ರಿಪ್ಪನ್ಪೇಟೆ ; ಅತಿಶಯ ಶ್ರೀಕ್ಷೇತ್ರ ಹೊಂಬುಜದಲ್ಲಿ ಅಧಿದೇವತೆ ಜಗನ್ಮಾತೆ ಯಕ್ಷಿ ಶ್ರೀ ಪದ್ಮಾವತಿ ದೇವಿಯ ರಜತ ಉಯ್ಯಾಲೆ ಸೇವೆಯನ್ನು ಶ್ರೀಕ್ಷೇತ್ರದ ಚಂದ್ರಶಾಲೆಯಲ್ಲಿ ಫೆ. 18ರಂದು ಸಾಯಂಕಾಲ ಶೋಡೋಪಚಾರ ಪೂಜಾ ವಿಧಿ-ವಿಧಾನಗಳೊಂದಿಗೆ ನೆರವೇರಿಸಲಾಯಿತು.
ಅಷ್ಟವಿದಾರ್ಚನೆ ಪೂಜೆಯಲ್ಲಿ ವಿವಿಧ ಪುಷ್ಪ, ಫಲ, ಸುಗಂಧ ದ್ರವ್ಯಗಳಿಂದ ಶ್ರೀ ಪದ್ಮಾವತಿ ದೇವಿಯನ್ನು ಆರಾಧಿಸಿ, ಪದ್ಮಾವತಿ ದೇವಿ ಸ್ತುತಿಗಳೊಂದಿಗೆ ಶಾಸ್ತ್ರೋಕ್ತ ವಿಧಾನದಲ್ಲಿ ಉಯ್ಯಾಲೆ ಸೇವೆಯಲ್ಲಿ ಊರ-ಪರವೂರ ಭಕ್ತರು ಸಮರ್ಪಿಸಿಕೊಂಡರು.
ಸ್ವರ್ಣ ಪಲ್ಲಕ್ಕಿಯಲ್ಲಿ ಉತ್ಸವ ಶ್ರೀ ಪದ್ಮಾವತಿ ದೇವಿ ಜಿನಬಿಂಬವನ್ನು ಜಿನಮಂದಿರದಿಂದ ಭಕ್ತರ ಸೇವೆಯಲ್ಲಿ ಜಯಘೋಷ, ವಾದ್ಯ ವಾದನದಲ್ಲಿ ತರಲಾಯಿತು.
ಗಣಾಧಿಪತಿ ಗಣಧರಾಚಾರ್ಯ ಶ್ರೀ 108 ಕುಂಥುಸಾಗರ ಮಹಾರಾಜರು ಸಸಂಘದ ಮುನಿಶ್ರೀಯವರು, ಆರ್ಯಿಕೆಯರು ಉಪಸ್ಥಿತರಿದ್ದರು. ಪೀಠಾಧೀಶರಾದ ಪರಮಪೂಜ್ಯ ಜಗದ್ಗುರು ಸ್ವಸ್ತಿಶ್ರೀ ಡಾ. ದೇವೇಂದ್ರಕೀರ್ತಿ ಭಟ್ಟಾರಕ ಮಹಾಸ್ವಾಮೀಜಿಯವರು ವಿಶೇಷ ರಜತ ಉಯ್ಯಾಲೆ ಸೇವೆಯನ್ನು ಮುನಿಶ್ರೀಯವರ ಸಾನಿಧ್ಯದಲ್ಲಿ ಏರ್ಪಡಿಸಿದ್ದರು. ಅಷ್ಟಾವಧಾನ ವಾದ್ಯ, ಶಂಖ, ತಾಳ, ನೃತ್ಯ, ಗದ್ಯ, ಪದ್ಯ, ಸ್ತೋತ್ರ ಪ್ರಸ್ತುತಪಡಿಸಲಾಯಿತು.

ರಜತ ಉಯ್ಯಾಲೆಯಲ್ಲಿ ಶ್ರೀ ಪದ್ಮಾವತಿ ದೇವಿ ಆರಾಧನೆಯನ್ನು ವೀಕ್ಷಿಸಿ, ಪಾಲ್ಗೊಂಡ ಭಕ್ತರು ಧನ್ಯತೆಯಿಂದ ಜಯ ಜಯ ಪದ್ಮಿನಿ ದೇವಿ, ಹರಸು ತಾಯಿ ಪದ್ಮಾವತಿ ಮುಂತಾದ ಜಿನಸ್ತುತಿಗಳನ್ನು ಸಾಮೂಹಿಕವಾಗಿ ಸ್ತುತಿಸಿದರು.
ಶ್ರೀ ಜಿನಭಕ್ತಿ ಗಾಯಕಿ ಜಯಶ್ರೀ ಹೊರನಾಡುರವರಿಂದ ಸುಶ್ರಾವ್ಯ ಪೂಜಾಷ್ಟಕಗಳು ಭಕ್ತರನ್ನು ಭಾವಪರವಶವನ್ನಾಗಿಸಿತು. ಸರ್ವವಾದ್ಯ ಗೋಷ್ಠಿ ಮೇಳೈಸಿ, ಭಕ್ತರನ್ನು ಪುಳಕಿತಗೊಳಿಸಿತು.
ಶ್ರೀ ಪದ್ಮರಾಜ ಹಾಗೂ ಸಹಪುರೋಹಿತರು ಪೂಜಾ ವಿಧಿ-ವಿಧಾನಗಳನ್ನು ಸಾಂಗವಾಗಿ ನೆರವೇರಿಸಿದರು.


ಅವರು MalnadTimes.com ನ ಸಂಪಾದಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಸ್ಥಳೀಯ ಪತ್ರಿಕೋದ್ಯಮದ ಮೇಲಿನ ನಿಷ್ಠೆ ಮತ್ತು ಸಾಮಾಜಿಕ ಜವಾಬ್ದಾರಿಯೊಂದಿಗೆ, ಅವರು ಮಲ್ನಾಡು ಪ್ರದೇಶದ ಜನಜೀವನ, ಪರಿಸರ, ಕೃಷಿ, ಶಿಕ್ಷಣ ಮತ್ತು ಅಭಿವೃದ್ಧಿ ಸಂಬಂಧಿತ ವಿಷಯಗಳನ್ನು ಪ್ರಾಮಾಣಿಕವಾಗಿ ಹಾಗೂ ನಿರಂತರವಾಗಿ ಹಂಚಿಕೊಂಡು ಬರುತ್ತಿದ್ದಾರೆ. ನಿಖರತೆ, ನೈತಿಕತೆ ಮತ್ತು ಸಾರ್ವಜನಿಕ ಹಿತಚಿಂತನೆಯಾದರೂ ಅವರ ಸಂಪಾದಕೀಯ ನಿಲುವುಗಳ ಹತ್ತಿರ ಇರುತ್ತದೆ. Malnad Times ನ್ನು ವಿಶ್ವಾಸಾರ್ಹ ಸುದ್ದಿಮೂಲವಾಗಿಸಲು ಅವರು ನಿರಂತರ ಶ್ರಮಿಸುತ್ತಿದ್ದಾರೆ.