ಹೊಸನಗರ ; ತಾಲ್ಲೂಕಿನ ಆರ್ಯ ಈಡಿಗ ಸಂಘಕ್ಕೆ ಸುಮಾರು ನೂರು ವರ್ಷಗಳ ಇತಿಹಾಸವಿದೆ. ಈ ಸಂಘದ ಏಳಿಗೆಗಾಗಿ ಸಾಕಷ್ಟು ಜನರು ದುಡಿದಿದ್ದಾರೆ. ಕೆಲವು ಹಿತಶತ್ರು ಬಾಂಧವರು ಆರ್ಯ ಈಡಿಗರ ಸಭಾಭವನವನ್ನು ಉದ್ಘಾಟಿಸಲು ಹೊರಟಿದ್ದಾರೆ. ಈಗ ಇರುವ ಆಡಳಿತ ಮಂಡಳಿ 15 ವರ್ಷದ ಲೆಕ್ಕಪತ್ರಗಳನ್ನು ನೀಡಿ ಉದ್ಘಾಟಿಸಿದರೆ ನಮ್ಮದೇನು ಅಭ್ಯಂತರವಿಲ್ಲ. ಹಾಗೆಯೇ ಉದ್ಘಾಟಿಸಲು ಹೊರಟರೆ ಉದ್ಘಾಟನೆಗೆ ಬಂದ ರಾಜಕಾರಣಿಗಳ ಮುಂದೆ ಕಪ್ಪು ಬಾವುಟ ಪ್ರದರ್ಶನ ನಡೆಸುವುದಾಗಿ ದೀವರ (ಈಡಿಗರ) ಹಿತರಕ್ಷಣಾ ವೇದಿಕೆಯ ಅಧ್ಯಕ್ಷ ಸೊನಲೆ ಶ್ರೀನಿವಾಸ್ ಹೇಳಿದರು.
ಹೊಸನಗರದ ಶೀತಲ್ ಹೋಟೆಲ್ನಲ್ಲಿ ಸುದ್ಧಿಗೋಷ್ಠಿ ನಡೆಸಿ ಮಾತನಾಡಿದ ಅವರು, ಈ ವಿಷಯವಾಗಿ ಶಿವಮೊಗ್ಗ ಉಸ್ತುವಾರಿ ಸಚಿವರಾದ ಮಧು ಬಂಗಾರಪ್ಪರಿಗೆ ಶಾಸಕ ಬೇಳೂರು ಗೋಪಾಲಕೃಷ್ಣ, ಕಾಗೋಡು ತಿಮ್ಮಪ್ಪರಿಗೆ ಹಾಗೂ ಆರ್ಯ ಈಡಿಗರ ಜನಪ್ರತಿನಿಧಿಗಳಿಗೆ ಹಾಗೂ ಆರ್ಯ ಈಡಿಗರ ಸಭಾಭವನದ ಉದ್ಘಾಟನೆಗೆ ಬರುವ ಎಲ್ಲ ರಾಜಕೀಯ ನಾಯಕರುಗಳಿಗೆ ಪತ್ರ ಬರೆದಿದ್ದು, ನಮ್ಮ ಜನಾಂಗದ ಹಿತವನ್ನೇ ಬಯಸುವ ಹೋರಾಟಗಾರರು, ಮಾತ್ರವಲ್ಲ ನಮ್ಮೆಲ್ಲರ ಪ್ರೀತಿಯ ನಾಯಕರಾದ ತಮ್ಮ ಬಳಿ ವಿನಂತಿಸುವುದೇನೆಂದರೆ ಪ್ರಸ್ತುತ ಹೊಸನಗರದ ದೀವರ ವಿದ್ಯಾವರ್ಧಕ (ಈಡಿಗರ) ಸಂಘದ ಹಣ ದುರುಪಯೋಗ ಮಾಡಿ ಸಿಕ್ಕಿ ಬಿದ್ದಿರುವ ಸ್ವಾರ್ಥಿಗಳ ಆಡಳಿತ ಮಂಡಳಿಯ ಕೈಯಲ್ಲಿದ್ದು ಇದನ್ನು ದೀವರ ಜನತೆ ಪ್ರಶ್ನಿಸಿದ್ದರಿಂದ ತುರಾತುರಿಯಲ್ಲಿ ಉದ್ಘಾಟನಾ ಸಮಾರಂಭ ನಡೆಸಲು ಹೊರಟಿದ್ದಾರೆ ಹಾಗೂ ತಮ್ಮಂತಹ ಜನಪ್ರಿಯ ನಾಯಕರನ್ನು ಆಹ್ವಾನಿಸಿ ಇವರಿಗೆ ಅಂಟಿಕೊಂಡ ಕಳ್ಳತನದ ಕಳಂಕವನ್ನು ಮುಚ್ಚಿಕೊಳ್ಳುವ ಹುನ್ನಾರ ನಡೆಸಿದ್ದಾರೆ.
