ಹೊಸನಗರ ; ಕಾರಣಗಿರಿ ಶ್ರೀ ಸಿದ್ಧಿವಿನಾಯಕ ದೇವಸ್ಥಾನದಲ್ಲಿ ಗ್ರಾಮೋತ್ಥಾನ ಬಳಗದ ಆಶ್ರಯದಲ್ಲಿ ಮಾ. 9ರ ಭಾನುವಾರ 33ನೇ ವರ್ಷದ ಸಹಸ್ರಾಧಿಕ ಸಾಮೂಹಿಕ ಸತ್ಯನಾರಾಯಣ ಪೂಜೆ ನಡೆಯಲಿದೆ.
ಇದರ ಅಂಗವಾಗಿ ಮಾ. 8ರ ಶನಿವಾರ ಬೆಳಗ್ಗೆ ಗಣಪತಿ ಉಪನಿಷತ್ ಹವನ, ಶತರುದ್ರಾಭಿಷೇಕ, ಸೂರ್ಯಯಜ್ಞ ಮತ್ತು ಮಹಿಳೆಯರಿಂದ ಸಾಮೂಹಿಕ ಕುಂಕುಮಾರ್ಚನೆ ನಡೆಯಲಿದೆ.
ಮಾ.9ರ ಭಾನುವಾರ ಸಹಸ್ರಾಧಿಕ ಸತ್ಯನಾರಾಯಣ ಪೂಜೆ, ಸತ್ಯನಾರಾಯಣ ವ್ರತೋದ್ಯಾಪನಾ ಹೋಮಾದಿಗಳು ನಡೆಯಲಿದೆ. ಅಂದು ನಡೆಯುವ ಸಾಮರಸ್ಯ ಸಮಾರಂಭದಲ್ಲಿ ಶಿವಮೊಗ್ಗದ ಕೂಡಲಿಯ ಜಗದ್ಗುರು ಶ್ರೀ ಕೂಡಲಿ ಶೃಂಗೇರಿ ಮಹಾಸಂಸ್ಥಾನ, ದಕ್ಷಿಣಾಮ್ನಾಯ ಶಾರದಾಪೀಠಮ್, ಪೀಠಾಧಿಪತಿಗಳಾದ ಪೂಜ್ಯ ಶ್ರೀ ಅಭಿನವ ಶಂಕರಭಾರತೀ ಮಹಾಸ್ವಾಮಿಗಳು ಆಶೀರ್ವಚನ ನೀಡಲಿದ್ದಾರೆ.
ಬೆಂಗಳೂರಿನ ಮನಸಂ ಸೀನಿಯರ್ ಲಿವಿಂಗ್ನ ಅನಂತರಾಮ್ ವರಯೂರು, ದಿನೇಶ್ಜೋಷಿ ಫೌಂಡೇಷನ್ ಸಂಸ್ಥಾಪಕ ಅಬಸೆ ದಿನೇಶ್ಜೋಷಿ, ದೇವಸ್ಥಾನ ಸಮಿತಿ ಅಧ್ಯಕ್ಷಎನ್. ಡಿ. ನಾಗೇಂದ್ರರಾವ್ ಭಾಗವಹಿಸಲಿದ್ದಾರೆ. ರಾಷ್ಟ್ರೋತ್ಥಾನ ಬಳಗದ ಅಧ್ಯಕ್ಷ ನಳಿನಚಂದ್ರ ಅಧ್ಯಕ್ಷತೆ ವಹಿಸಲಿದ್ದು ರಾಷ್ಟ್ರಪ್ರಶಸ್ತಿ ಪುರಸ್ಕೃತ, ಉದ್ಯಮಿ ರವಿಕುಮಾರ್ ಗುಳ್ಳೆಕೊಪ್ಪ, ರ್ಯಾಂಕ್ ವಿಜೇತ ಡಾ|| ಸುಮನ್ ಇವರನ್ನು ಸನ್ಮಾನಿಸಲಾಗುವುದು. ಕಾರಣಗಿರಿ ಕಲಾದರ್ಶನದ ಪ್ರಧಾನ ಸಂಪಾದಕ ಹಾದಿಗಲ್ಲು ಲಕ್ಷ್ಮಿನಾರಾಯಣ ಸತ್ಯನಾರಾಯಣ ವ್ರತಕಥೆ ನಡೆಸಿಕೊಡಲಿದ್ದಾರೆ.
