ರಾಜ್ಯ ಸರ್ಕಾರವು ಹವ್ಯಕ ಭಾಷಾ ಅಕಾಡೆಮಿ ಸ್ಥಾಪನೆಗೆ ಮುಂದಾಗಿರುವ ನಿರ್ಧಾರವನ್ನು ಶ್ರೀರಾಮಚಂದ್ರಾಪುರ ಮಠ ಸ್ವಾಗತಿಸಿದ್ದು, ಈ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಅಭಿನಂದನೆಗಳನ್ನು ಸಲ್ಲಿಸಿದೆ.
ಭಾಷೆ ಮತ್ತು ಸಂಸ್ಕೃತಿಗೆ ಅನ್ಯೋನ್ಯ ಸಂಬಂಧವಿದ್ದು, ಭಾಷೆಯನ್ನು ಉಳಿಸಿ ಬೆಳಸುವ ಮೂಲಕ ಸಂಸ್ಕೃತಿಯನ್ನೂ ಸಂರಕ್ಷಿಸಬಹುದು. ಪ್ರಾಂತ್ಯವಾರು ವೈವಿಧ್ಯತೆ ಹಾಗೂ ಅನೇಕ ವೈಶಿಷ್ಟ್ಯಗಳನ್ನು ಹೊಂದಿರುವ ಹವಿಗನ್ನಡ (ಹವ್ಯಕ ಭಾಷೆ) ಸಂವರ್ಧನೆಗಾಗಿ ಸರ್ಕಾರ ಕೈಗೊಂಡಿರುವ ಈ ನಿರ್ಧಾರ ಶ್ಲಾಘನೀಯವಾಗಿದೆ ಎಂದು ಶ್ರೀಮಠ ಪ್ರಕಟಣೆಯಲ್ಲಿ ತಿಳಿಸಿದೆ.
ಮಾತೃಭಾಷೆಯ ಉಳಿವು ಮತ್ತು ಜಾಗೃತಿಗಾಗಿ ಕಳೆದ ವರ್ಷ ಪರಮಪೂಜ್ಯ ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ತಮ್ಮ ಚಾತುರ್ಮಾಸ್ಯವನ್ನು **‘ಸ್ವಾಭಾಷಾ ಚಾತುರ್ಮಾಸ್ಯ’**ವಾಗಿ ಆಚರಿಸಿ, ನಾಡಿನಾದ್ಯಂತ ಭಾಷಾ ಜಾಗೃತಿ ಮೂಡಿಸಿದ್ದನ್ನು ಶ್ರೀಮಠ ಸ್ಮರಿಸಿದೆ.
ಕನ್ನಡದ ಉಪಭಾಷೆಯಾಗಿರುವ ಹವಿಗನ್ನಡದ ಸಂರಕ್ಷಣೆಗೆ ಸರ್ಕಾರವೇ ಮುಂದಾಗಿರುವುದು ಸಂತಸದ ವಿಚಾರವಾಗಿದ್ದು, ಅಕಾಡೆಮಿ ಸ್ಥಾಪನೆಯ ಮೂಲಕ ಭಾಷೆಯ ಉಳಿವು, ಬೆಳವಣಿಗೆ ಹಾಗೂ ಅದರ ಅಧ್ಯಯನ ಮತ್ತು ಸಂಶೋಧನೆಗೆ ಹೊಸ ಉತ್ತೇಜನ ಸಿಗಲಿದೆ ಎಂದು ಮಠ ಆಶಿಸಿದೆ.
ಇದಲ್ಲದೆ, ಅಕಾಡೆಮಿಯ ಮೂಲಕ ಹವ್ಯಕ ಭಾಷೆಯ ಪ್ರಚಾರ ಹಾಗೂ ಯುವಪೀಳಿಗೆಗೆ ಅದರ ಮಹತ್ವವನ್ನು ಪರಿಚಯಿಸುವ ಕಾರ್ಯಗಳು ಇನ್ನಷ್ಟು ವೇಗ ಪಡೆಯಲಿವೆ ಎಂದು ಶ್ರೀಮಠ ವಿಶ್ವಾಸ ವ್ಯಕ್ತಪಡಿಸಿದೆ.
ಭಾಷಾ ಉಳಿವಿನ ಈ ಕಾರ್ಯಕ್ಕೆ ಮುನ್ನುಡಿ ಬರೆದ ಅಖಿಲ ಹವ್ಯಕ ಮಹಾಸಭೆ ಹಾಗೂ ಸಹಕಾರ ನೀಡಿದ ಎಲ್ಲರಿಗೂ ಶ್ರೀರಾಮಚಂದ್ರಾಪುರ ಮಠವು ಶುಭಾಶಯಗಳನ್ನು ತಿಳಿಸಿದೆ.