ಶಿವಮೊಗ್ಗ: ನಕಲಿ ಬಂಗಾರದ ಆಭರಣಗಳನ್ನು ವಿವಿಧ ಬ್ಯಾಂಕುಗಳಲ್ಲಿ ಜಮಾ ಮಾಡಿ ಸುಮಾರು 28,87,237 ರೂ. ಸಾಲ ಪಡೆದು ವಂಚನೆ ನಡೆಸಿದ ಪ್ರಕರಣದಲ್ಲಿ ಶಿವಮೊಗ್ಗದ ದೊಡ್ಡಪೇಟೆ ಠಾಣೆಯ ಪೊಲೀಸರು ಯಶಸ್ವಿಯಾಗಿ ಆರೋಪಿಯನ್ನು ಬಂಧಿಸಿದ್ದಾರೆ.
ಪಂಜಾಬ್ ನ್ಯಾಷನಲ್ ಬ್ಯಾಂಕ್ (PNB) ವ್ಯವಸ್ಥಾಪಕರ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತೀರ್ಥಹಳ್ಳಿ ತಾಲ್ಲೂಕಿನ ಮೇಗರವಳ್ಳಿಯ ಅರೆಕಲ್ಲು ಗ್ರಾಮದ ಬಿಳ್ಮನೆ ನಿವಾಸಿ ಲೋಕೇಶ (39) ಅವರನ್ನು ಬಂಧಿಸಿದ್ದು, 419.824 ಗ್ರಾಂ ನಕಲಿ ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ.
ಆರೋಪಿಯು PNB, ವರ್ತಕರ ಸೌಹಾರ್ಧ ಸಂಘ, ಸಿರಿ ಸೌಹಾರ್ದ ಸಹಕಾರಿ, ಡಿಸಿಸಿ ಬ್ಯಾಂಕ್, ಐಒಬಿಐ ಹಾಗೂ ಗುಲಾಬಿ ಜ್ಯುವೆಲರಿ ವರ್ಕ್ಸ್ ಸೇರಿದಂತೆ ಹಲವು ಸಂಸ್ಥೆಗಳಲ್ಲಿ ನಕಲಿ ಚಿನ್ನದ ಮೂಲಕ ವಂಚನೆ ಮಾಡಿದ್ದಾನೆ. ಈ ಪ್ರಕರಣದಲ್ಲಿ ಬ್ಯಾಂಕ್ ಗೋಲ್ಡ್ ಅಪ್ರೈಸರ್ ರವಿಶಂಕರ್, ಶಿವಮೊಗ್ಗದ ಮಲವಗೊಪ್ಪದ ಸುಧಾ, ತೀರ್ಥಹಳ್ಳಿಯ ಬಗ್ಗೋಡಿಗೆ ಗ್ರಾಮದ ರಾಹುಲ್ ಮತ್ತು ವೈಟ್ ಗೋಲ್ಡ್ & ಬ್ರೈಟ್ ಗೋಲ್ಡ್ ಬಿವರ್ಸ್ ನಲ್ಲಿ ಮ್ಯಾನೇಜರ್ ಕೆಲಸಗಾರ ತೀರ್ಥಹಳ್ಳಿ ತಾಲ್ಲೂಕಿನ ಮೃಗವಧೆ ನಿವಾಸಿ ಶರತ್ ಕೂಡ ಶಾಮೀಲಾಗಿದ್ದು, ಇವರು ಬೇರೆ ಬ್ಯಾಂಕ್ಗಳಲ್ಲಿಯೂ ನಕಲಿ ಚಿನ್ನದಿಂದ ವಂಚನೆ ನಡೆಸಿರುವ ಸಾಧ್ಯತೆ ಇದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇನ್ನು ಉಳಿದ ಆರೋಪಿಗಳು ತಲೆಮರೆಸಿರುವುದರಿಂದ ಅವರನ್ನು ಬಂಧಿಸಲು ಪೊಲೀಸರು ತೀವ್ರ ಪರಿಶ್ರಮ ನಡೆಸುತ್ತಿದ್ದಾರೆ ಎಂದು ಪೊಲೀಸ್ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ನಕಲಿ ಚಿನ್ನ ಅಡವಿಟ್ಟ ವಿವರ:
- ಪಂಜಾಬ್ ನ್ಯಾಶನಲ್ ಬ್ಯಾಂಕ್ ಸವಾರ್ ಲೈನ್ ರಸ್ತೆ ಶಿವಮೊಗ್ಗದಲ್ಲಿ 163.300 ಗ್ರಾಂ ಅಡ ಇಟ್ಟು 7,62,557/- ರೂ ಸಾಲ.
- ವರ್ತಕರ ಸೌಹಾರ್ಧ ಸಂಘ ನಿಯಮಿತ ತೀರ್ಥಹಳ್ಳಿಯಲ್ಲಿ 75.844 ಗ್ರಾಂ ಅಡ ಇಟ್ಟು 9,33,000/- ರೂ ಸಾಲ
- ಸಿರಿ ಸೌಹಾರ್ದ ಕ್ರೆಡಿಟ್ ಆಪರೇಟಿವ್ ಸಂಘ, ಆಲ್ಕೋಳ ಶಿವಮೊಗ್ಗದಲ್ಲಿ 75.01 ಗ್ರಾಂ ಅಡ ಇಟ್ಟು 7,43,000/- ರೂ ಸಾಲ.
- ಡಿ.ಸಿ.ಸಿ ಬ್ಯಾಂಕ್ ಗೋಪಾಳ ಶಿವಮೊಗ್ಗದಲ್ಲಿ 48.28 ಗ್ರಾಂ ಅಡ ಇಟ್ಟು 1,79,000/- ರೂ ಸಾಲ.
- ಇಂಡಿಯನ್ ಓವರ್ಸಿಸ್ ಬ್ಯಾಂಕ್ ಸವಾರ್ ಲೈನ್ ರಸ್ತೆ ಶಿವಮೊಗ್ಗದಲ್ಲಿ 26.490 ಗ್ರಾಂ ಅಡ ಇಟ್ಟು 1,10,000/- ರೂ ಸಾಲ.
- ಗುಲಾಬಿ ಜ್ಯೂವೆಲರಿ ವರ್ಕ್ಸ್ ನೇತಾಜಿ ಸರ್ಕಲ್ ಶಿವಮೊಗ್ಗದಲ್ಲಿ 30.90 ಗ್ರಾಂ ಅಡ ಇಟ್ಟು 1,90,000/- ರೂ ಸಾಲ.
- ಒಟ್ಟು 419.824 ಗ್ರಾಂ ಅಡ ಇಟ್ಟು 28,87,237/- ರೂ ಸಾಲ ಪಡೆದಿರುತ್ತಾನೆ.
ದೊಡ್ಡಪೇಟೆ ಪೊಲೀಸ್ ಇನ್ಸ್ಪೆಕ್ಟರ್ ಸತ್ಯನಾರಾಯಣ, ಪಿಎಸ್ಐ ನಾರಾಯಣ ಮಧುಗಿರಿ ಮತ್ತು ಅವರ ಸಿಬ್ಬಂದಿ ತಂಡ ಈ ಕಾರ್ಯಾಚರಣೆಯನ್ನು ಯಶಸ್ವಿಯಾಗಿ ಭೇದಿಸಿದ್ದಾರೆ.

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್ಸೈಟ್ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 7 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್ಸೈಟ್ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ ‘ಮಲ್ನಾಡ್ ಟೈಮ್ಸ್’ ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ.





