ಹೊಸನಗರ

ಬಂಟೋಡಿ ನಿವಾಸಿಗಳಿಗೆ ಇನ್ನೂ ಸಿಗದ ತೂಗು ಸೇತುವೆ; ಉಕ್ಕಡವನ್ನೇ ಅವಲಂಬಿಸಿ ಜೀವ ಪಣಕ್ಕಿಟ್ಟು ಸಂಚಾರ

ಹೊಸನಗರ: ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಹೊಸೂರು ಸಂಪೆಕಟ್ಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೊಡಚಾದ್ರಿ ತಪ್ಪಲಿನ ಕಟ್ಟಿನ ಹೊಳೆ ಗ್ರಾಮದ ಬಂಟೋಡಿ ನಿವಾಸಿಗಳ ತೂಗು ಸೇತುವೆ ಬೇಡಿಕೆ ಇನ್ನೂ ಈಡೇರಿಲ್ಲ ಎಂಬ ಆಕ್ಷೇಪ ಕೇಳಿಬಂದಿದೆ.

ಕಳೆದ ವರ್ಷ ಚಕ್ರಾ ನದಿಯ ಹಿನ್ನೀರಿನಲ್ಲಿ ಉಕ್ಕಡದ ಮೂಲಕ ನದಿ ದಾಟುತ್ತಿದ್ದ ವೇಳೆ ಸಂಭವಿಸಿದ ದುರಂತದಲ್ಲಿ ಪೂರ್ಣೇಶ್ ಎಂಬ ಯುವಕ ಮೃತಪಟ್ಟಿದ್ದ. ಆ ಘಟನೆ ಬಳಿಕ ಸ್ಥಳೀಯರಿಗೆ ಸುರಕ್ಷಿತ ಸಂಚಾರ ವ್ಯವಸ್ಥೆ ಕಲ್ಪಿಸುವ ಭರವಸೆ ನೀಡಲಾಗಿದ್ದರೂ, ಇದುವರೆಗೆ ತೂಗು ಸೇತುವೆ ಕಾಮಗಾರಿ ಆರಂಭವಾಗಿಲ್ಲ ಎಂದು ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಉಕ್ಕಡ ಮಗುಚಿ ಯುವಕ ಸಾವು

2025ರ ಸೆಪ್ಟೆಂಬರ್ 13ರಂದು ಬಂಟೋಡಿ ಭಾಗದಲ್ಲಿ ಚಕ್ರ ನದಿಯ ಹಿನ್ನೀರನ್ನು ಉಕ್ಕಡದ ಮೂಲಕ ದಾಟುತ್ತಿದ್ದ ವೇಳೆ ಅದು ಆಕಸ್ಮಿಕವಾಗಿ ಮಗುಚಿ ಪೂರ್ಣೇಶ್ ಎಂಬ ಯುವಕ ಮೃತಪಟ್ಟಿದ್ದ ಎಂದು ಸ್ಥಳೀಯರು ತಿಳಿಸಿದ್ದಾರೆ.

ಘಟನೆಯ ದಿನ ಶವ ಪತ್ತೆಯಾಗದೇ ಇದ್ದ ಹಿನ್ನೆಲೆಯಲ್ಲಿ ಈಶ್ವರ್ ಮಲ್ಪೆ ಅವರನ್ನು ಕರೆಸಲಾಗಿದ್ದು, ಮರುದಿನ ಸುಮಾರು 40 ಅಡಿ ಆಳದಿಂದ ಯುವಕನ ಶವವನ್ನು ಹೊರತೆಗೆದಿದ್ದರು.

ಈ ಘಟನೆ ಬಳಿಕ ಬಂಟೋಡಿಯಲ್ಲಿ ವಾಸಿಸುವ ಐದಾರು ಕುಟುಂಬಗಳ ಸಂಚಾರ ಸಮಸ್ಯೆ ಮತ್ತೆ ಮುನ್ನೆಲೆಗೆ ಬಂದಿತ್ತು.