ಸುಮಾರು 2.5 ಕೋಟಿ ರೂ. ಅನುದಾನ ಬಂದಿದ್ದು ಅದರಲ್ಲಿ ಸುಮಾರು 66 ಲಕ್ಷ ರೂ. ದುರ್ಬಬಳಕೆಯಾಗಿದ್ದಕ್ಕೆ ದಾಖಲೆಗಳಿವೆ.
ಸಂಘದ ಅಧಿಕೃತ ಬ್ಯಾಂಕ್ ಖಾತೆ ಹೊರತುಪಡಿಸಿ ಅನೇಕ ಬ್ಯಾಂಕ್ನಲ್ಲಿ ನಕಲಿ ಖಾತೆ ತೆರೆದು ಅನುದಾನವನ್ನು ಡ್ರಾ ಮಾಡಿ ಬಳಸಿಕೊಂಡಿದ್ದಕ್ಕೆ ದಾಖಲೆಗಳಿವೆ. ಮಾತ್ರವಲ್ಲ 10-15 ವರ್ಷಗಳಿಂದ ನಕಲಿ ಸರ್ವ ಸದಸ್ಯರ ಸಭೆ ಮತ್ತು ಮೀಟಿಂಗ್ ನಡೆಸಿ ಸದಸ್ಯರ ಹೆಚ್ಚೇಕೆ ಮಾಜಿ ಶಾಸಕರಾದ ಬಿ.ಸ್ವಾಮಿರಾವ್ ಸಹಿಯನ್ನು ನಕಲು ಮಾಡಿರುವ ಬಗ್ಗೆ ನಮ್ಮಲ್ಲಿ ದಾಖಲೆಗಳಿವೆ. ಸಂಘದ ಪದಾಧಿಕಾರಿಗಳು ತಮ್ಮ ಸ್ವಂತ ಖಾತೆಗೆ ಸಂಘದ ಹಣವನ್ನು ವರ್ಗಾಯಿಸಿಕೊಂಡು ದುರ್ಬಳಕೆ ಮಾಡಿಕೊಂಡಿರುವುದಕ್ಕೆ ದಾಖಲೆಗಳಿವೆ. ಸುಮಾರು 15 ವರ್ಷಗಳ ಹಿಂದೆ ಅಡ್ಡದಾರಿಯಿಂದ ಅಧಿಕಾರ ಹಿಡಿದ ಈಗಿನ ಪದಾಧಿಕಾರಿಗಳು ಕಳೆದ 15 ವರ್ಷಗಳಿಂದ ಆಡಳಿತ ಮಂಡಳಿಯ ಚುನಾವಣೆ ನಡೆಸಿಲ್ಲ. ಸರ್ವ ಸದಸ್ಯರ ಸಭೆಯನ್ನೇ ಕರೆದಿರುವುದಿಲ್ಲ. ಜನಾಂಗದ ಯುವಕರನ್ನು ಕತ್ತಲೆಯಲ್ಲಿಟ್ಟು ದ್ರೋಹ ಎಸಗಿದ್ದಾಕ್ಕಾಗಿ ದೀವರ ಜನಾಂಗದಲ್ಲಿ ವ್ಯಾಪಕ ಅಸಮದಾನವಿದೆ. ಆದ್ದರಿಂದ ಈ ಭ್ರಷ್ಟ ಆಡಳಿತ ಮಂಡಳಿಯ ಸಭೆಗೆ ತಾವು ಬರುವುದನ್ನು ದೀವರ ಜನಾಂಗ ಇಷ್ಟಪಡುವುದಿಲ್ಲ. ಸಂಘದ ವಾಣಿಜ್ಯ ಮಳಿಗೆಗಳಿಗೆ ಕಡಿಮೆ ಬಾಡಿಗೆ ವಿಧಿಸಿ ಅನಧಿಕೃತವಾಗಿ ಹೆಚ್ಚುವರಿ ವಸೂಲಿ ಮಾಡುತ್ತಾ ಜನಾಂಗಕ್ಕೆ ಅನ್ಯಾಯ ಮಾಡುತ್ತಿರುವ ಬಗ್ಗೆ ದಾಖಲೆಗಳಿವೆ. ಇಂತಹ ಇನ್ನೂ ಹತ್ತಾರು ಆರೋಪಗಳು ಈ ಭ್ರಷ್ಟ ಆಡಳಿತ ಮಂಡಳಿಯ ಮೇಲಿದೆ.
