ಅಡುಗೆ ಅನಿಲ ಸ್ಫೋಟ ಪ್ರಕರಣ, ₹ 4.35 ಲಕ್ಷ ಪರಿಹಾರ ಆಯೋಗ ಆದೇಶ
ಚಿಕ್ಕಮಗಳೂರು : ಗ್ರಾಹಕರಿಗೆ ನೀಡಿದ ಅಡುಗೆ ಅನಿಲದ ಸಿಲಿಂಡರ್ ಸೋರಿಕೆಯಿಂದ ಸ್ಪೋಟಗೊಂಡಿದ್ದು, ಗ್ರಾಹಕರ ಮನೆಗೆ ವಿತರಿಸಿದ ಅಡುಗೆ ಅನಿಲದ ಸೋರಿಕೆ ಬಗ್ಗೆ ಗ್ರಾಹಕರು ತಿಳಿಸಿದಾಗಲೂ ಅಡುಗೆ ಅನಿಲ ವಿತರಕರು ಅದನ್ನು ಸರಿಪಡಿಸದೆ ಸೇವಾ ನ್ಯೂನ್ಯತೆ ಎಸಗಿದ್ದರಿಂದ ಅಡುಗೆ ಅನಿಲ ಸ್ಪೋಟಗೊಂಡು ಗ್ರಾಹಕರ ಮನೆಯ ಕಟ್ಟಡ ಸೇರಿದಂತೆ ಅನೇಕ ಪೀಠೋಪಕರಣಗಳು ಹಾನಿಗೊಂಡಿದ್ದವು.
ಗ್ರಾಹಕರಿಗೆ ಈ ಹಾನಿಯನ್ನು ಅಡುಗೆ ಅನಿಲದ ವಿಮಾ ಕಂಪನಿಗಳಾದ ಯುನೈಟೆಡ್ ಇಂಡಿಯಾ ವಿಮಾ ಕಂಪನಿ ಹಾಗೂ ನ್ಯೂ ಇಂಡಿಯಾ ವಿಮಾ ಕಂಪನಿಗಳು ವಿಮಾ ಪರಿಹಾರವನ್ನು ಹಾನಿಯ ಪರಿಹಾರವಾಗಿ ರೂ.4.35 ಲಕ್ಷಗಳನ್ನು, ಪರಿಹಾರವಾಗಿ ರೂ.30 ಸಾವಿರ ಹಾಗೂ ಪ್ರಕರಣದ ಖರ್ಚು ರೂ.10 ಸಾವಿರಗಳನ್ನು ಒಂದು ತಿಂಗಳೊಳಗೆ ನೀಡುವಂತೆ ಆಯೋಗದ ಅಧ್ಯಕ್ಷರಾದ ಎನ್.ಆರ್. ಚೆನ್ನಕೇಶವ ರವರು ಹಾಗೂ ಸದಸ್ಯರಾದ ಡಾ. ಮಂಜುನಾಥ ಎಂ. ಬಮ್ಮಕಟ್ಟಿ ರವರು ಆದೇಶ ನೀಡಿದ್ದಾರೆ.
ತಪ್ಪಿದಲ್ಲಿ ಶೇ.12ರ ಬಡ್ಡಿಯೊಂದಿಗೆ ಮರುಪಾವತಿಸುವಂತೆ ಚಿಕ್ಕಮಗಳೂರು ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಆದೇಶ ನೀಡಿದೆ.
ಗ್ರಾಹಕರ ಪರವಾಗಿ ಎನ್.ಆರ್. ತೇಜಸ್ವಿಯವರು ವಾದ ಮಂಡಿಸಿದ್ದರು. ವಿಮಾ ಕಂಪನಿಗಳ ಪರವಾಗಿ ನ್ಯಾಯವಾದಿಗಳಾದ ಹೆಚ್.ಎಲ್. ವಿಶ್ವನಾಥ ಹಾಗೂ ಸಿ.ವಿ. ಹರ್ಷ ರವರು ವಾದ ಮಂಡಿಸಿದ್ದರು. ಗ್ಯಾಸ್ ಏಜೆನ್ಸಿ ಹಾಗೂ ಇಂಡಿಯನ್ ಆಯಿಲ್ ಕಾರ್ಪೋರೇಷನ್ ಪರವಾಗಿ ನ್ಯಾಯವಾದಿಗಳಾದ ಜಿ.ಎಂ. ಜಯಕುಮಾರ್ ಹಾಗೂ ಕೆ.ಎನ್. ಚಂದ್ರಶೇಖರರವರು ವಾದ ಮಂಡಿಸಿದ್ದರು.