ಮಳೆಗಾಲದಲ್ಲಿ ನದಿ ದಾಟುವುದೇ ಸವಾಲು

ಬಂಟೋಡಿ ನಿವಾಸಿಗಳು ಮಳೆಗಾಲದಲ್ಲಿ ನದಿ ದಾಟಲು ಉಕ್ಕಡವನ್ನೇ ಅವಲಂಬಿಸಬೇಕಾದ ಪರಿಸ್ಥಿತಿ ಇದೆ. ಕೂಲಿ ಕೆಲಸ, ಶಾಲೆ, ಆಸ್ಪತ್ರೆ ಸೇರಿದಂತೆ ದಿನನಿತ್ಯದ ಅಗತ್ಯಗಳಿಗಾಗಿ ಇದೇ ಅಪಾಯಕಾರಿ ಮಾರ್ಗವನ್ನು ಬಳಸಬೇಕಾಗಿದೆ ಎಂದು ಸ್ಥಳೀಯರು ಹೇಳಿದ್ದಾರೆ.

ಹಿನ್ನೀರು ಹೆಚ್ಚಾದಾಗ ಸಂಚಾರ ಇನ್ನಷ್ಟು ಅಪಾಯಕಾರಿಯಾಗುತ್ತದೆ. ಈ ಕಾರಣದಿಂದಲೇ ಸುರಕ್ಷಿತ ತೂಗು ಸೇತುವೆ ನಿರ್ಮಿಸಬೇಕು ಎಂಬ ಬೇಡಿಕೆ ಹಲವು ವರ್ಷಗಳಿಂದ ಕೇಳಿಬರುತ್ತಿದೆ.

ಶಾಸಕರಿಂದ ಭರವಸೆ, ₹5 ಲಕ್ಷ ಪರಿಹಾರ

ದುರಂತದ ಸಂದರ್ಭದಲ್ಲಿ ಸ್ಥಳಕ್ಕೆ ಭೇಟಿ ನೀಡಿದ್ದ ತೀರ್ಥಹಳ್ಳಿ ಕ್ಷೇತ್ರದ ಶಾಸಕ ಆರಗ ಜ್ಞಾನೇಂದ್ರ ಅವರು ಮೃತರ ಕುಟುಂಬಕ್ಕೆ ಸಾಂತ್ವನ ಹೇಳಿ, ಸರ್ಕಾರದಿಂದ ಪರಿಹಾರ ನೀಡುವುದಾಗಿ ತಿಳಿಸಿದ್ದರು.

ನಂತರ ಮೃತರ ಕುಟುಂಬಕ್ಕೆ ₹5 ಲಕ್ಷ ಪರಿಹಾರದ ಚೆಕ್ ನೀಡಲಾಗಿತ್ತು.

ಇದೇ ವೇಳೆ, ಇಂತಹ ಘಟನೆ ಮರುಕಳಿಸದಂತೆ ಬಂಟೋಡಿ ನಿವಾಸಿಗಳಿಗೆ ತೂಗು ಸೇತುವೆ ನಿರ್ಮಿಸುವುದಾಗಿ ಶಾಸಕರು ಭರವಸೆ ನೀಡಿದ್ದರು ಎನ್ನಲಾಗಿದೆ.

ಕಣಕಿಯ ಹಳೆಯ ತೂಗು ಸೇತುವೆ ಸ್ಥಳಾಂತರಿಸುವ ಯೋಜನೆ

ಕಣಕಿಯಲ್ಲಿ ಈಗಾಗಲೇ ನಿರ್ಮಾಣಗೊಂಡು ಬಳಕೆಯಲ್ಲಿಲ್ಲದ, ಆದರೆ ಬಳಸಲು ಯೋಗ್ಯವಾಗಿರುವ ಹಳೆಯ ತೂಗು ಸೇತುವೆಯನ್ನು ಬಂಟೋಡಿಗೆ ಸ್ಥಳಾಂತರಿಸಿ ಅಳವಡಿಸುವ ಬಗ್ಗೆ ಅಧಿಕಾರಿಗಳು ಪರಿಶೀಲನೆ ನಡೆಸಿದ್ದರು ಎಂದು ಸ್ಥಳೀಯರು ತಿಳಿಸಿದ್ದಾರೆ.

