ಕಿತ್ತಾಟದಲ್ಲೇ ಕಾಲಹರಣ ಮಾಡುವ ಕಾಂಗ್ರೆಸ್ಗೆ ಜನತೆ ತಕ್ಕಪಾಠ ಕಲಿಸಬೇಕು ; ಆರ್. ಅಶೋಕ್
ಶಿಕಾರಿಪುರ: ರಾಜ್ಯದ ಎಲ್ಲ ತಾಲೂಕು ಬರಗಾಲ (Drought) ಘೋಷಣೆ ಮಾಡಿದ್ದು ರೈತರು ಸಂಕಷ್ಟದಲ್ಲಿದ್ದಾರೆ. ಆದರೂ, ರಾಜ್ಯ ಸರ್ಕಾರ ಒಂದು ಪೈಸೆ ಪರಿಹಾರ ನೀಡಿಲ್ಲ ಅಧಿಕಾರಕ್ಕಾಗಿ ಪರಸ್ಪರ ಕಿತ್ತಾಟ, ಮೋದಿ ಬಗ್ಗೆ ಟೀಕೆಯಲ್ಲೇ ಕಾಲಹರಣ ಮಾಡುತ್ತಿರುವ ಸರ್ಕಾರಕ್ಕೆ ಜನತೆ ತಕ್ಕಪಾಠ ಕಲಿಸಬೇಕು ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್ (R Ashok) ಹೇಳಿದರು.
ಪಟ್ಟಣದಲ್ಲಿ ಗುರುವಾರ ಬಿಜೆಪಿ ಆಯೋಜಿಸಿದ್ದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಸಿದ್ಧರಾಮಯ್ಯ, ಡಿ.ಕೆ.ಶಿವಕುಮಾರ್ ಜೋಡೆತ್ತು ಎಂದು ಹೇಳುತ್ತಾರೆ ಆದರೆ ಎತ್ತು ಏರಿಗೆ, ಕೋಣ ನೀರಿಗೆ ಎನ್ನುವ ಸ್ಥಿತಿ ಅವರಿಬ್ಬರದ್ದಾಗಿದೆ. ಕಾಂಗ್ರೆಸ್ ಶಾಸಕರೇ ತಮ್ಮ ಕ್ಷೇತ್ರದಲ್ಲಿ ರಸ್ತೆ ರಿಪೇರಿಗೆ ಅನುದಾನ ಕೇಳಿದರೂ ಕೊಡದಷ್ಟು ರಾಜ್ಯದ ಆರ್ಥಿಕ ಸ್ಥಿತಿ ಹದಗೆಟ್ಟಿದೆ. ಮೋದಿ ಟೀಕಿಸುವ ಬದಲು ಮೊದಲು ರೈತರಿಗೆ ರಾಜ್ಯದ ಪಾಲಿನ ಬರ ಪರಿಹಾರ ಹಣ ನೀಡಬೇಕು. ಬಿ.ವೈ.ವಿಜಯೇಂದ್ರ ಹೆಲಿಕ್ಯಾಪ್ಟರ್ನಲ್ಲಿ ಬಂದು ರಾಜ್ಯಾಧ್ಯಕ್ಷ ಆಗಿಲ್ಲ ಬದಲಿಗೆ ಕಾರ್ಯಕರ್ತನಾಗಿ, ರಾಜ್ಯದ ಉಪಾಧ್ಯಕ್ಷನಾಗಿ ಸೇವೆ ಸಲ್ಲಿಸಿದ್ದು ಅವರ ಅರ್ಹತೆ ಮೇಲೆ ಅಧ್ಯಕ್ಷ ಸ್ಥಾನ ನೀಡಲಾಗಿದೆ. ಬಿ.ಎಸ್.ಯಡಿಯೂರಪ್ಪ ಅವರಿಗೆ ತಾಲೂಕಿನ ಜನತೆ ನೀಡಿದಂತೆ ಆಶೀರ್ವಾದ ಮಗನಿಗೂ ನೀಡಬೇಕು ಎಂದು ಮನವಿ ಮಾಡಿದರು.
ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್.ಯಡಿಯೂರಪ್ಪ ಮಾತನಾಡಿ, ವಿಜಯೇಂದ್ರ, ಅಶೋಕ್ ನೇತೃತ್ವದಲ್ಲಿ ಮುಂಬರುವ ಲೋಕಸಭೆ ಚುನಾವಣೆಯಲ್ಲಿ ರಾಜ್ಯದ 28 ಕ್ಷೇತ್ರವನ್ನೂ ಗೆಲ್ಲುತ್ತೇವೆ. ರಾಜ್ಯದ ರೈತರಿಗೆ ವಿದ್ಯುತ್ ನೀಡುವಲ್ಲಿ ರಾಜ್ಯ ಸರಕಾರ ವಿಫಲವಾಗಿದೆ ಮುಂಬರುವ ದಿನಗಳಲ್ಲಿ ಅದನ್ನು ಸರಿಪಡಿಸದಿದ್ದರೆ ರಾಜ್ಯದ ಎಲ್ಲೆಡೆ ಹೋರಾಟ ಹಮ್ಮಿಕೊಳ್ಳಲಾಗುವುದು. 1500ಕೋಟಿ ರೂ. ವೆಚ್ಚದಲ್ಲಿ ತಾಲೂಕಿನ 300 ಕೆರೆ ತುಂಬಿಸುವ ಯೋಜನೆಗೆ ಮೊದಲ ಕ್ಯಾಬಿನೆಟ್ ಸಭೆಯಲ್ಲೆ ಒಪ್ಪಿಗೆ ನೀಡಿ ದಾಖಲೆ ಅವಧಿಯಲ್ಲಿ ಕಾಮಗಾರಿ ಪೂರ್ಣಗೊಳಿಸಿದ್ದೇನೆ. ಕೇಂದ್ರ ಬಿಜೆಪಿ ಸರ್ಕಾರದ ಸಾಧನೆ ಪ್ರತಿಮನೆಗೆ ಮುಟ್ಟಿಸುವ ಕೆಲಸ ಪಕ್ಷದ ಕಾರ್ಯಕರ್ತರು ಮಾಡಬೇಕು. ಎಲ್ಲ ವರ್ಗದ ಜನರನ್ನೂ ಪಕ್ಷದೊಂದಿಗೆ ಕರೆದುಕೊಂಡು ಹೋಗುವುದಕ್ಕೆ ಅದ್ಯತೆ ನೀಡಬೇಕು ಎಂದರು.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಮಾತನಾಡಿ, ಪಕ್ಷದ ರಾಜ್ಯಾಧ್ಯಕ್ಷ ಆದ ನಂತರ ಈಶ್ವರಪ್ಪ ಸೇರಿದಂತೆ ಎಲ್ಲ ಹಿರಿಯರ ಆಶೀರ್ವಾದ ಪಡೆದಿದ್ದೇನೆ. ತಾಲೂಕಿನ ಜನತೆ ನನಗೆ ಮತ ನೀಡಿ ಗೆಲ್ಲಿಸಿದ್ದಕ್ಕಾಗಿ ರಾಜ್ಯದ ಅಧ್ಯಕ್ಷನಾಗುವುದಕ್ಕೆ ಸಾಧ್ಯವಾಯಿತು. ಲೋಕಸಭೆ ಚುನಾವಣೆ ಆಗುವವರೆಗೂ ಒಂದು ದಿನವೂ ಮನೆಯಲ್ಲಿ ಕೂರದೆ ಪಕ್ಷದ ಸಂಘಟನೆಯಲ್ಲಿ ತೊಡಗುವಂತೆ ಬಿಎಸ್ವೈ ಹೇಳಿದ್ದಾರೆ ಅದರಂತೆ ಪಕ್ಷದ ಸಂಘಟನೆ ಮಾಡುತ್ತಿದ್ದೇನೆ. ಆರ್.ಅಶೋಕ್ ನಾನು ಇಬ್ಬರೂ ಸೇರಿ ರಾಜ್ಯದ ಎಲ್ಲೆಡೆ ಪ್ರವಾಸ ಮಾಡಿ ಪಕ್ಷದ 28 ಸಂಸದರು ಗೆಲ್ಲುವಂತೆ ಮಾಡುತ್ತೇವೆ. ಭ್ರಷ್ಟಾಚಾರದಲ್ಲಿ ಮುಳುಗಿರುವ ರಾಜ್ಯ ಸರ್ಕಾರ ಬರಗಾಲದಲ್ಲೂ ರೈತರ ಕತ್ತುಹಿಸುಕುವ ಕೆಲಸ ಮಾಡುತ್ತಿದೆ ಅದಕ್ಕೆ ತಕ್ಕಪಾಠ ಕಲಿಸಬೇಕು. ತಾಲೂಕಿನಲ್ಲಿ ಕಾಂಗ್ರೆಸ್ ಪುಡಾರಿಗಳ ಆರ್ಭಟ ಜಾಸ್ತಿ ಆಗುತ್ತಿದೆ. ಸಂಸತ್ ಚುನಾವಣೆ ನಂತರ ಕಾಂಗ್ರೆಸ್ ಟೈರ್ ಪಂಚರ್ ಆಗುತ್ತದೆ ಎಂದು ಎಚ್ಚರಿಕೆ ನೀಡಿದರು. ಮುಂಬರುವ ಅಧಿವೇಶನದಲ್ಲಿ ಸರಕಾರದ ಕಿವಿ ಹಿಂಡಿ ಎಚ್ಚರಿಸುವ ಕೆಲಸ ಮಾಡುತ್ತೇವೆ ಎಂದು ಭರವಸೆ ನೀಡಿದರು.
ಸಭಾ ಕಾರ್ಯಕ್ರಮಕ್ಕೂ ಮುನ್ನ ಪಟ್ಟಣದ ಪ್ರಮುಖ ಬೈಕ್ ರ್ಯಾಲಿ ನಡೆಯಿತು. ಸಂಸದ ರಾಘವೇಂದ್ರ, ಜಿಲ್ಲಾಧ್ಯಕ್ಷ ಮೇಘರಾಜ್, ಆರಗ ಜ್ಞಾನೇಂದ್ರ, ಹರತಾಳು ಹಾಲಪ್ಪ, ಬಿ.ಸಿ.ಪಾಟೀಲ್, ರೇವಣಪ್ಪ, ಕೆ.ಎಸ್.ಗುರುಮೂರ್ತಿ, ಕೆ.ಹಾಲಪ್ಪ, ಎಚ್.ಟಿ.ಬಳಿಗಾರ್, ಬಿ.ಡಿ.ಭೂಕಾಂತ್, ರೇಣುಕಾಚಾರ್ಯ ಇತರರಿದ್ದರು.