ಶಿಕ್ಷಣ ಇಲಾಖೆಯ ಹೊಸ ಯೋಜನೆಗಳ ಉದ್ಘಾಟನೆಗೆ ಸಿಎಂ ಸಿದ್ಧರಾಮಯ್ಯ ಶೀಘ್ರ ಶಿವಮೊಗ್ಗಕ್ಕೆ: ಮಧು ಬಂಗಾರಪ್ಪ

Written by Koushik G K

Published on:

ಶಿವಮೊಗ್ಗ: ಗುಣಾತ್ಮಕ ಶಿಕ್ಷಣ ನೀಡುವ ಉದ್ದೇಶದಿಂದ ಶಿಕ್ಷಣ ಇಲಾಖೆ ರೂಪಿಸಿರುವ ವಿವಿಧ ಯೋಜನೆಗಳ ಉದ್ಘಾಟನೆಗಾಗಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ನವೆಂಬರ್ ತಿಂಗಳಲ್ಲಿ ಶಿವಮೊಗ್ಗಕ್ಕೆ ಆಗಮಿಸಲಿದ್ದಾರೆ ಎಂದು ರಾಜ್ಯ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಮಧು ಬಂಗಾರಪ್ಪ ಅವರು ತಿಳಿಸಿದ್ದಾರೆ.

WhatsApp Group Join Now
Telegram Group Join Now
Instagram Group Join Now
📢 Stay Updated! Join our WhatsApp Channel Now →

ಅವರು ಇಂದು ತಮ್ಮ ಕಚೇರಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ, ರೂ.3000 ಕೋಟಿಗಳ ಅಂದಾಜು ವೆಚ್ಚದ “ಕರ್ನಾಟಕ ಪಬ್ಲಿಕ್ ಶಾಲೆ” ಯೋಜನೆಗೆ ಶಿವಮೊಗ್ಗದಲ್ಲಿಯೇ ಚಾಲನೆ ದೊರೆಯಲಿರುವುದು ರಾಜ್ಯಕ್ಕೆ ಗೌರವದ ಸಂಗತಿ ಎಂದರು.ಈ ಮೊದಲು ಯುವನಿಧಿ ಯೋಜನೆಯನ್ನೂ ಮುಖ್ಯಮಂತ್ರಿ ಅವರು ಸಚಿವ ಸಂಪುಟದ ಸದಸ್ಯರ ಸಮ್ಮುಖದಲ್ಲಿ ಉದ್ಘಾಟಿಸಿದ್ದರು ಎಂದರು.

13,000 ಹೊಸ ಶಿಕ್ಷಕರ ನೇಮಕಾತಿ

ಸಚಿವ ಮಧು ಬಂಗಾರಪ್ಪ ಅವರು ಮುಂದುವರಿದು ಮಾತನಾಡುತ್ತಾ, ರಾಜ್ಯದ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿನ ಶಿಕ್ಷಕರ ಕೊರತೆಯನ್ನು ನಿವಾರಿಸಲು ಸರ್ಕಾರವು 13,000 ಹೊಸ ಶಿಕ್ಷಕರ ನೇಮಕಾತಿ ಪ್ರಕ್ರಿಯೆ ಆರಂಭಿಸಿದೆ ಎಂದರು.ಅರ್ಹ ಪದವೀಧರರಿಗೆ ಡಿಸೆಂಬರ್ 7ರಂದು ಶಿಕ್ಷಕರ ಅರ್ಹತಾ ಪರೀಕ್ಷೆ (TET) ನಡೆಸಲಾಗುವುದಾಗಿ ತಿಳಿಸಿದ್ದಾರೆ.ಇದರ ಅಧಿಸೂಚನೆ ಅಕ್ಟೋಬರ್ 23ರಂದು ಪ್ರಕಟವಾಗಲಿದ್ದು, ಅಭ್ಯರ್ಥಿಗಳು ನವೆಂಬರ್ 9ರೊಳಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು ಎಂದು ತಿಳಿಸಿದ್ದಾರೆ.

