ಹೊಸನಗರ : ಆಯುರ್ವೇದ ಚಿಕಿತ್ಸೆಯು ಭಾರತದಲ್ಲಿ ಪ್ರಾಚಿನ ಕಾಲದಿಂದ ಬಳಕೆಯಲ್ಲಿರುವ ಸಾಂಪ್ರದಾಯಿಕ ವೈದ್ಯ ಪದ್ದತಿಯಾಗಿದೆ. ರೋಗಿಯ ಆರೋಗ್ಯ ಕಾಪಾಡಿ, ರೋಗ ತಡೆಗಟ್ಟಿ ರೋಗಿಯ ದೈಹಿಕ ಮತ್ತು ಮಾನಸಿಕ ಆರೋಗ್ಯದ ಸಮತೋಲನ ಕಾಪಾಡುವುದು ಆಯುರ್ವೇದ ಚಿಕಿತ್ಸೆಯ ಪ್ರಮುಖ ಉದ್ಯೋಗವಾಗಿದೆ ಎಂದು ಖ್ಯಾತ ಆಯುರ್ವೇದ ವೈದ್ಯ ಡಾ. ಪತಾಂಜಲಿ ತಿಳಿಸಿದರು.
ಪಟ್ಟಣದ ಬಸ್ ನಿಲ್ದಾಣ ಸಮೀಪವಿರುವ ಸಮುದಾಯ ಅಭಿವೃದ್ಧಿ ಕೇಂದ್ರದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಆಯುಷ್ ಇಲಾಖೆ, ಪಟ್ಟಣ ಪಂಚಾಯತಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ಆಟೋ ಚಾಲಕರ ಸಂಘದ ಸಹಯೋಗದಲ್ಲಿ ಆಯೋಜಿಸಿದ್ದ ಆಯುಷ್ ವಿಶೇಷ ಆರೋಗ್ಯ ಶಿಬಿರ – 2026 ಉದ್ಘಾಟಿಸಿ ಅವರು ಮಾತನಾಡಿದರು.
ಆಯುರ್ವೇದ ಚಿಕಿತ್ಸಾ ಪದ್ದತಿಯಲ್ಲಿ ಕೇವಲ ಔಷಧಿಯಲ್ಲದೆ ಆಹಾರ ಪದ್ದತಿ, ಜೀವನ ಶೈಲಿ, ವ್ಯಾಯಾಮ ಹಾಗೂ ಚಿಕಿತ್ಸಾ ವಿಧಾನಕ್ಕೂ ಮಹತ್ವ ನೀಡಲಾಗಿದೆ. ಆದರೆ, ಸ್ವಯಂ ರೋಗ ನಿರ್ಣಯ, ಔಷಧಿ ಸೇವನೆ ಆರೋಗ್ಯಕ್ಕೆ ಮಾರಕ ಎಂಬ ಎಚ್ಚರಿಕೆ ನೀಡಿದರು.
ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿ ಎಂ.ಎನ್. ಹರೀಶ್ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ, ಸರಕಾರದ ಹಲವು ಉಚಿತ ಶಿಬಿರಗಳ ಸದ್ದುದೇಶಗಳನ್ನು ಸಾರ್ವಜನಿಕರು ಅರಿತುಕೊಂಡು ಪ್ರಯೋಜನ ಪಡೆಯಲು ಮುಂದಾಗಬೇಕೆಂದು ಎಂದು ಸಲಹೆ ನೀಡಿದರು.
ಇಲ್ಲಿನ ಸರಕಾರಿ ಸಾರ್ವಜನಿಕ ಆಸ್ಪತ್ರೆಯ ವೈದ್ಯ ಡಾ. ಶಾಂತಕುಮಾರ್ ಸೇರಿದಂತೆ ತಾಲೂಕಿನ ನುರಿತ ಆಯುಷ್ ವೈದ್ಯರಾದ ಡಾ. ಜಿ.ಎಂ.ಹರೀಶ್, ಡಾ. ಪ್ರತಿಮಾ ಹಾಗು ಡಾ. ಪ್ರದೀಪ್, ಸುಷ್ಮಾ ಹೆಬ್ಬಾರ್ ಕುಮಾರ್ ಸೇರಿದಂತೆ ಹಲವು ಆಯುಷ್ ವೈದ್ಯರು ಶಿಬಿರದಲ್ಲಿ ಭಾಗವಹಿಸಿ ಆರೋಗ್ಯ ತಪಾಸಣೆ ಕೈಗೊಂಡರು.
ಶಿಬಿರಾರ್ಥಿಗಳಿಗೆ ರಕ್ತದೊತ್ತಡ, ಮಧುಮೇಹ, ಸಂಧು ಕೀಲುಗಳ ನೋವು, ಚರ್ಮದ ಕಾಯಿಲೆ, ಅಲರ್ಜಿ, ಕೆಮ್ಮ, ಉಸಿರಾಟದ ಸಮಸ್ಯೆ, ಸ್ತ್ರೀ ರೋಗ ಸೇರಿದಂತೆ ಇತರೆ ಕಾಯಿಲೆಗಳ ತಪಾಸಣೆ, ಚಿಕಿತ್ಸೆಗೆ ಉಚಿತ ಔಷಧಿ ವಿತರಿಸಲಾಯಿತು.