ನೀರು ಕಡಿಮೆಯಾದ ಬಳಿಕ ಅಗತ್ಯ ಪಿಲ್ಲರ್ ನಿರ್ಮಾಣ ಹಾಗೂ ಸೇತುವೆ ಸಾಗಾಟದ ವ್ಯವಸ್ಥೆ ಮಾಡಿ ಕಾಮಗಾರಿ ಆರಂಭಿಸಲಾಗುವುದು ಎಂದು ಭರವಸೆ ನೀಡಲಾಗಿತ್ತು ಎನ್ನಲಾಗಿದೆ.

ನಂತರ ಇಂಜಿನಿಯರ್‌ಗಳು ಮತ್ತು ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿದರೂ, ಹಿನ್ನೀರು ಕಡಿಮೆಯಾಗಿ ಹಲವು ತಿಂಗಳು ಕಳೆದಿದ್ದರೂ ಕಾಮಗಾರಿ ಆರಂಭವಾಗಿಲ್ಲ ಎಂಬುದು ಸ್ಥಳೀಯರ ಆರೋಪ.

ಮತ್ತೆ ಮಳೆಗಾಲ, ಮತ್ತೆ ಅದೇ ಅಪಾಯ

ಈಗ ಮತ್ತೆ ಮಳೆಗಾಲ ಆರಂಭವಾಗಿದ್ದು, ಹಿನ್ನೀರು ತುಂಬಿಕೊಂಡಿರುವುದರಿಂದ ಮುಂದಿನ ನಾಲ್ಕೈದು ತಿಂಗಳು ಕೂಡ ನಿವಾಸಿಗಳು ಉಕ್ಕಡವನ್ನೇ ಅವಲಂಬಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ಒಮ್ಮೆ ಪ್ರಾಣಹಾನಿ ಸಂಭವಿಸಿದ ಬಳಿಕವೂ ಶಾಶ್ವತ ಸುರಕ್ಷತಾ ವ್ಯವಸ್ಥೆ ಕಲ್ಪಿಸದಿರುವುದು ಬೇಸರದ ಸಂಗತಿ ಎಂದು ಸ್ಥಳೀಯರು ಹೇಳಿದ್ದಾರೆ.

ಚುನಾವಣೆ ಸಂದರ್ಭದಲ್ಲಷ್ಟೇ ಬಂಟೋಡಿ ನಿವಾಸಿಗಳ ಸಮಸ್ಯೆ ನೆನಪಾಗುತ್ತದೆ ಎಂಬ ಅಸಮಾಧಾನವೂ ವ್ಯಕ್ತವಾಗಿದೆ.

ತಕ್ಷಣ ಕ್ರಮಕ್ಕೆ ಆಗ್ರಹ

ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುವ ಕುಟುಂಬಗಳು, ಮಕ್ಕಳು ಮತ್ತು ವೃದ್ಧರು ಪ್ರತಿದಿನ ಅಪಾಯಕಾರಿ ನದಿ ದಾಟಬೇಕಾಗಿರುವುದರಿಂದ, ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ತಕ್ಷಣ ಗಮನಹರಿಸಬೇಕು ಎಂದು ನಿವಾಸಿಗಳು ಒತ್ತಾಯಿಸಿದ್ದಾರೆ.

ತೂಗು ಸೇತುವೆ ನಿರ್ಮಾಣದ ಭರವಸೆಯನ್ನು ವಿಳಂಬ ಮಾಡದೇ ಅನುಷ್ಠಾನಗೊಳಿಸಿ, ಮತ್ತೊಂದು ಅನಾಹುತ ಸಂಭವಿಸುವ ಮೊದಲು ಸುರಕ್ಷಿತ ಸಂಚಾರ ವ್ಯವಸ್ಥೆ ಕಲ್ಪಿಸಬೇಕೆಂದು ಆಗ್ರಹಿಸಿದ್ದಾರೆ.

Leave a Comment