ಕಣ್ಣಿನ ತಪಾಸಣಾ ಶಿಬಿರದಿಂದ ಗ್ರಾಮಾಂತರ ಮಹಿಳೆಯರಿಗೆ ಅನುಕೂಲ : ಮುರಳೀಧರ ಶೆಟ್ಟಿ

Written by Mahesha Hindlemane

Published on:

ಹೊಸನಗರ : ಗ್ರಾಮಾಂತರ ಪ್ರದೇಶಗಳಲ್ಲಿ ಕಣ್ಣಿನ ತಪಾಸಣೆ, ಥೈರಾಯ್ಡ್ ಹಾಗೂ ಹೀಮೋಗ್ಲೋಬಿನ್ ಪರೀಕ್ಷಾ ಶಿಬಿರಗಳನ್ನು ಆಯೋಜಿಸುವುದರಿಂದ ಮಹಿಳೆಯರಿಗೆ ಹೆಚ್ಚಿನ ಅನುಕೂಲವಾಗುತ್ತದೆ ಎಂದು ಜಿಲ್ಲಾ ನಿರ್ದೇಶಕ ಮುರಳೀಧರ ಶೆಟ್ಟಿ ಹೇಳಿದರು.

WhatsApp Group Join Now
Telegram Group Join Now
Instagram Group Join Now
📢 Stay Updated! Join our WhatsApp Channel Now →

ಅವರು ಹೊಸನಗರದ ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜ್ಞಾನವಿಕಾಸ ಕೇಂದ್ರದ ವತಿಯಿಂದ ತಾಲೂಕಿನ ಕಾರಣಗಿರಿ ವಲಯದ ಹಿಲ್ಕುಂಜಿ ಕಾರ್ಯಕ್ಷೇತ್ರದ ಭುವನೇಶ್ವರಿ ಜ್ಞಾನವಿಕಾಸ ಕೇಂದ್ರದಲ್ಲಿ ಬಳಗಟ್ಟೆ ಲ್ಯಾಬ್, ತೀರ್ಥಹಳ್ಳಿ ಇವರ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಕಣ್ಣಿನ ತಪಾಸಣೆ, ಥೈರಾಯ್ಡ್ ಹಾಗೂ ಹೀಮೋಗ್ಲೋಬಿನ್ ಪರೀಕ್ಷಾ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.

ಗ್ರಾಮೀಣ ಪ್ರದೇಶಗಳ ಮಹಿಳೆಯರು ದೈನಂದಿನ ಕೆಲಸ ಕಾರ್ಯಗಳಲ್ಲಿ ಹೆಚ್ಚು ನಿರತರಾಗಿರುವುದರಿಂದ ತಮ್ಮ ಆರೋಗ್ಯದ ಕಡೆಗೆ ಗಮನ ಹರಿಸಲು ಸಾಧ್ಯವಾಗುವುದಿಲ್ಲ. ಗ್ರಾಮಾಂತರ ಪ್ರದೇಶಗಳಲ್ಲಿಯೇ ಇಂತಹ ಆರೋಗ್ಯ ತಪಾಸಣಾ ಶಿಬಿರಗಳನ್ನು ನಡೆಸುವುದರಿಂದ ಮಹಿಳೆಯರು ತಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ, ಕಾಲಕಾಲಕ್ಕೆ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಲು ಅನುಕೂಲವಾಗುತ್ತದೆ ಎಂದು ಹೇಳಿದರು.

ನೇತ್ರಾಲಯದ ವೈದ್ಯರಾದ ಡಾ. ಪ್ರೇಮ್ ಅವರು ಕಣ್ಣಿನ ಆರೈಕೆಯ ಮಹತ್ವ ಹಾಗೂ ಕಾಲಕಾಲಕ್ಕೆ ಕಣ್ಣಿನ ಪರೀಕ್ಷೆ ಮಾಡಿಸಿಕೊಳ್ಳುವ ಅಗತ್ಯದ ಕುರಿತು ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ಯೋಜನಾಧಿಕಾರಿ ಬಾಲಕೃಷ್ಣ ಹಾಗೂ ಎಸ್‌ಡಿಎಂಸಿ ಅಧ್ಯಕ್ಷ ವಿವೇಕಾನಂದ ಅವರು ಮಾತನಾಡಿ, ಯೋಜನೆಯ ಎಲ್ಲ ಕಾರ್ಯಕ್ರಮಗಳು ನಮ್ಮ ಗ್ರಾಮದಲ್ಲಿ ಉತ್ತಮವಾಗಿ ಅನುಷ್ಠಾನಗೊಳ್ಳುತ್ತಿವೆ ಎಂದು ತಿಳಿಸಿದರು.

ಸಭೆಯ ಅಧ್ಯಕ್ಷತೆಯನ್ನು ಜ್ಞಾನವಿಕಾಸ ಸಮನ್ವಯಾಧಿಕಾರಿ ಮಮತಾ ವಹಿಸಿದ್ದರು. ಜ್ಞಾನವಿಕಾಸ ಸಮನ್ವಯಾಧಿಕಾರಿ ಶಾಂತಕುಮಾರಿ, ವಲಯ ಮೇಲ್ವಿಚಾರಕಿ ಶ್ಯಾಮಲಾ, ನಗರ ಆರೋಗ್ಯ ಇಲಾಖೆಯ ಗೌತಮಿ, ಸೇವಾ ಪ್ರತಿನಿಧಿ ಮಮತಾ ಹಾಗೂ ಕೇಂದ್ರದ ಸದಸ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಶಿಬಿರದಲ್ಲಿ ಸುಮಾರು 100 ಮಂದಿ ಕಣ್ಣಿನ ತಪಾಸಣೆ ಮಾಡಿಸಿಕೊಂಡರೆ, 40 ಮಂದಿ ಥೈರಾಯ್ಡ್ ಹಾಗೂ ಹೀಮೋಗ್ಲೋಬಿನ್ ಪರೀಕ್ಷೆ ಮಾಡಿಸಿಕೊಂಡರು.

Leave a Comment