ಹೊಸನಗರ : ಪಟ್ಟಣದ ಹತ್ತಿರ ರಾಷ್ಟ್ರೀಯ ಹೆದ್ದಾರಿ-766ಸಿ ಕಾಮಗಾರಿ ಹಿನ್ನೆಲೆಯಲ್ಲಿ ಮನೆ ಕಳೆದುಕೊಂಡ ನಾಗಪ್ಪ ಹಾಗೂ ನಾಗರಾಜ್ ಕುಟುಂಬದವರು ತಹಸೀಲ್ದಾರ್ ಭರತ್ರಾಜ್ ಹಾಗೂ ತಾಲ್ಲೂಕು ಕಾರ್ಯನಿರ್ವಹಣಾಧಿಕಾರಿ ನರೇಂದ್ರಕುಮಾರ್ ಅವರಿಗೆ ಮನವಿ ಸಲ್ಲಿಸಿದ್ದು, ಮನೆ ನಿರ್ಮಿಸಲು ಬದಲಿ ಜಾಗ ನೀಡುವಂತೆ ವಿನಂತಿಸಿದರು.
ಮಾವಿನಕೊಪ್ಪ ಗ್ರಾಮದ ನಿವಾಸಿಗಳಾದ ಅವರು, ತಮ್ಮ ಮನೆಯು ಶಿವಮೊಗ್ಗ-ಹೊಸನಗರ ರಸ್ತೆಯ ಪಕ್ಕದಲ್ಲಿದ್ದು, ದೀರ್ಘಕಾಲದಿಂದ ಅಲ್ಲಿ ವಾಸಿಸುತ್ತಿರುವುದಾಗಿ ಮನವಿಯಲ್ಲಿ ವಿವರಿಸಿದ್ದಾರೆ. ಈ ನಿವೇಶನ ಹೊರತುಪಡಿಸಿ ಕುಟುಂಬದವರಿಗೆ ಮತ್ತೇನೂ ಸ್ವಂತ ಜಾಗವಿಲ್ಲದಿದ್ದು, ರಾಷ್ಟ್ರೀಯ ಹೆದ್ದಾರಿ-766ಸಿ ನಿರ್ಮಾಣಕ್ಕಾಗಿ ಕೇಂದ್ರ ಸರ್ಕಾರದ ಆದೇಶದ ಮೇರೆಗೆ ನಮ್ಮ ಮನೆ ಹಾಳಾಗಿದೆ. ಆದೇಶದ ಬಗ್ಗೆ ಅವರಿಗೆ ನೋಟಿಸ್ ಮತ್ತು ಅವಾರ್ಡ್ ಪತ್ರಗಳು ದೊರಕಿವೆ. ಆದರೂ, ನಿಗದಿಗೊಂಡ ಪರಿಹಾರ ಮೊತ್ತ ಅತೀ ಕಡಿಮೆ ಇದ್ದು, ಅದರಿಂದ ಕುಟುಂಬದ ಜೀವನ ಸಾಗಿಸುವುದು ಕಷ್ಟಕರವಾಗಿದೆ ಎಂದು ಅವರು ತಿಳಿಸಿದ್ದಾರೆ.
ಮನೆಯು ಇಲ್ಲದೆ ಮತ್ತು ಬದಲಿಗೆ ಜಾಗವಿಲ್ಲದೆ ಕುಟುಂಬ ಅತಂತ್ರ ಸ್ಥಿತಿಯಲ್ಲಿದ್ದು, ತಮ್ಮ ಸರ್ವೇ ಸಂಖ್ಯೆ 13ರಲ್ಲಿರುವ ನಿವಾಸದ ಪಕ್ಕದಲ್ಲಿಯೇ ಸರ್ಕಾರಿ ಜಾಗ ಹಾಗೂ ಬಾವಿ ಇದ್ದು, ಆ ಜಾಗದಲ್ಲಿ ಮನೆ ನಿರ್ಮಿಸಲು ಅಧಿಕಾರಿಗಳಿಂದ ಹಕ್ಕುಪತ್ರ ನೀಡುವಂತೆ ಮನವಿ ಮಾಡಿದ್ದಾರೆ.
ತಹಸೀಲ್ದಾರ್ ಭರತ್ರಾಜ್ ಮತ್ತು ಕಾರ್ಯನಿರ್ವಹಣಾಧಿಕಾರಿ ನರೇಂದ್ರಕುಮಾರ್ ಅವರು ಮನವಿಯನ್ನು ಸ್ವೀಕರಿಸಿ, ಬದಲಿ ಜಾಗವನ್ನು ಪರಿಶೀಲಿಸಿ, ಅದು ಸರ್ಕಾರಿ ಜಾಗವಾಗಿದ್ದರೆ 40X30 ಅಡಿ ಜಾಗ ನೀಡುವ ಕುರಿತು ಕುಟುಂಬದವರಿಗೆ ತಿಳಿಸಿದ್ದಾರೆ.
ಮನವಿ ಸಲ್ಲಿಸುವ ಸಂದರ್ಭದಲ್ಲಿ ದಲಿತ ಸಂಘರ್ಷ ಸಮಿತಿಯ ಸಂಚಾಲಕ ಮಂಜುನಾಥ್ ಉಪಸ್ಥಿತರಿದ್ದರು.

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್ಸೈಟ್ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 7 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್ಸೈಟ್ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ ‘ಮಲ್ನಾಡ್ ಟೈಮ್ಸ್’ ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ.





