ಚಿಕ್ಕಮಗಳೂರು: ಮದ್ಯ ಸೇವಿಸಲು ಹಣ ನೀಡಲಿಲ್ಲ ಎಂಬ ಕಾರಣಕ್ಕೆ ಜೀವನಪೂರ್ತಿ ಜೊತೆಯಾಗಿರುವುದಾಗಿ ಹೇಳಿ ತಾಳಿ ಕಟ್ಟಿದ ಪತ್ನಿಯನ್ನೇ ಥಳಿಸಿ ಕೊಲೆ ಮಾಡಿದ್ದ ಆರೋಪಿಗೆ ಚಿಕ್ಕಮಗಳೂರು ಜಿಲ್ಲಾ ನ್ಯಾಯಾಲಯ ಜೀವಾವಧಿ ಸಜೆ ಮತ್ತು ದಂಡ ವಿಧಿಸಿ ತೀರ್ಪು ನೀಡಿದೆ.
ಕಡೂರ ತಾಲ್ಲೂಕಿನ ಪಂಚನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಬಿ . ಕಾವಲುಹಟ್ಟಿಯ ಶೇಖರಪ್ಪ ಶಿಕ್ಷೆಗೆ ಗುರಿಯಾದ ಆರೋಪಿ. ಮದ್ಯ ಸೇವಿಸಲು ಹಣ ಕೊಡುವಂತೆ 2021ರ ಜುಲೈ 8ರಂದು ತನ್ನ ಪತ್ನಿ ಗೀತಾಳಿಗೆ ಪೀಡಿಸಿದ್ದನು. ಹಣ ನೀಡಲು ಆಕೆ ನಿರಾಕರಿಸಿದ್ದರಿಂದ ಜಗಳವಾಗಿ ಮಕ್ಕಳ ಮಧ್ಯಸ್ಥಿಕೆಯಲ್ಲಿ ಸಮಾಧಾನಪಡಿಸಲಾಗಿತ್ತು. ಸಂಜೆ ಮಕ್ಕಳಿಲ್ಲದ ವೇಳೆ ಮತ್ತೆ ಪತ್ನಿಯೊಂದಿಗೆ ಜಗಳ ತೆಗೆದ ಶೇಖರಪ್ಪ, ಕೋಲಿನಿಂದ ಮಾರಣಾಂತಿಕವಾಗಿ ಹಲ್ಲೆ ಮಾಡಿ ಪರಾರಿಯಾಗಿದ್ದನು. ರಾತ್ರಿ ವಾಹನದ ವ್ಯವಸ್ಥೆ ಇಲ್ಲದ್ದರಿಂದ ಮರುದಿನ ಆಸ್ಪತ್ರೆಗೆ ಕರೆದೊಯ್ಯಲು ನಿರ್ಧರಿಸಿ ಗೀತಾಳನ್ನು ಮನೆಯಲ್ಲೇ ಮಲಗಿಸಲಾಗಿತ್ತು. ಬೆಳಗ್ಗೆ ಆಸ್ಪತ್ರೆಗೆ ಕರೆದೊಯ್ಯಲು ಏಳಿಸುವ ವೇಳೆಗಾಗಲೇ ಆಕೆ ಮೃತಪಟ್ಟಿದ್ದರು.
ಪಂಚನಹಳ್ಳಿ ಪೊಲೀಸರು ಶೇಖರಪ್ಪ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ಆರೋಪ ಸಾಬೀತಾದ ಹಿನ್ನೆಲೆಯಲ್ಲಿ 2ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಬಿ.ಸಿ.ಭಾನುಮತಿ ಶೇಖರಪ್ಪನಿಗೆ ಅವರು ಜೀವಾವಧಿ ಸಜೆ ಮತ್ತು 10 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದ್ದಾರೆ. ಸರ್ಕಾರದ ಪರವಾಗಿ ಅಭಿಯೋಜಕಿ ಭಾವನ ವಾದ ಮಂಡಿಸಿದ್ದರು.
ದುಷ್ಕರ್ಮಿಗಳ ಗುಂಡೇಟಿಗೆ ಕಡವೆ ಬಲಿ:
ಚಾರ್ಮಾಡಿ ಘಾಟ್ನ ಭಾಗದಲ್ಲಿ ಮಲಯಮಾರುತ ಬಳಿಯ ಹೆದ್ದಾರಿ ಬದಿಯ ಚರಂಡಿಯಲ್ಲಿ ಸುಮಾರು ಮೂರು ವರ್ಷದ ಕಡವೆ ಮೃತದೇಹ ಪತ್ತೆಯಾಗಿದೆ.ಶಿಕಾರಿ ಮಾಡುವರ ಗುಂಡಿಗೆ ಕಡವೆ ಬಲಿಯಾಗಿರುವ ಸಾಧ್ಯತೆಯಿದ್ದು ಕಿವಿ, ತೊಡೆ, ಹೊಟ್ಟೆ ಭಾಗದಲ್ಲಿ ಗುಂಡು ತಗುಲಿರುವ ಗುರುತುಗಳಿವೆ.ಸ್ಥಳಕ್ಕೆ ಅರಣ್ಯಾಧಿಕಾರಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕೊಟ್ಟಿಗೆಹಾರ ಮಂಗಳೂರು ರಾಷ್ಟ್ರೀಯ ಹೆದ್ದಾರಿ ಮಾರ್ಗವಾಗಿ ಪ್ರಯಾಣಿಸುವ ವಾಹನ ಚಾಲಕರು ಕಡವೆ ಮೃತದೇಗ ಕಂಡು ಕೊಟ್ಟಿಗೆಹಾರ ಅರಣ್ಯ ಇಲಾಖೆಯ ಚೆಕ್ ಪೋಸ್ಟ್ ಗೆ ಮಾಹಿತಿ ನೀಡಿದ್ದರು.