ಹೊಂಬುಜ ; “ಭಾರತೀಯ ಧರ್ಮ ಪರಂಪರೆ ಮತ್ತು ಸಂಸ್ಕೃತಿಯಲ್ಲಿ ಮಕರ ಸಂಕ್ರಮಣ ಪರ್ವಾಚರಣೆಯು ನವವರ್ಷಾರಂಭದ ಸಂಕೇತವೂ ಆಗಿದೆ. ಸೂರ್ಯನ ಪ್ರಖರ ಕಿರಣಗಳು ಭೂ ಮಂಡಲದ ಪ್ರಕೃತಿ-ಹೊಲ-ತೋಟಗಳಿಗೆ ಬೆಳೆಗಳು ಸಮೃದ್ಧವಾಗಿ ಬೆಳೆಯಲು ಮಕರ ಸಂಕ್ರಾಂತಿಯ ನಂತರದ ಉತ್ತರಾಯಣ ಕಾಲವು ಪೂರಕವಾಗಿದೆ ಎಂಬುದನ್ನು ಪ್ರಸಕ್ತ ಯುವ ಪೀಳಿಗೆಯವರು ಅರಿತುಕೊಳ್ಳಬೇಕು” ಎಂದು ಹೊಂಬುಜ ಶ್ರೀಜೈನ ಮಠದ ಪೀಠಾಧೀಶರಾದ ಪರಮಪೂಜ್ಯ ಜಗದ್ಗುರು ಸ್ವಸ್ತಿಶ್ರೀ ಡಾ. ದೇವೇಂದ್ರಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮಿಗಳವರು ಕುಂದಾದ್ರಿ ಶ್ರೀ 1008 ಪಾರ್ಶ್ವನಾಥ ಸ್ವಾಮಿ ಶ್ರೀ ಪದ್ಮಾವತಿ ದೇವಿ ಹಾಗೂ ಆಚಾರ್ಯ ಶ್ರೀ ಕುಂದಕುಂದಾಚಾರ್ಯರ ಪಾದ-ಚರಣಗಳ ಸಾನಿಧ್ಯದಲ್ಲಿ ಭಕ್ತಿಪೂರ್ವಕ ಪೂಜೆ ಸಲ್ಲಿಸಿ ಅನುಗ್ರಹ ಪ್ರವಚನದಲ್ಲಿ ತಿಳಿಸಿದರು.
ಶ್ರೀಕ್ಷೇತ್ರ ಕುಂದಾದ್ರಿಯ ಪರಿಸರವು ಜೀವವೈವಿಧ್ಯತೆಯ ಪ್ರಮುಖ ಕೇಂದ್ರವಾಗಿದ್ದು, ಔಷಧೀಯ ಸಸ್ಯ ಜೀವಿಗಳ ಸಂರಕ್ಷಣೆ-ಸಂಶೋಧನೆಗಳು ನಡೆಯುತ್ತಿದೆ ಎಂದು ಸ್ವಸ್ತಿಶ್ರೀಗಳವರು ಆಚಾರ್ಯ ಶ್ರೀ ಕುಂದಕುಂದರವರ ಧ್ಯಾನ, ಅಧ್ಯಯನ ಹಾಗೂ ಗಿಡಮೂಲಿಕೆಗಳಿಂದ ಅಮೂಲ್ಯ ಔಷಧಗಳನ್ನು ಸಿದ್ಧಪಡಿಸಿದ ಕುರಿತು ತಿಳಿಸಿದರು.

ಶ್ರೀ ಕಲಿಕುಂಡ ಯಂತ್ರಾರಾಧನೆ ಏರ್ಪಡಿಸಲಾಗಿತ್ತು. ಶಿವಮೊಗ್ಗ, ಹಾಸನ, ಚಿಕ್ಕಮಗಳೂರು, ಉಡುಪಿ, ಮಂಗಳೂರು, ವಿಜಯಪುರ ಹಾಗೂ ಸುತ್ತಮುತ್ತಲಿನ ಗ್ರಾಮಗಳಿಂದ ಭಕ್ತರು ಆಗಮಿಸಿದ್ದರು.
ಶ್ರೀ ಪಾರ್ಶ್ವನಾಥ ಸ್ವಾಮಿ ಜನ್ಮಾಭಿಷೇಕ-ನಾಮಕರಣ-ತಪಃಕಲ್ಯಾಣಗಳ ಸುದಿನ ಪ್ರಯುಕ್ತ ವಿಶೇಷ ಪೂಜಾ ವಿಧಿಗಳು ನೆರವೇರಿಸಲಾಯಿತು. ಜಯಶ್ರೀ ಹೊರನಾಡು ಅವರಿಂದ ಜಿನಭಕ್ತಿಗೀತೆ, ಜಿನಸ್ತೋತ್ರ ಸಂಗೀತದ ಹಿನ್ನೆಲೆಯ ಗಾಯನವು ಭಕ್ತವೃಂದದವರಿಗೆ ಮುದನೀಡಿತು.
ಹೊಂಬುಜ ಮಹಿಳಾ ಸಮಾಜದವರಿಂದ ಹಾಗೂ ಮಕ್ಕಿಮನೆ ಸುದೇಶ ತಂಡದವರಿಂದ ಜಿನಭಜನೆ ಕಾರ್ಯಕ್ರಮ ನೆರವೇರಿತು.
ಶೃಂಗೇರಿಯ ಡಾ. ನಿರಂಜನ ಕುಮಾರ್, ಕಾರ್ಕಳ ಜೈನ ಮಿಲನ್, ಮಾಜಿ ಸಚಿವ ಕಿಮ್ಮನೆ ರತ್ನಾಕರ, ತೀರ್ಥಹಳ್ಳಿ ವೈದ್ಯರಾದ ಡಾ. ಜೀವಂಧರ ಜೈನ್, ರತ್ನಕುಮಾರ್, ಯಶೋಧರ ಹೆಗ್ಡೆ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಮಧುಸೂದನ್ ಇನ್ನಿತರರು ಇನ್ನಿತರರು ಉಪಸ್ಥಿತರಿದ್ದರು.
ಶ್ರೀಗಳವರು ಸರ್ವರಿಗೂ ಫಲ ಮಂತ್ರಾಕ್ಷಣೆ ನೀಡಿ ಹರಸಿದರು. ಪುರೋಹಿತ ಶಾಂತಿರಾಜ ಇಂದ್ರರು, ಸಹಪುರೋಹಿತರು ಪೂಜಾ ವಿಧಿ-ವಿಧಾನಗಳನ್ನು ನೆರವೇರಿಸಿದರು.
ಆಡಳಿತಾಧಿಕಾರಿ ಸಿ.ಡಿ. ಅಶೋಕ ಕುಮಾರ್ ಹಾಗೂ ಹೊಂಬುಜ ಶ್ರೀ ಜೈನ ಮಠದ ಸೇವಾಕಾಂಕ್ಷಿ ಸೇವಕರು ಅಚ್ಚುಕಟ್ಟಿನಿಂದ ರಾತ್ರಿಯಲ್ಲಿ ದೀಪೋತ್ಸವ ನೆರವೇರಿಸಿದರು. ಅನ್ನಪ್ರಸಾದ ವ್ಯವಸ್ಥೆ ಅಚ್ಚುಕಟ್ಟಿನಿಂದ ಮಾಡಲಾಗಿತ್ತು.

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್ಸೈಟ್ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 7 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್ಸೈಟ್ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ ‘ಮಲ್ನಾಡ್ ಟೈಮ್ಸ್’ ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ.





