ಮರಳು ದಂಧೆಕೋರರಿಂದ ಶರಾವತಿ ನದಿ ರಕ್ಷಿಸುವಂತೆ ಏಕಾಂಗಿ ಪ್ರತಿಭಟನೆ

Written by Mahesh Hindlemane

Updated on:

ಶಿವಮೊಗ್ಗ ; ಹೊಸನಗರ ತಾಲ್ಲೂಕಿನಲ್ಲಿ ಹರಿಯುವ ಶರಾವತಿ ನದಿಯನ್ನು ಮರಳು ದಂಧೆಕೋರರಿಂದ ರಕ್ಷಿಸುವಂತೆ ಆಗ್ರಹಿಸಿ ಜನ ಸಂಗ್ರಾಮ ಪರಿಷತ್ತಿನ ಗಿರೀಶ್ ಆಚಾರ್ ಪುಣಜೆ ಇಂದು ಜಿಲ್ಲಾಧಿಕಾರಿ ಕಚೇರಿ ಎದುರು ಏಕಾಂಗಿ ಮೌನ ಪ್ರತಿಭಟನೆ ಹಮ್ಮಿಕೊಂಡು ಮನವಿ ಸಲ್ಲಿಸಿದರು.

WhatsApp Group Join Now
Telegram Group Join Now
Instagram Group Join Now

ಶರಾವತಿ ನದಿ ಹಿನ್ನೀರಿನ ಪ್ರದೇಶದಲ್ಲಿ ಅತ್ಯಂತ ಮರಳು ಮಾಫಿಯಾದವರಿಂದ ನಿರಂತರವಾಗಿ ಹಗಲಿರುಳೆನ್ನದೆ ಪ್ರತಿ ನಿತ್ಯ ನೂರಾರು ಲೋಡ್ ಮರಳನ್ನು ಅಕ್ರಮವಾಗಿ ಸಾಗಾಟ ಮಾಡಲಾಗುತ್ತಿದೆ. ಇತ್ತೀಚಿಗೆ ಹಿಟಾಚಿ ಯಂತ್ರವನ್ನು ಬಳಸಿ ನದಿಯಿಂದ ಸಾವಿರಾರು ಲೋಡ್ ಮರಳನ್ನು ನದಿಯಂಚಿನ ಪ್ರದೇಶದ ಎರಗಿ, ಸುತ್ತಾ, ಬಾಳೆಕೊಪ್ಪ ಮತ್ತು ಮಳಲಿ ಗ್ರಾಮದ ಕಾಡಿನಲ್ಲಿ ಸಂಗ್ರಹಿಸಿಡಲಾಗಿದೆ. ಖನಿಜ ಸಂಪತ್ತನ್ನು ಸಂರಕ್ಷಿಸುವ ಸಲುವಾಗಿ 2014 ರ ಜ.21ರಂದು ಅಂದಿನ ರಾಜ್ಯ ಸರಕಾರ ಅಧಿಸೂಚನೆ ಹೊರಡಿಸಿ, ಗಣಿ, ಕಂದಾಯ, ಪೊಲೀಸ್ ಹಾಗೂ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಸಂಪೂರ್ಣ ಅಧಿಕಾರ ನೀಡಲಾಗಿದೆ. ಆದರೆ ಅಧಿಕಾರಿಗಳು ಕಾನೂನು ದುರುಪಯೋಗ ಮಾಡಿಕೊಂಡು ಸರ್ಕಾರದ ಆಶಯವನ್ನು ಬದಿಗೊತ್ತಿ ಭ್ರಷ್ಟ ರಾಜಕಾರಣಿಗಳ ಹಾಗೂ ಮರಳು ದಂಧೆಕೋರರ ಹಿತ ಕಾಪಾಡುವಲ್ಲಿ ನಿರತರಾಗಿದ್ದಾರೆ ಎಂದು ಆರೋಪಿಸಿದ್ದಾರೆ.

ಮರಳು ಸಾಗಾಟದ ವಾಹನ ಸಂಚರಿಸಲು ನದಿಯಂಚಿನ ಕಾಡಿನಲ್ಲಿನ ಗಿಡ ಮರಗಳನ್ನು ಲೆಕ್ಕಿಸದೇ ಜೆಸಿಬಿ ಯಂತ್ರವನ್ನು ಬಳಸಿ ರಸ್ತೆ ನಿರ್ಮಾಣ ಮಾಡಿರುವುದರಿಂದ ಬೆಲೆ ಬಾಳುವ ಅರಣ್ಯ ಸಂಪತ್ತು ನಾಶವಾಗುತ್ತಿದೆ. ಈ ಅಕ್ರಮ ಮರಳು ಗಣಿಗಾರಿಕೆ ಸ್ಥಗಿತಗೊಳಿಸುವಂತೆ ಹಲವಾರು ಬಾರಿ ಲಿಖಿತವಾಗಿ ಮನವಿ ನೀಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದಿದ್ದಾರೆ.

ಮರಳು ದಂಧೆಕೋರರು ರಾಜಾರೋಷವಾಗಿ ತಾಲ್ಲೂಕು ಕಛೇರಿ, ಪೊಲೀಸ್ ಸ್ಪೆಷನ್ ಹಾಗೂ ಅರಣ್ಯ ಇಲಾಖೆಯ ಮುಂಭಾಗ ಸಾಗಾಟ ಮಾಡಿದರೂ ಸಹ ಕಾನೂನು ಕ್ರಮ ಕೈಗೊಂಡಿಲ್ಲ. ಇದರಿಂದಾಗಿ ಸರಕಾರದ ಬೊಕ್ಕಸಕ್ಕೆ ಕೋಟ್ಯಂತರ ರೂ.ಗಳು ನಷ್ಟವಾಗುತ್ತಿದೆ. ಆದ್ದರಿಂದ ಅಕ್ರಮ ಮರಳು ಗಣಿಗಾರಿಕೆಯನ್ನು ಸ್ಥಗಿತಗೊಳಿಸಿ ಸಂಗ್ರಹಿಸಲಾದ ಮರಳನ್ನು ವಶಕ್ಕೆ ಪಡೆದು ಸಾರ್ವಜನಿಕರಿಗೆ ಕಡಿಮೆ ಬೆಲೆಯಲ್ಲಿ ವಿತರಿಸಬೇಕು. ಅಕ್ರಮವಾಗಿ ಮರಳು ಸಂಗ್ರಹಿಸಿದ ವ್ಯಕ್ತಿಗಳ ವಿರುದ್ಧ ಹಾಗೂ ಅಕ್ರಮಕ್ಕೆ ಸಹಕರಿಸಿದ ಅಧಿಕಾರಿಗಳ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಗಿರೀಶ್ ಆಚಾರ್ ಒತ್ತಾಯಿಸಿದ್ದಾರೆ.

Leave a Comment