Chikkamagaluru | ದತ್ತ ಜಯಂತಿಗೆ ಅಧಿಕೃತ ಚಾಲನೆ, ಸಿ.ಟಿ ರವಿ, ಶೋಭಾ ಕರಂದ್ಲಾಜೆ ಭಾಗಿ
ಚಿಕ್ಕಮಗಳೂರು: ಜಿಲ್ಲೆಯಲ್ಲಿ ಇಂದಿನಿಂದ ವಿಶ್ವ ಹಿಂದೂ ಪರಿಷತ್, ಬಜರಂಗದಳದಿಂದ ಮೂರು ದಿನಗಳ ಕಾಲ ನಡೆಯಲಿರುವ ದತ್ತ ಜಯಂತಿ ಅಧಿಕೃತವಾಗಿ ಚಾಲನೆ ಪಡೆದುಕೊಂಡಿದ್ದು, ನಗರದಲ್ಲಿ ಮಹಿಳೆಯರಿಂದ ಸಂಕೀರ್ತನಾ ಯಾತ್ರೆ ನಡೆಯಿತು.
ನಗರದ ಬೋಳರಾಮೇಶ್ವರ ದೇವಸ್ಥಾನದಿಂದ ಪಾಲಿಟೆಕ್ನಿಕ್ ಕಾಲೇಜು ವೃತ್ತದವರೆಗೂ ಭವ್ಯ ಮೆರವಣಿಗೆ ನಡೆಸಿದರು.
ಭಾನುವಾರ ಬೆಳಿಗ್ಗೆ ಜಿಲ್ಲಾದ್ಯಂತ ಆಗಮಿಸಿದ ಮಹಿಳೆಯರು ನಗರದ ಬೋಳರಾಮೇಶ್ವರ ದೇವಸ್ಥಾನ ಆವರಣದಲ್ಲಿ ಜಮಾಯಿಸಿದರು. ದತ್ತಮೂರ್ತಿ ಯುಳ್ಳ ಅಡ್ಡೆಯೊಂದಿಗೆ ಬೋಳರಾಮೇಶ್ವರ ದೇವಸ್ಥಾನ, ಐ.ಜಿ.ರಸ್ತೆ ಮೂಲಕ ಮಲ್ಲಂದೂರು ವೃತ್ತ, ಎಂ.ಇ.ಎಸ್ ವೃತ್ತದಿಂದ ಪಾಲಿಟೆಕ್ನಿಕ್ ವೃತ್ತದವರೆಗೂ ಮೆರವಣಿಗೆ ನಡೆಯಿತು. ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದ ಮಹಿಳೆಯರು ಕೈಯಲ್ಲಿ ಭಾಗವಧ್ವಜ ಹಿಡಿದು, ಕೆಸರಿ ಶಾಲು ದತ್ತಾತ್ರೇಯ ದೇವರ ಫೋಟೋ ಹಿಡಿದು ಮೆರವಣಿಗೆಯಲ್ಲಿ ಸಾಗಿದರು.
ಮೆರವಣಿಗೆ ಉದ್ದಕ್ಕೂ ದತ್ತಾತ್ರೇಯ ಭಜನೆ, ಕೀರ್ತನೆ ಹಾಗೂ ದತ್ತಾತ್ರೇಯ ಸ್ವಾಮಿಗೆ ಜೈಕಾರ ಹಾಕಿದರು. ದತ್ತಾತ್ರೇಯ ಸ್ವಾಮಿಯ ಹಾಡಿಗೆ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದ ಕೆಲ ಮಹಿಳೆಯರು ಹೆಜ್ಜೆ ಹಾಕಿದರು.
ಸಂಕೀರ್ತನಾ ಯಾತ್ರೆ ಪಾಲಿಟೆಕ್ನಿಕ್ ಕಾಲೇಜು ಆವರಣ ತಲುಪುತ್ತಿದ್ದಂತೆ ಇಲ್ಲಿಂದ ವಾಹನದಲ್ಲಿ ದತ್ತಪೀಠಕ್ಕೆ ತೆರಳಿದರು. ಸಂಕೀರ್ತನಾ ಯಾತ್ರೆಯಲ್ಲಿ ಜಿಲ್ಲೆ ಸೇರಿದಂತೆ ಹೊರ ಜಿಲ್ಲೆಗಳಿದಂದ ಆಗಮಿಸಿದ್ದ ಮಹಿಳೆಯರು ಪಾಲ್ಗೊಂಡಿದ್ದರು. ಮಾಜಿ ಶಾಸಕ ಸಿ.ಟಿ.ರವಿ, ಕೇಂದ್ರ ಕೃಷಿ ಹಾಗೂ ರೈತ ಕಲ್ಯಾಣ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಸೇರಿದಂತೆ ಅನೇಕರು ಭಾಗವಹಿಸಿದ್ದರು. ಕೆಲವರು ಸ್ವಂತ ವಾಹನದಲ್ಲಿ ತೆರಳಿದರೆ, ಇತರರು ಬೇರೆ ಬೇರೆ ವಾಹನಗಳಲ್ಲಿ ತೆರಳಿದರು.