ಪ್ರಸ್ತುತ ಕೊರತೆಯನ್ನು ತಾತ್ಕಾಲಿಕವಾಗಿ ಪೂರೈಸಲು ಅತಿಥಿ ಶಿಕ್ಷಕರನ್ನು ಕೂಡ ನೇಮಿಸಲಾಗಿದ್ದು, ವಿದ್ಯಾರ್ಥಿಗಳ ಪಾಠ್ಯಕ್ರಮದಲ್ಲಿ ವ್ಯತ್ಯಯವಾಗದಂತೆ ಕ್ರಮ ಕೈಗೊಳ್ಳಲಾಗಿದೆ.ಈ ಹೊಸ ನೇಮಕಾತಿಯೊಂದಿಗೆ ಸರ್ಕಾರದ ಅವಧಿಯಲ್ಲಿ ಒಟ್ಟು 26,000ಕ್ಕೂ ಹೆಚ್ಚು ಶಿಕ್ಷಕರು ನೇಮಕಾತಿಯಾಗಲಿದ್ದಾರೆ ಎಂದರು.

ಎಸ್.ಎಸ್.ಎಲ್.ಸಿ ಉತ್ತೀರ್ಣ ಪ್ರಮಾಣ ಮರುನಿಗಧಿ

ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಉತ್ತೀರ್ಣಗೊಳ್ಳಲು ಅಗತ್ಯವಿರುವ ಅಂಕಗಳನ್ನು 33 ಶೇಕಡಕ್ಕೆ ಮರುನಿಗಧಿಪಡಿಸಲಾಗಿದೆ ಎಂದು ಸಚಿವರು ಹೇಳಿದರು.ಈ ಕ್ರಮಕ್ಕೆ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದು ಅವರು ಹೇಳಿದರು.

ಕರ್ನಾಟಕ ಪಬ್ಲಿಕ್ ಶಾಲೆಗಳ ವಿಸ್ತರಣೆ

ರಾಜ್ಯದಲ್ಲಿ ಗುಣಾತ್ಮಕ ಶಿಕ್ಷಣ ನೀಡಲು ಪ್ರಾರಂಭಿಸಲಾದ ಕರ್ನಾಟಕ ಪಬ್ಲಿಕ್ ಶಾಲೆಗಳ ಸಂಖ್ಯೆಯನ್ನು 500ರಿಂದ 800ಕ್ಕೆ ಹೆಚ್ಚಿಸಲಾಗಿದೆ, ಇದರಲ್ಲಿ 200 ಶಾಲೆಗಳನ್ನು ಕಲ್ಯಾಣ ಕರ್ನಾಟಕ ಭಾಗಕ್ಕೆ ಮೀಸಲಿಡಲಾಗಿದೆ.ಇದರಿಂದಾಗಿ ಮಂಗಳೂರು ಮತ್ತು ಉಡುಪಿ ಜಿಲ್ಲೆಗಳಷ್ಟೇ ಅಲ್ಲದೆ ರಾಜ್ಯದ ಇತರ ಜಿಲ್ಲೆಗಳಲ್ಲಿಯೂ ಉತ್ತಮ ಶಿಕ್ಷಣ ಸೌಲಭ್ಯ ವಿಸ್ತರಿಸಲಾಗುತ್ತದೆ ಎಂದು ಸಚಿವರು ಹೇಳಿದರು.

ಈ ಯೋಜನೆಯಡಿ ವಿದ್ಯಾರ್ಥಿಗಳಿಗೆ:

  • ಉಚಿತ ಪ್ರಯಾಣ ಸೌಲಭ್ಯ,
  • ಒಂದೇ ಆವರಣದಲ್ಲಿ 14 ವರ್ಷದವರೆಗೆ ಪೂರ್ಣ ಶಿಕ್ಷಣ,
  • 1ರಿಂದ 5ನೇ ತರಗತಿಯವರೆಗೆ ಕನ್ನಡ ಕಡ್ಡಾಯ,
  • ದ್ವಿಭಾಷಾ ಕಲಿಕೆ ಹಾಗೂ
  • 6ನೇ ತರಗತಿಯ ನಂತರ ಮಾಧ್ಯಮ ಆಯ್ಕೆಯ ಅವಕಾಶ ಇರುತ್ತದೆ.

ಈ ಶಾಲೆಗಳನ್ನು ಸಂಪೂರ್ಣವಾಗಿ ಸ್ಮಾರ್ಟ್ ಶಾಲೆಗಳಾಗಿ ಅಭಿವೃದ್ಧಿಪಡಿಸಲಾಗುವುದು, ಮತ್ತು ಶಾಸಕರ ಅಧ್ಯಕ್ಷತೆಯಲ್ಲಿ ಆಡಳಿತ ಮಂಡಳಿಯನ್ನು ರಚಿಸಿ ನಿರ್ವಹಣೆ ಮಾಡಲಾಗುತ್ತದೆ ಎಂದರು.

