ಹೊಸನಗರ ; ನಮ್ಮ ಕಾಂಗ್ರೆಸ್ ಸರ್ಕಾರ ಒಂದೂವರೆ ವರ್ಷದಲ್ಲಿ 5 ಗ್ಯಾರಂಟಿ ಯೋಜನೆಯ ಜೊತೆಗೆ ಸಾಕಷ್ಟು ಬಡ ಕುಟುಂಬಗಳಿಗೆ ಸ್ವಾವಲಂಬಿ ಜೀವನ ಸಾಗಿಸಲು ಸಾಕಷ್ಟು ಸಲಕರಣೆಗಳನ್ನು ವಿತರಿಸುತ್ತಿದ್ದು ಅದನ್ನು ಸರಿಯಾಗಿ ಉಪಯೋಗಿಸಿಕೊಂಡಲ್ಲಿ ಜೀವನ ಸಾಗಿಸಲು ಅನುಕೂಲವಾಗುತ್ತದೆ ಎಂದು ಹೊಸನಗರ, ಸಾಗರ ಕ್ಷೇತ್ರದ ಶಾಸಕ ಬೇಳೂರು ಗೋಪಾಲಕೃಷ್ಣ ಹೇಳಿದರು.
ಇಲ್ಲಿನ ಪಟ್ಟಣ ಪಂಚಾಯತಿ ಆವರಣದಲ್ಲಿ ಪಟ್ಟಣ ಪಂಚಾಯತಿ ವ್ಯಾಪ್ತಿಯ 2023-24ನೇ ಸಾಲಿನ ಎಸ್.ಎಫ್.ಸಿ ಶೇ. 24.10 ಯೋಜನೆಯಡಿಯಲ್ಲಿ ಪರಿಶಿಷ್ಟ ಜಾತಿಯ ಫಲಾನುಭವಿಗಳಿಗೆ ಟೈಲರಿಂಗ್ ಮಷಿನ್ ಹಾಗೂ ಪರಿಶಿಷ್ಟ ಪಂಗಡದ ಫಲಾನುಭವಿಗಳಿಗೆ 500 ಲೀಟರ್ ಸಿಂಟೆಕ್ಸ್ ಹಾಗೂ ವಿಕಚೇತನ ಫಲಾನುಭವಿಗೆ ಎಲೆಕ್ಟ್ರಿಕಲ್ ಬೈಕ್ ವಿತರಿಸಿ ಮಾತನಾಡಿದರು.
ನಮ್ಮ ಸರ್ಕಾರ ಬಂದ ಮೇಲೆ ಸಾಕಷ್ಟು ಅನುದಾನವನ್ನು ಪಟ್ಟಣ ಪಂಚಾಯತಿಗೆ ನೀಡಲಾಗಿದ್ದು ಅದರಲ್ಲಿ ಸಾಕಷ್ಟು ಬಡ ಕುಟುಂಬಗಳ ಜೀವನ ಸಾಗಿಸಲು ಸಲಕರಣೆಗಳನ್ನು ಈಗಾಗಲೇ ನೀಡಲಾಗಿದೆ. ಮುಂದಿನ ಬಜೆಟ್ ವೇಳೆಯಲ್ಲಿ ಪ್ರತಿಯೊಂದು ಪಟ್ಟಣ ಪಂಚಾಯಿತಿಗೂ ಸುಮಾರು ಅಂದಾಜು 5 ಕೋಟಿ ರೂ. ಬಜೆಟ್ ನೀಡುವ ವಿಶ್ವಾಸವಿದ್ದು ಕೋಟಿ ಅನುದಾನದಲ್ಲಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಎಲ್ಲ ರಸ್ತೆಗಳು ಅಭಿವೃದ್ಧಿ ಮಾಡುವುದರ ಜೊತೆಗೆ ಪಟ್ಟಣ ಪಂಚಾಯತಿಯನ್ನು ಅಭಿವೃದ್ಧಿ ಮಾಡುವ ಯೋಜನೆ ಹೊಂದಿದ್ದೇವೆ ಎಂದರು.
ಪಟ್ಟಣ ಪಂಚಾಯತಿ ವತಿಯಿಂದ 3 ಫಲಾನುಭವಿಗೆ ಸುಮಾರು 30 ಸಾವಿರ ವೆಚ್ಚದಲ್ಲಿ ಮೂರು ಹೊಲಿಗೆ ಯಂತ್ರ, 5 ಫಲಾನುಭವಿಗೆ ಸುಮಾರು 29 ಸಾವಿರ ರೂ. ವೆಚ್ಚದಲ್ಲಿ ಸಿಂಟೆಕ್ಸ್ ಹಾಗೂ 48 ಸಾವಿರ ರೂ. ವೆಚ್ಚದಲ್ಲಿ ಅಂಗವಿಕಲ ಫಲಾನುಭವಿ ಶಿವಕುಮಾರ್ರವರಿಗೆ ಎಲೆಕ್ಟ್ರಿಕಲ್ ಬೈಕ್ ಅನ್ನು ಈ ಸಂದರ್ಭದಲ್ಲಿ ವಿತರಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಪಟ್ಟಣ ಪಂಚಾಯತಿಯ ಮುಖ್ಯಾಧಿಕಾರಿ ಹರೀಶ್, ಆರೋಗ್ಯಾಧಿಕಾರಿ ಶೃತಿ, ಕಂದಾಯ ಇಲಾಖೆಯ ಮಂಜುನಾಥ್, ಪರಶುರಾಮ್, ಉಮಾ ಶಂಕರ್, ಗಿರೀಶ್, ಆಸ್ಮಾ, ನೇತ್ರಾ, ಸುಮಿತ್ರ, ತಿಲಕ್ ಪ್ರಸಾದ್, ಪಟ್ಟಣ ಪಂಚಾಯತಿ ಅಧ್ಯಕ್ಷ ನಾಗಪ್ಪ, ಉಪಾಧ್ಯಕ್ಷೆ ಚಂದ್ರಕಲಾ ನಾಗರಾಜ್, ಅಶ್ವಿನಿಕುಮಾರ್, ಗುರುರಾಜ್, ಶಾಹಿನ, ನಾಮ ನಿರ್ದೇಶಕ ಸದಸ್ಯ ಗುರುರಾಜ್, ನೇತ್ರಾ, ಸುಬ್ರಾಯಭಟ್, ನಾಸೀರ್, ಶಾಸಕರ ಆಪ್ತ ಕಾರ್ಯದರ್ಶಿ ಸಣ್ಣಕ್ಕಿ ಮಂಜು, ಇನ್ನೂ ಮುಂತಾದವರು ಉಪಸ್ಥಿತರಿದ್ದರು.