ದತ್ತಪೀಠಕ್ಕೆ ತೆರಳಿದ ಕೆಲ ಮಹಿಳೆಯರು ಹೊನ್ನಮ್ಮನ ಮಿಂದು ಕಾಲ್ನಡಿಗೆಯಲ್ಲಿ ದತ್ತಪೀಠಕ್ಕೆ ತೆರಳಿ ಸರಥಿ ಕಬ್ಬಿಣದ ಗ್ಯಾಲರಿಯಲ್ಲಿ ಸಾಲಿನಲ್ಲಿ ನಿಂತು ದತ್ತಗುಹೆ ಪ್ರವೇಶಿದ ಮಹಿಳೆಯರು ದತ್ತಪಾದುಕೆ ದರ್ಶನ ಪಡೆದರು. ನಂತರ ಗುಹೆ ಹೊರಭಾಗದ ಶೆಡ್ ನಲ್ಲಿ ನಡೆದ ಹೋಮ ಹವನಗಳಲ್ಲಿ ಪಾಲ್ಗೊಂಡರು.
ಬೀಗಿ ಪೊಲೀಸ್ ಬಂದೋಬಸ್ತ್
“ದತ್ತಜಯಂತಿ ಅಂಗವಾಗಿ ಮಹಿಳೆಯರಿಂದ ನಡೆಸ ಸಕೀರ್ತನಾ ಯಾತ್ರೆ ಹಿನ್ನಲೆಯಲ್ಲಿ ಚಿಕ್ಕಮಗಳೂರು ನಗರ ಸೇರಿದಂತೆ ಜಿಲ್ಲಾದ್ಯಂತ ಪೊಲೀಸ್ ಇಲಾಖೆಯಿಂದ ಕಟ್ಟೆಚ್ಚರ ವಹಿಸಲಾಗಿತ್ತು. ಸೂಕ್ಷ್ಮ ಪ್ರದೇಶ ಹಾಗೂ ಅತೀ ಸೂಕ್ಷ್ಮ ಪ್ರದೇಶಗಳಲ್ಲಿ ಹೆಚ್ಚಿನ ಸಂಖ್ಯೆಯ ಪೊಲೀಸ್ ಸಿಬ್ಬಂದಿಗಳನ್ನು ನಿಯೋಜಿಸಲಾಗಿತ್ತು. ನಗರದ ಪ್ರಮುಖ ವೃತ್ತಗಳಲ್ಲಿ ಡಿಎಆರ್ ತುಕಡಿಗಳನ್ನು ನಿಯೋಜಿಸಲಾಗಿತ್ತು. ಜಿಲ್ಲಾದ್ಯಂತ 28 ಚೆಕ್ ಪೋಸ್ಟ್ಗಳನ್ನು ತೆರೆಯಲಾಗಿದ್ದು, ಪ್ರತೀ ವಾಹನವನ್ನುತಪಾಸಣೆ ನಡೆಸಿ ಬಿಡಲಾಗುತ್ತಿತ್ತು. ದತ್ತಪೀಠ ಸೇರಿದಂತೆ ದತ್ತಪೀಠಕ್ಕೆ ತೆರಳುವ ಮಾರ್ಗದುದ್ದಕ್ಕೂ ಪೊಲೀಸ್ ಸಿಬ್ಬಂದಿಗಳನ್ನು ನಿಯೋಜಿಸಲಾಗಿತ್ತು.”
ಕೇಸರಿ ಬಾವುಟಗಳಿಂದ ಅಲಂಕಾರ
ದತ್ತ ಜಯಂತಿ ಹಿನ್ನಲೆಯಲ್ಲಿ ನಗರದ ಹನುಮಂತಪ್ಪವೃತ್ತ ಸೇರಿದಂತೆ ಎಂ.ಜಿ.ರಸ್ತೆ, ಆಜಾದ್ ಪಾರ್ಕ್ ವೃತ್ತ, ಬಸವನಹಳ್ಳ ಮುಖ್ಯ ರಸ್ತೆ ಸೇರಿದಂತೆ ಇತರೆ ರಸ್ತೆಗಳನ್ನು ಕೇಸರಿ ಬಾವುಟಗಳಿಂದ ಅಲಂಕರಿಸಲಾಗಿದೆ.