ಮುಂದಿನ ಮೂರು ದಿನ ರಾಜ್ಯದ ಈ ಜಿಲ್ಲೆಗಳಲ್ಲಿ ಮಳೆ ಸಾಧ್ಯತೆ

0 1,797

ಬೆಂಗಳೂರು: ರಾಜ್ಯದ ದಕ್ಷಿಣ ಒಳನಾಡಿನ ಒಂದೆರಡು ಕಡೆಗಳಲ್ಲಿ ಮಳೆಯಾಗಲಿದ್ದು, ಇತರೆಡೆ ಇನ್ನೂ ಮೂರು ದಿನ ರಾಜ್ಯದಲ್ಲಿ ಒಣ ಹವೆ ಇರಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಸೋಮವಾರದಿಂದ ಮೂರು ದಿನ ಚಿಕ್ಕಮಗಳೂರು, ಹಾಸನ, ಕೊಡಗು ಮತ್ತು ಶಿವಮೊಗ್ಗ ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ. ಉಳಿದ ಜಿಲ್ಲೆಗಳಲ್ಲಿ ಒಣ ಹವೆ ಇರಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಏ.17 ರಿಂದ ಮೂರು ದಿನ ಬಹುತೇಕ ಎಲ್ಲಾ ಜಿಲ್ಲೆಗಳಲ್ಲಿ ಮಳೆಯಾಗಲಿದೆ. ಆ ಸಂದರ್ಭದಲ್ಲಿ ರಾಜ್ಯದಲ್ಲಿ ಉಷ್ಣಗಾಳಿಯೂ ತಗ್ಗಲಿದ್ದು, ಮಳೆಗಾಲದ ಅನುಭವ ಕೆಲವೆಡೆ ಇರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ

ಎಲ್ಲೆಲ್ಲಿ ಎಷ್ಟು ಮಳೆ?

ಈ ನಡುವೆ ಭಾನುವಾರ ಬೆಳಗ್ಗೆ 8:30 ಕ್ಕೆ ಅಂತ್ಯಗೊಂಡಂತೆ ಕಳೆದ 24 ಗಂಟೆಗಳಲ್ಲಿ ಶಿವಮೊಗ್ಗ ಜಿಲ್ಲೆ ಆಗುಂಬೆಯಲ್ಲಿ 8 ಸೆಂ.ಮೀ., ಕೊಪ್ಪಳ ಜಿಲ್ಲೆ ತಾವರೆಗೇರಾದಲ್ಲಿ 7 ಸೆಂ.ಮೀ., ದಕ್ಷಿಣ ಕನ್ನಡ ಜಿಲ್ಲೆಯ ಧರ್ಮಸ್ಥಳ ಹಾಗೂ ಚಿಕ್ಕಮಗಳೂರು ಜಿಲ್ಲೆಯ ಜಯಪುರ ಮತ್ತು ಎನ್‌.ಆರ್‌. ಪುರದಲ್ಲಿ 4 ಸೆಂ.ಮೀ., ಧಾರವಾಡ, ಕೊಪ್ಪಳ ಜಿಲ್ಲೆಯ ಬೇವೂರು, ರಾಯಚೂರು ಜಿಲ್ಲೆಯ ಮುದಗಲ್‌, ವಿಜಯಪುರ ಜಿಲ್ಲೆಯ ಇಂಡಿ, ಶಿವಮೊಗ್ಗ, ಲಿಂಗನಮಕ್ಕಿ, ಆನವಟ್ಟಿಯಲ್ಲಿ ತಲಾ 3 ಸೆಂ.ಮೀ., ಬೀದರ್‌ ಜಿಲ್ಲೆಯ ಔರಾದ್‌, ವಿಜಯಪುರ ಜಿಲ್ಲೆಯ ದೇವರಹಿಪ್ಪರಗಿ, ಗದಗ ಜಿಲ್ಲೆಯ ರೋಣ, ಕಲಬುರಗಿ ಜಿಲ್ಲೆಯ ಯಡ್ರಾಮಿ, ಧಾರವಾಡ ಜಿಲ್ಲೆಯ ಕಲಘಟಗಿ, ಶಿವಮೊಗ್ಗ ಜಿಲ್ಲೆಯ ತ್ಯಾಗರ್ತಿ, ಚಿಕ್ಕಮಗಳೂರು ಜಿಲ್ಲೆಯ ಕಳಸ, ಬಳ್ಳಾರಿ ಜಿಲ್ಲೆಯ ಕುಡತಿನಿ, ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ, ತರೀಕೆರೆ, ಶೃಂಗೇರಿಯಲ್ಲಿ ತಲಾ 2 ಸೆಂ.ಮೀ. ಮಳೆಯಾಗಿದೆ.

ಮಲೆನಾಡು ಭಾಗದಲ್ಲಿ ಮಳೆ

ಶಿವಮೊಗ್ಗ ಐದು ತಿಂಗಳ ಬಳಿಕ ಜಿಲ್ಲೆಯ ವಿವಿಧೆಡೆ ಶನಿವಾರ ಸಂಜೆ ಬಿರುಗಾಳಿ, ಗುಡುಗು ಸಿಡಿಲು ಸಹಿತ ಸಾಧಾರಣದಿಂದ ಧಾರಾಕಾರವಾಗಿ ಮಳೆ ಸುರಿದಿದೆ.

ತೀರ್ಥಹಳ್ಳಿ, ಸಾಗರ, ಜೋಗ್‌ಫಾಲ್ಸ್‌, ಆನಂದಪುರ, ರಿಪ್ಪನ್‌ಪೇಟೆ, ಶಿಕಾರಿಪುರ, ಶಿರಾಳಕೊಪ್ಪ, ಆನವಟ್ಟಿ ಸುತ್ತಮುತ್ತ ಧಾರಾಕಾರ ಮಳೆಯಾದರೆ, ಶಿವಮೊಗ್ಗ, ಹೊಸನಗರ, ಸೊರಬ ತಾಲೂಕಿನ ವಿವಿಧೆಡೆ ಸಾಧಾರಣ ಮಳೆಯಾಗಿದೆ.

ವರ್ಷದ ಮೊದಲ ಮಳೆಯು ಭೂಮಿ ಮತ್ತು ಜನತೆಗೆ ತಂಪೆರೆದಿದೆ. ಮೂರು ತಿಂಗಳ ಸುಡು ಬಿಸಿಲಿನಿಂದ ಜನ ಬಸವಳಿದು ಮಳೆಯ ನಿರೀಕ್ಷೆಯಲ್ಲಿದ್ದರು. ತೋಟಗಳಿಗೂ ಜೀವ ಬಂದಂತಾಗಿದ್ದು ಕೊಳವೆ ಬಾವಿಗಳ ಯಂತ್ರಗಳಿಗೂ ವಿಶ್ರಾಂತಿ ಸಿಕ್ಕಿದೆ.

Leave A Reply

Your email address will not be published.

error: Content is protected !!