ಹೊಸನಗರ ; ಡಿ. 31ರ ರಾತ್ರಿ ಸುಮಾರು 2 ಗಂಟೆಯ ಸಂದರ್ಭದಲ್ಲಿ ಮಾಧವಶೆಟ್ಟಿಗೆ ಬಿಜೆಪಿ ಕಾರ್ಯಕರ್ತರು ಹೊಡೆದಿದ್ದಾರೆ, ಕೊಲೆ ಮಾಡಲು ಸಂಚು ನಡೆಸಿದ್ದಾರೆ ಎಂದು ಮೂರು ಜನ ಬಿಜೆಪಿ ಕಾರ್ಯಕರ್ತರನ್ನು ಜೈಲಿಗೆ ಅಟ್ಟಿದ್ದು ಇದರ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸಬೇಕು ಹಾಗೂ ಕೆಲವು ಭ್ರಷ್ಠ ಸರ್ಕಾರಿ ಅಧಿಕಾರಿಗಳು ಶಾಸಕರ ಕೈಗೊಂಬೆಯಾಗಿ ಕೆಲಸ ನಿರ್ವಹಿಸುತ್ತಿದ್ದು ಬಿಜೆಪಿ ಕಾರ್ಯಕರ್ತರಿಗೆ ಹಿಂಸೆ ನೀಡುತ್ತಿದ್ದಾರೆ ಇವುಗಳನ್ನ ಒಳಗೊಂಡ ಹೊಸನಗರ ತಾಲ್ಲೂಕಿನ ಎಲ್ಲ ಸಮಸ್ಯೆಗಳನ್ನು ಇಟ್ಟುಕೊಂಡು ಜ. 17ರ ಹೊಸನಗರದಲ್ಲಿ ಶನಿವಾರ ಬೃಹತ್ ಪ್ರತಿಭಟನಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಹಾಗೂ ಮಾಜಿ ಸಚಿವ ಹರತಾಳು ಹಾಲಪ್ಪ ಹೇಳಿದರು.
ಇಲ್ಲಿನ ಬಿಜೆಪಿ ಕಛೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನಾವು ಮತ್ತು ನಮ್ಮ ಕಾರ್ಯಕರ್ತರು ಎರಡೂವರೆ ವರ್ಷದಿಂದ ತಾಳಿಕೊಂಡು ಬರುತ್ತಿದ್ದೇವೆ. ಹೊಸನಗರ, ಸಾಗರ ಕ್ಷೇತ್ರದ ಶಾಸಕರು ಅಧಿಕಾರಿಗಳನ್ನು ಮುಂದೆ ಬಿಟ್ಟು ತಮ್ಮ ಕಾರ್ಯಕರ್ತರ ವಿರುದ್ಧ ಸೇಡು ತೀರಿಸಿಕೊಳ್ಳುತ್ತಿದ್ದಾರೆ. ಡಿಸೆಂಬರ್ 31ರ ರಾತ್ರಿ ಮಾಜಿ ಶಾಸಕ ಬಿ.ಸ್ವಾಮಿರಾವ್ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದು ತಂದೆಯ ಜೊತೆಯಲ್ಲಿ ಸುರೇಶ್ ಸ್ವಾಮಿರಾವ್ ಮತ್ತು ಸ್ನೇಹಿತರು ಇದ್ದು ಅಲ್ಲಿಗೆ ಕಾಂಗ್ರೆಸ್ ಮುಖಂಡ ಶಾಸಕರ ಭಂಟ ಮಾಧವಶೆಟ್ಟಿಗೆ ಎರಡೂವರೆ ಗಂಟೆಗೆ ಸತ್ಯಾಗ್ರಹ ನಡೆಸುವ ಸ್ಥಳಕ್ಕೆ ಬರುವ ಅಗತ್ಯವೆನಿತ್ತು ಎಂದು ಪ್ರಶ್ನಿಸಿದರು.
