ಹೊಸನಗರ : ಇಲ್ಲಿನ ಹಳೆ ಸಾಗರ ರಸ್ತೆಯಲ್ಲಿರುವ ಶ್ರೀ ಗುರುರಾಯರ 355ನೇ ಆರಾಧನಾ ಮಹೋತ್ಸವವ ಭಾನುವಾರ ಶ್ರದ್ಧಾ ಭಕ್ತಿಯಿಂದ ನೆರವೇರಿದ್ದು ದೇವಸ್ಥಾನಕ್ಕೆ ಭಕ್ತ ಸಾಗರವೇ ಹರಿದು ಬಂದಿತು.
ಶನಿವಾರ ಸಂಜೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ವಿದ್ಯುತ್ ದೀಪಾಲಂಕಾರದಲ್ಲಿ ದೇವಸ್ಥಾನ ಜಗಮಗಿಸುವುದರೊಂದಿಗೆ ರಸ್ತೆಯ ಇಕ್ಕೆಲಗಳಲ್ಲಿ ತಳಿರು ತೋರಣಗಳಿಂದ ಸಿಂಗರಿಸಿ, ಹೂವಿನ ಹಾರದೊಂದಿಗೆ ದೇವಸ್ಥಾನವನ್ನು ಸುಂದರವಾಗಿ ಕಾಣುವಂತೆ ಅಲಂಕಾರ ಮಾಡಲಾಗಿತ್ತು.
ಭಾನುವಾರ ಬೆಳಗ್ಗೆ ಎಂದಿನಂತೆ 6 ಗಂಟೆಗೆ ಅಷ್ಟೋತ್ತರ, 11 ಗಂಟೆಗೆ ಪಂಚಾಮೃತಾಭಿಷೇಕ, ಅಲಂಕಾರ ಪೂಜೆ, ಮಹಾಮಂಗಳಾರತಿ ಹಾಗೂ ತೀರ್ಥಪ್ರಸಾದ ವಿತರಣೆ ನಡೆಯಿತು. ನಂತರ ಗಾಯತ್ರಿ ಮಂದಿರದಲ್ಲಿ ಸಾರ್ವಜನಿಕ ಅನ್ನಸಂತರ್ಪಣೆ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.
ಇಷ್ಟು ವರ್ಷಗಳಿಗಿಂತ ಈ ವರ್ಷ ಭಕ್ತಾದಿಗಳ ಸಂಖ್ಯೆ ಹೆಚ್ಚಾಗಿದ್ದು, ಸುಮಾರು 1 ಗಂಟೆಗೆ ಮಳೆರಾಯನ ಅಬ್ಬರ ಹೆಚ್ಚಾಗಿದ್ದರೂ ಭಕ್ತಾದಿಗಳು ಮಳೆಗೆ ಹೆದರದೆ ದೇವರ ಪೂಜೆ ಹಾಗೂ ಅನ್ನಸಂತರ್ಪಣೆಯಲ್ಲಿ ಪಾಲ್ಗೊಂಡು ದೇವರ ಆರಾಧನಾ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
ಅಭಿನಂದನೆ :
ಹೊಸನಗರದ ಹಳೆ ಸಾಗರದ ದಾರಿಯಲ್ಲಿರುವ ಶ್ರೀ ರಾಘವೇಂದ್ರ ಸ್ವಾಮಿ ಬೃಂದಾವನದಲ್ಲಿ ನಡೆದ ರಾಯರ 355ನೇ ಆರಾಧನಾ ಮಹೋತ್ಸವ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು.
ಮಳೆಯಲ್ಲಿಯೂ ಭಕ್ತಾದಿಗಳು ಆಗಮಿಸಿ ರಾಯರ ಪ್ರಸಾದ ಸ್ವೀಕರಿಸಿದರು. ಭಕ್ತವೃಂದಕ್ಕೂ ಹಾಗೂ ಕಾರ್ಯಕ್ರಮ ಯಶಸ್ವಿಯಾಗಲು ಸಹಕರಿಸಿದ ಆಡಳಿತ ಮಂಡಳಿಯ ಎಲ್ಲ ನಿರ್ದೇಶಕ ಸದಸ್ಯರಿಗೂ ರಾಘವೇಂದ್ರ ಸ್ವಾಮಿ ಬೃಂದಾವನ ಸಮಿತಿಯ ಅಧ್ಯಕ್ಷ ವಿಜೇಂದ್ರ ಶೆಟ್ಟಿ ಅಭಿನಂದನೆ ಸಲ್ಲಿಸಿದ್ದಾರೆ.

ಈ ಸಂದರ್ಭದಲ್ಲಿ ಬೃಂದಾವನ ಸಮಿತಿಯ ಗೌರವಾಧ್ಯಕ್ಷ ಉಮೇಶ್ ಕಂಚುಗಾರ್, ಅಧ್ಯಕ್ಷ ವಿಜೇಂದ್ರ ಶೆಟ್ಟಿ, ಪ್ರಧಾನ ಅರ್ಚಕ ಟಿ.ಆರ್. ಪ್ರಸನ್ನಭಟ್, ಉಪಾಧ್ಯಕ್ಷ ಚಂದ್ರಶೇಖರ ಶೆಟ್ಟಿ, ಕಾರ್ಯದರ್ಶಿ ರಾಧಾಕೃಷ್ಣ, ಸಹಕಾರ್ಯದರ್ಶಿ ರಂಗನಾಥ್ ಎನ್., ಖಜಾಂಚಿ ವಾಸುದೇವ ಪಿ. ಸೇರಿದಂತೆ ನಿರ್ದೇಶಕರಾದ ಜಿ. ವಾದಿರಾಜ್ ಭಟ್, ಸದಾಶಿವ ಶ್ರೇಷ್ಠಿ, ರವಿ ಶೆಟ್ಟಿ, ಹರೀಶ್ ಕೆ.ಆರ್., ಸುದೇಶ್ ಕಾಮತ್, ಗಣೇಶ್ ಶೆಟ್ಟಿ, ಧನಂಜಯ ಮಂಡಾನಿ, ಎಚ್.ಎಂ. ನಿತ್ಯಾನಂದ ನಾಯ್ಕ್, ಶ್ರೀಧರ ಮಂಡಾಣಿ, ಮುರುಳೀಧರ ಹತ್ವಾಲ್, ಗೌತಮ್ ಕುಮಾರ್ ಸ್ವಾಮಿ, ಜಿ.ಟಿ. ಈಶ್ವರಪ್ಪ, ಮಿಲ್ ಈಶ್ವರ ಗೌಡ , ಬಾಬು ರಾವ್ ಹಾಗೂ ಇನ್ನಿತರರು ಉಪಸ್ಥಿತರಿದ್ದರು.