‘ಮೊಬೈಲ್ ಬಿಡಿ, ಪುಸ್ತಕ ಹಿಡಿ’ ಯೋಜನೆ ಶೀಘ್ರ ಲೋಕಾರ್ಪಣೆ

ಸಚಿವರು ಮತ್ತಷ್ಟು ಹೇಳಿದರು — “ಮೊಬೈಲ್ ಬಿಡಿ, ಪುಸ್ತಕ ಹಿಡಿ” ಸೇರಿದಂತೆ ಹಲವು ನೂತನ ಶೈಕ್ಷಣಿಕ ಯೋಜನೆಗಳನ್ನು ಮಕ್ಕಳ ದಿನಾಚರಣೆಯಂದು ಲೋಕಾರ್ಪಣೆ ಮಾಡುವ ಉದ್ದೇಶವಿದೆ.
ಶಿವಮೊಗ್ಗ ಜಿಲ್ಲೆಯ 19 ಕರ್ನಾಟಕ ಪಬ್ಲಿಕ್ ಶಾಲೆಗಳಿಗೆ ಈಗಾಗಲೇ ಹಂಚಿಕೆ ನೀಡಲಾಗಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಶಾಲೆಗಳ ಹಂಚಿಕೆ ನಡೆಯಲಿದೆ ಎಂದು ತಿಳಿಸಿದರು.

ಸಮೀಕ್ಷಾ ಪ್ರಗತಿ ಮತ್ತು ಶಿಕ್ಷಣೇತರ ಸಿಬ್ಬಂದಿ ನಿಯೋಜನೆ

ರಾಜ್ಯ ಸರ್ಕಾರದ ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ ಶಿವಮೊಗ್ಗ ಜಿಲ್ಲೆ 91.29% ಪ್ರಗತಿ ಸಾಧಿಸಿದೆ ಎಂದು ಸಚಿವರು ತಿಳಿಸಿದರು.
ಸಮೀಕ್ಷಾ ಕಾರ್ಯಕ್ಕೆ ನಿಯೋಜಿಸಿದ್ದ ಶಿಕ್ಷಕರನ್ನು ಪಾಠ್ಯ ಚಟುವಟಿಕೆಗೆ ಹಿಂತಿರುಗಿಸಲಾಗಿದ್ದು, ಉಳಿದ ಕಾರ್ಯಗಳಿಗೆ ಶಿಕ್ಷಣೇತರ ಇಲಾಖೆಯ ಸಿಬ್ಬಂದಿಯನ್ನು ನಿಯೋಜಿಸಲಾಗುವುದು ಎಂದರು.

ಗ್ರಾಮೀಣ ಕ್ರೀಡೆಗಳ ಪುನರುತ್ಥಾನ

ಮಕ್ಕಳ ದೈಹಿಕ ಹಾಗೂ ಮಾನಸಿಕ ವಿಕಾಸಕ್ಕೆ ಪೂರಕವಾಗಿರುವ ಚಿನ್ನಿದಾಂಡು, ಲಗೋರಿ, ಬುಗುರಿ ಮುಂತಾದ ಗ್ರಾಮೀಣ ಕ್ರೀಡೆಗಳನ್ನು ಪಠ್ಯೇತರ ಚಟುವಟಿಕೆಗಳ ರೂಪದಲ್ಲಿ ಶಾಲೆಗಳಲ್ಲಿ ಪುನರುತ್ಥಾನಗೊಳಿಸಲಾಗುವುದು ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಆರ್. ಪ್ರಸನ್ನಕುಮಾರ್, ರಮೇಶ್ ಶೆಟ್ಟಿ, ಕಲಗೋಡು ರತ್ನಾಕರ್, ಆಯನೂರು ಮಂಜುನಾಥ್, ಹಾಲಪ್ಪ, ವೈ.ಹೆಚ್. ನಾಗರಾಜ್ ಮತ್ತಿತರರು ಉಪಸ್ಥಿತರಿದ್ದರು.

ರಿಪ್ಪನ್‌ಪೇಟೆ ; ಗ್ರಾಮ ದೇವರ ಹಿತ್ತಾಳೆ, ಪಂಚಲೋಹದ ಮೂರ್ತಿಗಳ ಕಳವು, ದೂರು ದಾಖಲು

Leave a Comment