ಹೊಸನಗರ ; ರಿಷಬ್ ಶೆಟ್ಟಿ ನಟನೆ ಮತ್ತು ನಿರ್ದೇಶನ ಮಾಡುತ್ತಿರುವ ಕಾಂತಾರ-1 ಚಿತ್ರದ ಶೂಟಿಂಗ್ ವೇಳೆ ಜಲಾಶಯದಲ್ಲಿ ದೋಣಿ ಮಗುಚಿದ ಘಟನೆ ಶನಿವಾರ ನಡೆದಿದೆ ಎಂದು ವರದಿಯಾಗಿದೆ. ಅದೃಷ್ಟವಶಾತ್ ಚಿತ್ರ ತಂಡದ ಎಲ್ಲರೂ ಸುರಕ್ಷಿತವಾಗಿ ದಡ ಸೇರಿದ್ದಾರೆ ಎಂದು ತಿಳಿದು ಬಂದಿದೆ.
ವರಾಹಿ ಹಿನ್ನೀರಿನ ಪ್ರದೇಶದಲ್ಲಿ ನಡೆಯುತ್ತಿದ್ದ ಶೂಟಿಂಗ್ ವೇಳೆ ದೋಣಿ ಮುಗುಚಿದೆ. ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಯಡೂರು ಸಮೀಪದ ಮಾಣಿ ಜಲಾಶಯದ ವರಾಹಿ ಹಿನ್ನೀರು ಪ್ರದೇಶದಲ್ಲಿ ಶೂಟಿಂಗ್ ನಡೆಯುತ್ತಿತ್ತು. ಮೇಲಿನಕೊಪ್ಪ ಎಂಬ ಮುಳುಗಡೆ ಗ್ರಾಮದ ಬಳಿ ನಡೆಯುತ್ತಿದ್ದ ಕಾಂತರ-1 ಶೂಟಿಂಗ್. ನಾಯಕ ನಟ ರಿಷಬ್ ಶೆಟ್ಟಿ ಇತರರು ಇದ್ದ ದೋಣಿ ನೀರಿಗೆ ಮಗುಚಿ ಕ್ಯಾಮೆರಾಕ್ಕೆ ಹಾನಿಯಾಗಿದೆ. ಬಳಿಕ ರಿಷಬ್ ಶೆಟ್ಟಿ ಹಾಗೂ ಇತರರು ಈಜಿ ದಡ ಸೇರಿದ್ದಾರೆ.
ಮುಳುಗಡೆ ಗ್ರಾಮವಾದ ಹಿನ್ನೆಲೆಯಲ್ಲಿ ಹೆಚ್ಚಿನ ನೀರು ಇರಲಿಲ್ಲ. ಯಾವುದೇ ಪ್ರಾಣಾಪಾಯವಿಲ್ಲದೆ ಎಲ್ಲರೂ ಪಾರಾಗಿದ್ದಾರೆ. ಚಿತ್ರನಟ ರಿಷಬ್ ಶೆಟ್ಟಿ ಸೇರಿದಂತೆ ಹಲವರು ದೋಣಿಯಲ್ಲಿ ಕುಳಿತಿದ್ದರು. ಘಟನೆಯ ನಂತರ ಚಿತ್ರೀಕರಣ ಮುಗಿಸಿ ಇದೀಗ ಯಡೂರು ಸಮೀಪದ ರೆಸಾರ್ಟ್ ಒಂದರಲ್ಲಿ ಚಿತ್ರತಂಡ ತಂಗಿದೆ.
ಕಾಂತಾರ ಚಾಪ್ಟರ್ 1′ ಸಿನಿಮಾ ಸೆಟ್ನಲ್ಲಿ ಸರಣಿ ಅವಘಡಗಳು ನಡೆಯುತ್ತಲೇ ಇವೆ. ಮೊದಲಿಗೆ ಸಿನಿಮಾದಲ್ಲಿ ಕೆಲಸ ಮಾಡುತ್ತಿದ್ದ ಕೇರಳ ಮೂಲದ ಜೂನಿಯರ್ ಆರ್ಟಿಸ್ಟ್ ಒಬ್ಬರು ಈಜಲು ಹೋಗಿ ಮುಳುಗಿ ಪ್ರಾಣಬಿಟ್ಟರು. ಅದಾದ ಮೇಲೆ ಸಿನಿಮಾನಲ್ಲಿ ನಟಿಸಿದ್ದ ಕನ್ನಡದ ಹಾಸ್ಯ ಕಲಾವಿದ ರಾಕೇಶ್ ಪೂಜಾರಿ ಹೃದಯಾಘಾತದಿಂದ ಮೃತಪಟ್ಟರು. ಕೆಲ ದಿನಗಳ ಹಿಂದಷ್ಟೆ ವಿಜು ವಿಕೆ ಎಂಬ ಕೇರಳದ ಕಲಾವಿದ ಮೃತಪಟ್ಟರು. ಅವರು ಸಹ ‘ಕಾಂತಾರ’ ಸಿನಿಮಾನಲ್ಲಿ ನಟಿಸುತ್ತಿದ್ದರು. ಇದೆಲ್ಲದರ ಬಳಿಕ ಈಗ ದೋಣಿಯೇ ಮುಗಿಚಿದೆ. ಆದರೆ ಯಾವುದೇ ಜೀವಹಾನಿ ಸಂಭವಿಸಿದ ವರದಿ ಈವರೆಗೆ ಆಗಿಲ್ಲ.

