ಹೊಸನಗರ

ಹುಂಚ ಮುತ್ತಿನಕೆರೆಯಲ್ಲಿ ಮೀನು ಹಿಡಿಯಲು ಹೋಗಿದ್ದ ಯುವಕ ನೀರುಪಾಲು !

ಹೊಸನಗರ : ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಹುಂಚದ ಮುತ್ತಿನಕೆರೆಯಲ್ಲಿ ಮಂಗಳವಾರ ಮಧ್ಯಾಹ್ನ ಮೀನು ಹಿಡಿಯಲು ತೆರಳಿದ್ದ ಯುವಕನೊಬ್ಬ ನೀರಿಗೆ ಬಿದ್ದು ದಾರುಣವಾಗಿ ಮೃತಪಟ್ಟ ಘಟನೆ ನಡೆದಿದೆ. ಮೃತನನ್ನು ಹುಂಚ ಮಂಜುನಾಥನಗರ ನಿವಾಸಿ ಮಹೇಂದ್ರ ಎಂದು ಗುರುತಿಸಲಾಗಿದೆ.

ಹೊಸನಗರ : ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಹುಂಚದ ಮುತ್ತಿನಕೆರೆಯಲ್ಲಿ ಮಂಗಳವಾರ ಮಧ್ಯಾಹ್ನ ಮೀನು ಹಿಡಿಯಲು ತೆರಳಿದ್ದ ಯುವಕನೊಬ್ಬ ನೀರಿಗೆ ಬಿದ್ದು ದಾರುಣವಾಗಿ ಮೃತಪಟ್ಟ ಘಟನೆ ನಡೆದಿದೆ.

ಮೃತನನ್ನು ಹುಂಚ ಮಂಜುನಾಥನಗರ ನಿವಾಸಿ ಮಹೇಂದ್ರ ಎಂದು ಗುರುತಿಸಲಾಗಿದೆ. ಮಹೇಂದ್ರ ತನ್ನ ಸ್ನೇಹಿತರಾದ ಪ್ರದೀಪ, ಗೋವಿಂದ ಮತ್ತು ವಿನಾಯಕರೊಂದಿಗೆ ಒಟ್ಟಾಗಿ ಮುತ್ತಿನಕೆರೆಯಲ್ಲಿ ಮೀನು ಹಿಡಿಯುವ ಉದ್ದೇಶದಿಂದ ಬಂದಿದ್ದರು. ಈ ಸಂದರ್ಭದಲ್ಲಿ ಮಹೇಂದ್ರ ಕೆರೆಯ ದಂಡೆಯ ಮೇಲೆ ನಿಂತಿದ್ದಾಗ ಕಾಲು ಜಾರಿ ನೀರಿಗೆ ಬಿದ್ದಿದ್ದಾನೆ. ಈಜು ಬಾರದ ಕಾರಣ ಆತ ನೀರಿನಲ್ಲಿ ಮುಳುಗಿದ್ದಾನೆ. ಮಹೇಂದ್ರನ ಸ್ಥಿತಿ ಕಂಡು ಗಾಬರಿಗೊಂಡ ಸ್ನೇಹಿತರು ಸ್ಥಳದಿಂದ ಪರಾರಿಯಾಗಿರುವುದು ತಿಳಿದುಬಂದಿದೆ.

ಸ್ಥಳೀಯರು ಈ ಘಟನೆ ಬಗ್ಗೆ ಮಾಹಿತಿ ನೀಡಿದ ನಂತರ ರಿಪ್ಪನ್‌ಪೇಟೆ ಪೊಲೀಸ್ ಠಾಣೆಯ ಪಿಎಸ್‌ಐ ರಾಜುರೆಡ್ಡಿ ಮತ್ತು ಸಿಬ್ಬಂದಿ ತಕ್ಷಣವೇ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿ, ನಂತರ ಹೊಸನಗರ ಅಗ್ನಿಶಾಮಕ ದಳಕ್ಕೆ ಸಹಾಯಕ್ಕಾಗಿ ಮಾಹಿತಿ ನೀಡಿದ್ದಾರೆ.

ಹೊಸನಗರ ಅಗ್ನಿಶಾಮಕ ಠಾಣಾಧಿಕಾರಿ ಆನಂದಪ್ಪ ಎನ್. ಅವರ ನೇತೃತ್ವದಲ್ಲಿ ರಾಜೇಶ್ ಕೆ.ಎಚ್., ಮಂಜುನಾಥ್ ಬಿ., ಆಂಜನೇಯ ಬಿ.ಸಿ., ಸುರೇಶ್ ಗೌಡ ಸಿ. ಪಾಟೀಲ್, ಪ್ರವೀಣ್ ಕುಮಾರ್ ಬಿ.ಬಿ. ಮತ್ತು ಅಶ್ಪಕ್ ಬಿ. ಅವರು ಕಾರ್ಯಾಚರಣೆ ನಡೆಸಿ ಮಹೇಂದ್ರನ ಮೃತದೇಹವನ್ನು ಕೆರೆಯಿಂದ ಹೊರತೆಗೆಯುವಲ್ಲಿ ಯಶಸ್ವಿಯಾದರು.

ಯುವಕನ ಅಕಾಲಿಕ ನಿಧನದಿಂದ ಮಂಜುನಾಥ ನಗರದಲ್ಲಿ ದುಃಖದ ಛಾಯೆ ಆವರಿಸಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

ಈ ಪ್ರಕರಣ ಸಂಬಂಧ ರಿಪ್ಪನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆಯನ್ನು ಪೊಲೀಸರು ನಡೆಸುತ್ತಿದ್ದಾರೆ.

Leave a Comment