ಈ ಭ್ರಷ್ಟ ಪದಾಧಿಕಾರಿಗಳು ಮೊದಲು ಅನಧಿಕೃತವಾದ ಆಡಳಿತ ಮಂಡಳಿಯನ್ನು ವಿಸರ್ಜಿಸಬೇಕು ನಂತರ ಸರ್ವ ಸದಸ್ಯರ ಸಭೆ ಕರೆದು ಚುನಾವಣೆ ನಡೆಸಿ ಪ್ರಾಮಾಣಿಕವಾದ ಜನಾಂಗದ ಹಿತ ಕಾಯುವ ಹೊಸ ಕಮಿಟಿ ರಚಿಸಬೇಕು. ಇವರುಗಳು ಮಾಡಿದ ಭ್ರಷ್ಟಾಚಾರವನ್ನು ಬಯಲಿಗೆಳೆದು ಜನತೆಯ ಹಣವನ್ನು ನುಂಗಿದವರಿಂದ ವಾಪಸ್ ಕಕ್ಕಿಸಬೇಕು ಎಂಬುದು ಜನಾಂಗದ ಸ್ವಚ್ಛ ಮನಸ್ಸುಗಳ ಸಮಾನ ಮನಸ್ಕರ ಆಶಾಯವಾಗಿದ್ದು ಯಾವುದೇ ರಾಜಕಾರಣಿಗಳು ಈ ಉದ್ಘಾಟನೆಗೆ ಬರಬಾರದಂದು ಪತ್ರ ಮೂಲಕ ತಿಳಿಸಿದ್ದಾರೆ.
ದೀವರ (ಈಡಿಗರ) ಹಿತರಕ್ಷಣಾ ವೇದಿಕೆಯ ನರ್ಲೇ ಎನ್.ಇ.ಸ್ವಾಮಿ ಮಾತನಾಡಿ, ಇಡೀ ತಾಲ್ಲೂಕಿನ ಹಿರಿಯರನ್ನು ಭೇಟಿಯಾಗಿ ಮಾಹಿತಿ, ಸಲಹೆಯನ್ನು ಪಡೆದು ಜನಾಂಗದ ಹಿತಕ್ಕಾಗಿ ನಾವುಗಳು ಹೋರಾಟ ಆರಂಭಿಸಿದ್ದೇವೆ. ನಮ್ಮ ಹೋರಾಟ ಆರಂಭವಾದ ಕೂಡಲೇ ಜನಾಂಗದವರಿಗೆ ಗೊಂದಲ ಮಾಡಲು ಅವರು ತುರಾತುರಿಯಲ್ಲಿ ಉದ್ಘಾಟನಾ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿದ್ದಾರೆ. ಈ ಹಂತದಲ್ಲಿ ತಾವುಗಳು ಅವರ ಸಭೆಗೆ ಹೋದಲ್ಲಿ ಜನಾಂಗದ ಪ್ರಜ್ಞಾವಂತ ಮನಸ್ಸುಗಳಿಗೆ ಘಾಸಿಯಾಗುತ್ತದೆ. ಮಾತ್ರವಲ್ಲ ಭ್ರಷ್ಟರಿಗೆ ಒಂದು ರೀತಿಯ ರಕ್ಷಣೆ ಸಹಾ ಸಿಕ್ಕಿಬಿಡುತ್ತದೆ. ಆದ್ದರಿಂದ ತಾವುಗಳು ದಯಮಾಡಿ ನಿಮ್ಮನ್ನು ಆಹ್ವಾನಿಸಲು ಬಂದ ಅನಧಿಕೃತ ಆಡಳಿತ ಮಂಡಳಿಯವರಿಗೆ ಮೊದಲು ಪ್ರಜಾಪ್ರಭುತ್ವ ಮಾದರಿಯಲ್ಲಿ ಸಂಘದಲ್ಲಿ ಚುನಾವಣೆ ನಡೆಸಿ ಅಧಿಕೃತವಾಗಿ ಬನ್ನಿ. ನಿಷ್ಪಕ್ಷಪಾತವಾದ ತನಿಖೆ ನಡೆದು ಸ್ವಚ್ಛವಾಗಿ ಬನ್ನಿ ನಂತರ ಉದ್ಘಾಟನೆ ಮಾಡೋಣ ಎಂದು ರಾಕಾರಣಿಗಳು ಹಾಗೂ ಸಂಬಂಧಪಟ್ಟವರು ತಿಳಿ ಹೇಳಿ ವಾಪಸ್ ಕಳುಹಿಸಬೇಕಾಗಿ ಎಂದು ಮನವಿ ಮಾಡಿದರು.
ಈ ಪತ್ರಿಕಾಘೋಷ್ಠಿಯಲ್ಲಿ ಪ್ರಮುಖರಾದ ಎನ್.ಇ.ಸ್ವಾಮಿ, ಕಾಪಿ ಮಹೇಶ, ಗಣಪತಿ ಮಾಕನಕಟ್ಟೆ, ಕುಮಾರ ಮಂಡಾನಿ, ವಾಸಪ್ಪ ಮಾಸ್ತಿಕಟ್ಟೆ, ನಾಗಪ್ಪ ಮತ್ತಿತರರು ಇದ್ದರು.

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್ಸೈಟ್ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 7 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್ಸೈಟ್ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ ‘ಮಲ್ನಾಡ್ ಟೈಮ್ಸ್’ ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ.