ಸಾಹಿತ್ಯ, ಸಂಸ್ಕೃತಿ ಉತ್ಸವ :
ಗ್ರಾಮ ಭಾರತಿ ಟ್ರಸ್ಟ್ ಮತ್ತು ರಾಷ್ಟ್ರೋತ್ಥಾನ ಬಳಗದ ಆಶ್ರಯದಲ್ಲಿ ಕಾರಣಗಿರಿ ಶ್ರೀ ಸಿದ್ಧಿವಿನಾಯಕ ಸಭಾಭವನದಲ್ಲಿಎರಡು ದಿನಗಳ ಸಾಹಿತ್ಯ ಸಂಸ್ಕೃತಿ ಉತ್ಸವ ನಡೆಯಲಿದೆ.
ಮಾರ್ಚ್ 8ರ ಶನಿವಾರ ಮಧ್ಯಾಹ್ನ 2 ರಿಂದ ಭಜನಾ ಸಂಗಮ ಹಾಗೂ ಸಂಜೆ 4.30 ರಿಂದ ಸಾಹಿತ್ಯಗೋಷ್ಠಿ ನಡೆಯಲಿದೆ. ಹಾದಿಗಲ್ಲು ಲಕ್ಷ್ಮಿನಾರಾಯಣ ಅಧ್ಯಕ್ಷತೆಯಲ್ಲಿ ವಿದ್ಯಾವಾಚಸ್ಪತಿ ಡಾ. ಅರಳು ಮಲ್ಲಿಗೆ ಪಾರ್ಥಸಾರಥಿ ಉದ್ಘಾಟಿಸಲಿದ್ದಾರೆ.
ಅಜೇಯ ಪತ್ರಿಕೆಯ ಸಂಪಾದಕ ಎಂ.ಶ್ರೀನಿವಾಸರ ‘ನನ್ನ ಕೃಷ್ಣ’, ಡಾ.ಅಂಜಲಿ ಅಶ್ವಿನ್ರವರ “ಮಹಿಳೆ : ಸಾಧನೆ-ವೇದನೆ-ಸಂವೇದನೆ” ಮತ್ತು “ಗೋಡೆಯಲ್ಲಿ ಗೀಚಿದ್ದು” ಕೃತಿ ವಸಂತಲಕ್ಷ್ಮಿ, ವನಸುಮ ಇವರಿಂದ ಲೋಕಾರ್ಪಣೆಗೊಳ್ಳಲಿದೆ. ಟಿ.ಎನ್. ಸ್ವಾಮಿ ಮತ್ತೂರು, ಡಾ. ರತ್ನಾಕರ ಸಿ. ಕುನಗೋಡು ಕೃತಿ ಪರಿಚಯ ಮಾಡಲಿದ್ದಾರೆ.
ಗ್ರಾಮ ಭಾರತಿ ಟ್ರಸ್ಟ್ ಅಧ್ಯಕ್ಷ ಹನಿಯ ರವಿ, ರಾಷ್ಟ್ರೋತ್ಥಾನ ಬಳಗದ ಅಧ್ಯಕ್ಷ ನಳಿನಚಂದ್ರ ಇತರರು ಉಪಸ್ಥಿತರಿರುತ್ತಾರೆ. ನಿವೃತ್ತ ಪ್ರಾಚಾರ್ಯ ಮತ್ತು ಲೇಖಕ ವಂದಗದ್ದೆ ಚಂದ್ರಮೌಳಿ, ರಾಷ್ಟ್ರಪ್ರಶಸ್ತಿ ಪುರಸ್ಕೃತ ಶಿಕ್ಷಕ ಭೋಜಪ್ಪ ಇವರನ್ನು ಸನ್ಮಾನಿಸಲಾಗುವುದು.
ಸಂಜೆ 7ರಿಂದ ಕಲಾಭಾರತಿ ತಂಡದಿಂದ ಭರತನಾಟ್ಯ ಹಾಗೂ ವಿವಿಧ ತಂಡಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಮಾ. 9ರಂದು ಮಧ್ಯಾಹ್ನ ಸುವರ್ಧಿನಿ ನೃತ್ಯಶಾಲೆ ಮಾರುತಿಪುರ ಇವರಿಂದ ನೃತ್ಯ ಪ್ರದರ್ಶನ ನಡೆಯಲಿದೆ.