ಮರದ ರಂಬೆ ಕಡಿಯಲು ಹೋದ ವ್ಯಕ್ತಿ ವಿದ್ಯುತ್ ಸ್ಪರ್ಶದಿಂದ ಸಾವು !
ಮೂಡಿಗೆರೆ : ವಿದ್ಯುತ್ ತಂತಿಗೆ ತಗುಲಿದ್ದ ಮರದ ರಂಬೆಗಳನ್ನು ಕಡಿಯಲು ಹೋಗಿ ವಿದ್ಯುತ್ ಸ್ಪರ್ಶಿಸಿ ವ್ಯಕ್ತಿಯೊರ್ವ ಮರದ ಮೇಲೆ ಮೃತಪಟ್ಟಿರುವ ಘಟನೆ ತಾಲೂಕಿನ ಹುಯಿಲುಮನೆ ಗ್ರಾಮದಲ್ಲಿ ನಡೆದಿದೆ.
ಲೋಕಪ್ಪಗೌಡ (56) ಮೃತ ದುರ್ದೈವಿ. ಮನೆಯ ಹತ್ತಿರವಿದ್ದ ಮರದ ಸಮೀಪ ವಿದ್ಯುತ್ ತಂತಿಗಳು ಹಾದು ಹೋಗಿದ್ದು, ಮರದ ರಂಬೆಗಳು ವಿದ್ಯುತ್ ತಂತಿಗೆ ತಗುಲಿದ್ದವು. ಇದನ್ನು ಗಮನಿಸಿದ ಲೋಕಪ್ಪಗೌಡ ಮರ ಹತ್ತಿ ರಂಬೆಗಳನ್ನು ತೆರವುಗೊಳಿಸುತ್ತಿದ್ದರು. ಈ ವೇಳೆ ಏಕಾಏಕಿ ವಿದ್ಯುತ್ ಪ್ರವಹಿಸಿ ಮರದ ಮೇಲೆಯೇ ಲೋಕಪ್ಪಗೌಡ ಮೃತಪಟ್ಟಿದ್ದಾರೆ.
ಲೋಕಪ್ಪಗೌಡ ಅವರು ಮರದ ಮೇಲೆ ವಿದ್ಯುತ್ ಸ್ಪರ್ಶದಿಂದ ಮೃತಪಟ್ಟಿರುವುದನ್ನು ಗಮನಿಸಿದ ಕುಟುಂಬದವರು ಅವರ ದೇಹವನ್ನು ಮರದಿಂದ ಕೆಳಗಿಳಿಸಿದ್ದಾರೆ. ಘಟನೆ ಸಂಬಂಧ ಬಾಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.