ಹೊಸನಗರ-ಸಾಗರ ಕ್ಷೇತ್ರದ ಶಾಸಕರು ಪೊಲೀಸ್ ಇಲಾಖೆ, ಕಂದಾಯ ಇಲಾಖೆ ಮೆಸ್ಕಾಂ ಇಲಾಖೆ ಅರಣ್ಯ ಇಲಾಖೆಯ ಅಧಿಕಾರಿಗಳನ್ನು ದೂರುಪಯೋಗ ಪಡಿಸಿಕೊಂಡು ತಮ್ಮ ಕೆಲಸ ಸಾಧಿಸಿಕೊಳ್ಳುತ್ತಿದ್ದಾರೆ. ಅಧಿಕಾರಿಗಳು ಅಧಿಕಾರ ದುರುಪಯೋಗ ಪಡಿಸಿಕೊಂಡು ಶಾಸಕರ ಮಾತಿಗೆ ತಲೆ ಅಲ್ಲಾಡಿಸುತ್ತಿದ್ದಾರೆ. ಅಧಿಕಾರಿಗಳು ಕಾನೂನು ಅಡಿಯಲ್ಲಿ ಕೆಲಸ ಮಾಡಲಿ ಇಲ್ಲವಾದರೆ ಬಿಜೆಪಿಯ ಪ್ರತಿಭಟನೆಗೆ ಗಾಳಿಪಟವಾಗಿ ಹಾರಿ ಹೋಗುತ್ತೀರಿ ಎಂದು ಅಧಿಕಾರಿಗಳಿಗೆ ಎಚ್ಚರಿಸಿದರು.
ಜ. 17ರ ಶನಿವಾರ ನಡೆಯುವ ಬಿಜೆಪಿ ಪ್ರತಿಭಟನೆಯಲ್ಲಿ ಲೋಕಸಭಾ ಸದಸ್ಯ ಬಿ.ವೈ ರಾಘವೇಂದ್ರ, ತೀರ್ಥಹಳ್ಳಿ ಶಾಸಕ ಆರಗ ಜ್ಞಾನೇಂದ್ರ, ಶಿವಮೊಗ್ಗ ಶಾಸಕ ಚನ್ನಬಸಪ್ಪ, ಜಿಲ್ಲಾಧ್ಯಕ್ಷ ಜಗದೀಶ್, ಟಿ.ಡಿ ಮೇಘರಾಜ್, ಶಿವರಾಜ್, ಎಂ.ಎನ್ ಸುಧಾಕರ್, ಉಮೆಶ್ ಕಂಚುಗಾರ್, ಆರ್.ಟಿ ಗೋಪಾಲ್ ಹಾಗೂ ಹೊಸನಗರದ ಕ್ಷೇತ್ರದ ಎಲ್ಲ ಬಿಜೆಪಿ ಕಾರ್ಯಕರ್ತರು ಆಗಮಿಸಲಿದ್ದಾರೆ ಎಂದರು.
ಪತ್ರಿಕಾಘೋಷ್ಠಿಯಲ್ಲಿ ಬಿಜೆಪಿ ತಾಲ್ಲೂಕು ಪ್ರಭಾರಿ ಪದ್ಮಿನಿ, ಎನ್.ಆರ್ ದೇವಾನಂದ್, ಗಣಪತಿ ಬಿಳಗೋಡು, ಜೆಡಿಎಸ್ ತಾಲ್ಲೂಕು ಅಧ್ಯಕ್ಷ ವರ್ತೆಶ್, ಕೆ.ವಿ. ಕೃಷ್ಣಮೂರ್ತಿ, ಆಲವಳ್ಳಿ ವೀರೇಶ್, ಉಮೆಶ್ ಕಂಚುಗಾರ್, ಎಂ.ಎನ್ ಸುಧಾಕರ, ಯುವರಾಜ್, ಹಾಲಗದ್ದೆ ಉಮೇಶ್, ಆರ್.ಟಿ ಗೋಪಾಲ್, ಶ್ರೀಪತಿರಾವ್, ಮಂಜುನಾಥ ಸಂಜೀವ, ಸತ್ಯನಾರಾಯಣ, ವಿಜಯಕುಮಾರ್ ಮಂಡಾನಿ ಮೋಹನ್ ಮುಂತಾದವರು ಉಪಸ್ಥಿತರಿದ್ದರು.

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್ಸೈಟ್ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 7 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್ಸೈಟ್ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ ‘ಮಲ್ನಾಡ್ ಟೈಮ್ಸ್’ ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ.





