಾಳಲು ಅವಶ್ಯವಾಗಿದೆ” ಎಂದು ಶ್ರೀಗಳವರು ಪ್ರವಚನದಲ್ಲಿ “ನವರಾತ್ರಿ ಉತ್ಸವ, ಆರಾಧನೆಯು ಸಮೃದ್ಧ ಮಳೆ, ಬೆಳೆಗಾಗಿ ಅಪೇಕ್ಷಿಸುವ ಧರ್ಮ ಮರ್ಮವನ್ನು ಹೊಂದಿದೆ” ಎಂಬ ಅಂಶವನ್ನು ತಿಳಿಸಿದರು. ವಿವಿಧ ಧಾನ್ಯಗಳನ್ನು ಶ್ರೀ ಪದ್ಮಾವತಿ ದೇವಿ ಸನ್ನಿಧಿಯಲ್ಲಿ ಅರ್ಪಿಸಲಾಯಿತು.

ಪ್ರಾತಃಕಾಲ ಕುಮುದ್ವತಿ ತೀರ್ಥದಿಂದ ಅಗ್ರೋದಕವನ್ನು ಸನ್ನಿಧಿಗೆ ಅರ್ಪಿಸಲಾಯಿತು. ಶ್ರೀ ಪಾರ್ಶ್ವನಾಥ ಸ್ವಾಮಿ, ಶ್ರೀ ಮಹಾವೀರ ಸ್ವಾಮಿ, ಶ್ರೀ ಆದಿನಾಥ ಸ್ವಾಮಿ, ಶ್ರೀ ಕೂಷ್ಮಾಂಡಿನಿ ದೇವಿ, ಶ್ರೀ ಸರಸ್ವತಿ ದೇವಿ, ಶ್ರೀ ಕ್ಷೇತ್ರಪಾಲ ಶ್ರೀ ನಾಗಸನ್ನಿಧಿಯಲ್ಲಿ ಪೂಜಾ ವಿಧಾನಗಳು ಜರುಗಿದವು. ಊರ ಪರವೂರ ಭಕ್ತರು. ಶ್ರೀ ಕುಂದಕುಂದ ಗುರುಕುಲ ವಿದ್ಯಾಪೀಠದ ವಿದ್ಯಾರ್ಥಿಗಳು, ಶ್ರೀ ಪದ್ಮಾವತಿ ಮಹಿಳಾ ಸಮಾಜದ ಶ್ರಾವಿಕೆಯರು ಭಕ್ತಿಯಿಂದ ಪೂಜೆ ಸಲ್ಲಿಸಿದರು.
ಅಷ್ಟಾವಧಾನ, ಸಂಗೀತ, ನೃತ್ಯ, ವಾದ್ಯ ಸೇವೆಗಳು ನೆರವೇರಿದರು. ಪೂಜಾ ಸೇವಾಕರ್ತರಾದ ಗುಡಗಾಂವ್ನ ಶ್ರೀಮತಿ ನೀತು ಶ್ರೀ ನವೀನ್ ಜೈನ್ ಪರಿವಾರದವರು ಜಿನವಾಣಿ ಪೂಜೆಯಲ್ಲಿ ಪಾಲ್ಗೊಂಡರು

ಸೆ.29 ಸೋಮವಾರ-ಸರಸ್ವತಿ ಪೂಜೆ, ಸೆ. 30 ಮಂಗಳವಾರ-ಜೀವದಯಾಷ್ಟಮಿ, ಅ. 01 ಬುಧವಾರ-ಆಯುಧಪೂಜೆ ಮತ್ತು ಮಹಾನವಮಿ, ಅ. 02 ಗುರುವಾರ-ವಿಜಯದಶಮಿ ಉತ್ಸವ, ಶ್ರೀದೇವಿ ಪಲ್ಲಕ್ಕಿ ಉತ್ಸವ, ಪರಮಪೂಜ್ಯ ಸ್ವಸ್ತಿಶ್ರೀಗಳವರ ಸಿಂಹಾಸನಾರೋಹಣ ಹಾಗೂ ಶ್ರೀಗಳವರ ಪಾದಪೂಜೆ ಕಾರ್ಯಕ್ರಮಗಳು ನೆರವೇರಲಿದೆ. ಸರ್ವ ಭಕ್ತವೃಂದದವರು ಶರನ್ನವರಾತ್ರಿ ಪೂಜಾ ವಿಧಿಗಳಲ್ಲಿ ಪಾಲ್ಗೊಂಡು ಪುಣ್ಯಭಾಗಿಗಳಾಗುವಂತೆ ಅಪೇಕ್ಷಿಸಲಾಗಿದೆ.

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್ಸೈಟ್ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 7 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್ಸೈಟ್ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ ‘ಮಲ್ನಾಡ್ ಟೈಮ್ಸ್’ ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ.