ಹೊಸನಗರ ; ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ತಾಲೂಕಿನ ಬಿಸಿಯೂಟ ತಯಾರಿಕಾ ಫೆಡರೇಷನ್ನ ಸದಸ್ಯರು ಸೋಮವಾರ ತಹಸೀಲ್ದಾರ್ ಅವರಿಗೆ ಮನವಿ ಸಲ್ಲಿಸಿದರು.
ಇಲ್ಲಿನ ತಾಲೂಕು ಕಛೇರಿ ಆವರಣದಲ್ಲಿ ಸದಸ್ಯರು ಸಭೆ ನಡೆಸಿ, ಕಳೆದ 23 ವರ್ಷಗಳಿಂದ ಶಾಲೆಯಲ್ಲಿ ಅಕ್ಷರ ದಾಸೋಹ ಯೋಜನೆಯಡಿಯಲ್ಲಿ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳಲ್ಲಿ ಬಿಸಿಯೂಟ ತಯಾರಿಕೆ ಕೆಲಸ ಮಾಡುತ್ತಿದ್ದೇವೆ. ಆದರೆ ಕೇವಲ ಮಾಸಿಕ 3600 ರೂ. ಗೌರವಧನ ನೀಡಲಾಗುತ್ತಿದೆ. ಇದರಿಂದ ಬಿಸಿಯೂಟ ತಯಾರಿಕರಿಗೆ ಸಂಕಷ್ಟ ಎದುರಾಗಿದೆ. ದಿನನಿತ್ಯ ಬಳಕೆ ವಸ್ತುಗಳ ಬೆಲೆ ಇಂದು ಗಗನಕ್ಕೇರಿದೆ. ಜೀವನ ನಿರ್ವಹಣೆಕಷ್ಟಕರವಾಗಿದೆ. ಇಷ್ಟು ಕಡಿಮೆ ಗೌರವಧನ ಪಡೆದು ಕೆಲಸ ನಿರ್ವಹಿಸುವುದು ಸವಾಲಾಗಿ ಪರಿಣಮಿಸಿದೆ ಎಂದು ಬಿಸಿಯೂಟ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಪರಮೇಶ್ವರ ಹೇಳಿದರು.
ಕಾಂಗ್ರೆಸ್ ಪಕ್ಷ ಚುನಾವಣಾ ಪೂರ್ವದಲ್ಲಿ ನೀಡಿರುವ ಆಶ್ವಾಸನೆಯಂತೆ ತಯಾರಿಕರಿಗೆ ಮಾಸಿಕ 6 ಸಾವಿರ ರೂ. ಗೌರವಧನ ನೀಡಬೇಕು. 60 ವರ್ಷ ಮೀರಿದವರಿಗೆ ಇಡಿಗಂಟು ಹಣವಾಗಿ 2 ಲಕ್ಷರೂ. ನೀಡಬೇಕು. ಮರಣ ಪರಿಹಾರ, ಆಸ್ಪತ್ರೆ ವೆಚ್ಚ ಭರಿಸುವುದು, ಉಪಧನ ಜಾರಿಗೊಳಿಸುವಿಕೆ ಸೇರಿದಂತೆ ತಮ್ಮ ಹಲವು ವರ್ಷಗಳ ಬೇಡಿಕೆಗಳನ್ನು ರಾಜ್ಯ ಸರ್ಕಾರ ಕೂಡಲೇ ಈಡೇರಿಸಬೇಕು ಎಂದರು.
ಈ ವೇಳೆ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಪರಮೇಶ್ವರ ಹೊಸಕೊಪ್ಪ, ತಾಲೂಕು ಸಂಘಟನೆಯ ಸುಶೀಲಾ, ಮಂಜುಳಾ, ವನಜಾಕ್ಷಿ, ಶಕೀಲಾ, ವಜ್ರಾವತಿ, ಮೂಕಾಂಬಿಕ, ಜ್ಯೋತಿ ಮತ್ತಿತರರು ಇದ್ದರು.
ಇದ್ದರು.