ರಿಪ್ಪನ್ಪೇಟೆ ; ಹಿಂದೂ ಸಂಸ್ಕೃತಿ ಪರಂಪರೆ ಶ್ರೀಮಂತ ಇತಿಹಾಸ ಹೊಂದಿದೆ. ಅದನ್ನು ಪ್ರತಿಯೊಬ್ಬರು ಅರ್ಥೈಸಿಕೊಳ್ಳಬೇಕು. ಜೀವಿಗಳಲ್ಲಿರುವ ಚೈತನ್ಯ ಸ್ವರೂಪ ಒಂದೇ ಎಂಬ ಜ್ಞಾನ ಉಂಟಾದಾಗ ಮಾತ್ರ ಹಿಂದೂ ಸಮಾಜ ಸದೃಢವಾಗಲು ಸಾಧ್ಯ. ವಿಶ್ವ ಹಿಂದೂ ಪರಿಷತ್ನ ಕ್ಷತ್ರಿಯ ಧರ್ಮ ಪ್ರಸಾರ ಪ್ರಮುಖ್ ಲೋಹಿತಾಶ್ಚ ಕ್ಯಾದಿಗೆರೆ ಹೇಳಿದರು.
ಬೆಳ್ಳೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಗುಳುಗುಳಿಶಂಕರ ದೇವಸ್ಥಾನದ ಆವರಣದಲ್ಲಿ ಹೊಸನಗರ ತಾಲ್ಲೂಕು ಹಿಂದೂ ಸಂಗಮ ಆಯೋಜನಾ ಸಮಿತಿಯವರು ಆಯೋಜಿಸಲಾದ ಹಿಂದೂ ಸಂಗಮೋತ್ಸವ ಕಾರ್ಯಕ್ರಮದಲ್ಲಿ ವಿಶೇಷ ಭಾಷಣಕಾರರಾಗಿ ಭಾಗವಹಿಸಿ ಮಾತನಾಡಿ, ಪ್ರತಿಯೊಂದು ಊರಿನಲ್ಲಿ ಭಜನಾ ಸಂಘಗಳು ಆರಂಭವಾಗಬೇಕು. ಇದರಿಂದ ನಮ್ಮ ಸಂಸ್ಕೃತಿ ಉಳಿಸಲು ಸಾಧ್ಯ. ಅದರೊಂದಿಗೆ ಭಜನಾ ಸಂಘದಲ್ಲಿ ಆದಷ್ಟು ಮಕ್ಕಳನ್ನು ಸೇರಿಸಿಕೊಂಡು ಅವರಲ್ಲಿ ಭಕ್ತಿ ಭಾವನೆ ಬೆಳೆಸಲು ಸಾಧ್ಯ. ಮಕ್ಕಳಿಗೆ ನೀತಿ ಕಥೆ ಹೇಳಿ ರಾಮಾಯಣ ಮಹಾಭಾರತದಂತಹ ಕಥೆಗಳಿಂದ ಮಕ್ಕಳು ಹೆಚ್ಚು ಪ್ರೇರೆಪಿತರಾಗುವಂತೆ ಮಾಡುವುದು ಇಂದಿನ ಅಗತ್ಯವಾಗಿದೆ ಎಂದರು.
ಇದರೊಂದಿಗೆ ಪರಿಸರ ತಾಯಿಯಂತೆ ಪ್ರಕೃತಿ ದೇವರು ಪ್ರತಿಯೊಬ್ಬರು ಪ್ಲಾಸ್ಟಿಕ್ ಬಳಕೆಯನ್ನು ತಡೆಯುವ ಮೂಲಕ ಪರಿಸರ ರಕ್ಷಣೆಯೊಂದಿಗೆ ಆರಾಧಿಸುವಂತಾಗಬೇಕು ಎಂದು ಹೇಳಿದ ಅವರು, ವೇದ-ಉಪನಿಷತ್ತುಗಳು ಧರ್ಮ ಗ್ರಂಥಗಳು ನಮಗೆ ಮಹೋನ್ನತವಾದ ಸಂದೇಶಗಳನ್ನು ನೀಡಲು ಇರುವ ಉತ್ಕೃಷ್ಟವಾದ ಮಾರ್ಗಗಳು. ಇದರಲ್ಲಿ ಅಡಕಗೊಂಡಿರುವ ಮೌಲ್ಯಗಳನ್ನು ನಾವು ಆಚರಣೆಗೆ ತರಬೇಕು. ಮಠಮಂದಿರಗಳು ಸಮಾಜದ ಉನ್ನತಿಗಾಗಿ ಶ್ರಮಿಸಿದಾಗ ಮಾತ್ರ ಹಿಂದೂ ಸಮಾಜ ಸದೃಡವಾಗಲು ಸಾಧ್ಯವಾಗುವುದೆಂದರು.
ಸಾರಗನಜಡ್ಡು ಅವದೂತ ಯೋಗೇಂದ್ರಸ್ವಾಮಿ ಈ ಕಾರ್ಯಕ್ರಮದ ದಿವ್ಯಸಾನ್ನಿಧ್ಯ ವಹಿಸಿ ಸಂದೇಶಾಮೃತ ನೀಡಿದರು.
ಈ ಕಾರ್ಯಕ್ರಮದಲ್ಲಿ ಹೊಸನಗರ ತಾಲ್ಲೂಕು ಹಿಂದೂ ಸಂಗಮ ಆಯೋಜನಾ ಸಮಿತಿಯ ಅಧ್ಯಕ್ಷ ವಿನಯ್ ಹೆಗ್ಗೆರೆ, ಗಾಯಿತ್ರಿ ಮಾತಾಜಿ ಅರಸಾಳು, ವಾಸಪ್ಪ, ವಸಂತ, ಇನ್ನಿತರರು ಹಾಜರಿದ್ದರು.
ಮಾಮ್ಕೋಸ್ ನಿರ್ದೇಶಕ ಕೆ.ಹೆಚ್.ಧರ್ಮೇಂದ್ರ ಸ್ವಾಗತಿಸಿದರು. ಚಂದ್ರು ಬಸವಾಪುರ ಕಾರ್ಯಕ್ರಮ ನಿರೂಪಿಸಿದರು. ಗಂಗಾಧರ ಕಳಸೆ ವಂದಿಸಿದರು.
ಇದೇ ಸಂದರ್ಭದಲ್ಲಿ ಸಾಮೂಹಿಕ ಸತ್ಯನಾರಾಯಣ ಪೂಜೆ ಹಾಗೂ ಹಿಂದೂ ಸಂಗಮೋತ್ಸವದ ಅಂಗವಾಗಿ ಬೃಹತ್ ಶೋಭಾಯಾತ್ರೆ ನೆರವೇರಿತು.

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್ಸೈಟ್ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 7 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್ಸೈಟ್ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ ‘ಮಲ್ನಾಡ್ ಟೈಮ್ಸ್’ ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ.





