Hosanagara ಹೊಸನಗರ

ಮೈಮೇಲೆ ಬಿಸಿ ಟೀ ಬಿದ್ದು ಗಾಯಗೊಂಡಿದ್ದ 2 ವರ್ಷದ ಮಗು ಚಿಕಿತ್ಸೆ ಫಲಿಸದೆ ಸಾವು !

HOSANAGARA ; ಮೈಮೇಲೆ ಬಿಸಿ ಟೀ ಬಿದ್ದು ಗಾಯಗೊಂಡಿದ್ದ ಮಗು ಮೃತಪಟ್ಟ ಘಟನೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕು ನಗರ ಸಮೀಪದ ಹಿರಿಮನೆ ಎಂಬಲ್ಲಿ ನಡೆದಿದೆ.

ಶಾಸಕ ಆರಗ ಜ್ಞಾನೇಂದ್ರ ಅವರ ಹೊಸನಗರ ಭಾಗದ ಆಪ್ತ ಸಹಾಯಕ ರಾಜೇಶ್ ಹಿರಿಮನೆ, ತಾಲೂಕು ಪಂಚಾಯಿತಿ ಮಾಜಿ ಸದಸ್ಯೆ ಅಶ್ವಿನಿ ಪಾಟೀಲ್ ಅವರ 2 ವರ್ಷದ ಪುತ್ರ ಅಥರ್ವ ಅ. 24ರಂದು ಗುರುವಾರ ಮೈಮೇಲೆ ಬಿಸಿ ಟೀ ಬೀಳಿಸಿಕೊಂಡು ಗಂಭೀರವಾಗಿ ಗಾಯಗೊಂಡಿದ್ದು, ಮಗುವನ್ನು ಮಂಗಳೂರಿನ ವೆನ್ ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಕಳೆದ 8 ದಿನಗಳಿಂದ ಚಿಕಿತ್ಸೆ ನೀಡಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ಶುಕ್ರವಾರ ಬೆಳಗ್ಗೆ ಮಗು ಮೃತಪಟ್ಟಿದೆ.

ನಡೆದಿದ್ದೇನು ?

ರಾಜೇಶ್ ಅವರ ನೆರೆಮನೆಯ ವ್ಯಕ್ತಿಯೊಬ್ಬರು ಮೃತಪಟ್ಟ ಹಿನ್ನೆಲೆಯಲ್ಲಿ ಅಂದು ರಾತ್ರಿ ಅಂತಿಮ ದರ್ಶನಕ್ಕೆ ಬಂದಿದ್ದ ಜನರಿಗೆ ರಾಜೇಶ್ ಮತ್ತು ಅವರ ಪತ್ನಿ ಟೀ ಮಾಡಿ ಪಾತ್ರೆಗೆ ಹಾಕಿ ತಮ್ಮ ಮನೆಯ ಜಗಲಿ ಮೇಲೆ ಇಟ್ಟಿದ್ದಾರೆ. ಆಟವಾಡುತ್ತಾ ಅಲ್ಲಿಗೆ ಬಂದ ಅಥರ್ವ ಪಾತ್ರೆಯನ್ನು ಎಳೆದಿದ್ದಾನೆ ತುಂಬಾ ಬಿಸಿ ಇದ್ದ ಟೀ ಮೈಮೇಲೆ ಚೆಲ್ಲಿ ಗಾಯಗೊಂಡಿದ್ದ ಎನ್ನಲಾಗಿದೆ.

ರಾಜೇಶ್, ಅಶ್ವಿನಿ ದಂಪತಿಗೆ ಒಂದು ಗಂಡು ಮತ್ತು ಒಂದು ಹೆಣ್ಣು ಮಗುವಿದ್ದು ಇದೀಗ ಪುತ್ರನನ್ನು ಕಳೆದುಕೊಂಡು ಕುಟುಂಬಸ್ಥರ ಆಕ್ರಂದನ ಮುಗುಲು ಮುಟ್ಟಿದ್ದು ದೀಪಾವಳಿ ಹಬ್ಬದ ಸಂಭ್ರಮದಲ್ಲಿದ್ದ ಇಡೀ ಗ್ರಾಮದಲ್ಲಿ ಸ್ಮಶಾನ ಮೌನ ಆವರಿಸಿದೆ.

Leave a Comment