ಶಿಕ್ಷಕಿಯಿಂದ ವಿದ್ಯಾರ್ಥಿನಿಯರ ಮೇಲೆ ಹಲ್ಲೆ, ಕ್ರಮಕ್ಕೆ ಒತ್ತಾಯ
ಚಿಕ್ಕಮಗಳೂರು : ನಗರದ ಪೊಲೀಸ್ ಬಡಾವಣೆ ಸಮೀಪವಿರುವ ಅಂಬೇಡ್ಕರ್ ಮೊರಾ ರ್ಜಿ ವಸತಿ ಶಾಲೆಯ ವಿದ್ಯಾರ್ಥಿನಿಯರ ಮೇಲೆ ಶಿಕ್ಷಕಿ ಹಲ್ಲೆಗೊಳಿಸಿದ ಹಿನ್ನೆಲೆಯಲ್ಲಿ ಬಾಲಕಿ ಪೋಷಕರು ಹಾಗೂ ದಲಿತಪರ ಮುಖಂಡರುಗಳು ಶಾಲೆಗೆ ಭೇಟಿ ನೀಡಿ ಶಾಲೆಯ ಅವ್ಯವಸ್ಥೆ ವಿರುದ್ಧ ಮಂಗಳವಾರ ಆಕ್ರೋಶ ವ್ಯಕ್ತಪಡಿಸಿದರು.
ಪ್ರಸ್ತುತ ಕಾಫಿ ಗೋಡಾನ್ನಲ್ಲಿ ನಡೆಯುತ್ತಿರುವ ಅಂಬೇಡ್ಕರ್ ವಸತಿ ಶಾಲೆಯ ಸುಮಾರು 40 ಮಕ್ಕಳಿಂದ ಶಿಕ್ಷಕಿ ವಿರುದ್ಧ ಲಿಖಿತ ಮೂಲಕ ದೂರು ದಾಖಲಿಸಲಾಯಿತು.
ವಿದ್ಯಾರ್ಥಿನಿಯರು ವಿಚಾರಿಸಿದಾಗ ಕಾರಣವೇ ಇಲ್ಲದೇ ಹಿಂದಿ ಶಿಕ್ಷಕಿ ಮಕ್ಕಳ ಮೇಲೆ ಹಲ್ಲೆ ನಡೆಸುತ್ತಿದ್ದರು ಇದರಿಂದ ಗಾಯಗೊಂಡಿರುವ ವಿದ್ಯಾರ್ಥಿನಿಯರು ಕಣ್ಣೀರಿಡುವ ಪರಿಸ್ಥಿತಿ ನಿರ್ಮಾಣವಾಗಿತ್ತು ಎಂದು ಹೇಳಿದರು.
ಈ ಸಮಸ್ಯೆಯ ಬಗ್ಗೆ ಮಕ್ಕಳು ಪೋಷಕರಿಗೆ ತಿಳಿಸಲು ಅವಕಾಶ ದೊರೆಯುತ್ತಿರಲಿಲ್ಲ. ಕೆಲವು ದಿನಗಳ ಬಳಿಕ ಪೋಷಕರು ಶಾಲೆಗೆ ಭೇಟಿ ನೀಡಿದ ಸಂದರ್ಭದಲ್ಲಿ ವಿದ್ಯಾರ್ಥಿಗಳು ಶಿಕ್ಷಕರು ಯಾವೆಲ್ಲಾ ರೀತಿಯಲ್ಲಿ ಹಿಂಸಿಸುತ್ತಿದ್ದರು ಎಂಬುದನ್ನು ಪೋಷಕರಿಗೆ ತಿಳಿಸಿದ ಬಳಿಕ ಶಾಲೆಯ ಸಿಬ್ಬಂದಿಗಳ ವಿರುದ್ಧ ಆಕ್ರೋಶಗೊಂಡರು.
ಇದನ್ನು ಮನಗಂಡು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಯೋಗೀಶ್ ಶಾಲೆಗೆ ದಿಢೀರ್ ಭೇಟಿ ನೀಡಿದರು. ಇದಲ್ಲದೇ ಶಾಲೆಯ ಮೂಲಭೂತ ಸೌಕರ್ಯಗಳನ್ನು ಇಲ್ಲದಿರುವುದನ್ನು ಪೋಷಕರು ಅಧಿಕಾರಿಗಳ ಗಮನಕ್ಕೆ ತಂದರು. ವಿದ್ಯಾರ್ಥಿನಿಯರು ಮಲಗುವ ಹಾಲ್ನಲ್ಲಿ ಸ್ವಚ್ಚತೆ ಇಲ್ಲದಿರುವುದು, ಮೇಲಲ್ಲಿ ಜೇಡರ ಬಲೆ ಕಟ್ಟಿರುವುದು ಹಾಗೂ ಸಮರ್ಪಕ ಕಿಟಕಿಯಿಲ್ಲದೇ ಪರದಾಡುವಂತಾಗಿದೆ.
ಈ ವೇಳೆ ಮಾತನಾಡಿದ ಬಿಎಸ್ಪಿ ಜಿಲ್ಲಾಧ್ಯಕ್ಷ ಕೆ.ಟಿ.ರಾಧಾಕೃಷ್ಣ, ಅಂಬೇಡ್ಕರ್ ಶಾಲೆಯಲ್ಲಿ ಮಕ್ಕಳ ಮೇಲೆ ಹಲ್ಲೆ ಹಾಗೂ ಮೂಲಕೊರತೆ ಹಿನ್ನೆಲೆಯಲ್ಲಿ ಸ್ಥಳಕ್ಕಾಗಮಿಸಿದ ಅಧಿಕಾರಿ ಯೋಗೀಶ್ರನ್ನು ಪ್ರಶ್ನಿಸಿದರು. ಇದಾದ ಬಳಿಕ ವಿದ್ಯಾರ್ಥಿಗಳು ಶಾಲೆಯ ಮುಖ್ಯ ಕಚೇರಿಗೆ ಕರೆಸಿ ಪರಿಶೀಲಿಸಿದಾಗ ಶಿಕ್ಷಕಿ ಕಾರಣವಿಲ್ಲದೇ ಥಳಿಸುವುದು, ಹೋಂವರ್ಕ್ ಪೂರ್ಣಗೊಂಡರು ಹೊಡೆಯಲಾಗುತ್ತಿದೆ ಎಂದು ಅಳಲು ತೋಡಿಕೊಂಡರು.
ಸುಮಾರು 130ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ವಾಸಿಸುತ್ತಿರುವ ಹಾಲ್ನಲ್ಲಿ ಹಾಸಿಗೆ ವ್ಯವಸ್ಥೆಯಿಲ್ಲ. ಶಾಲೆಯ ಶಿಕ್ಷಕರಿಗೆ ವಿಚಾರಿಸಿದರೆ ಸರ್ಕಾರಕ್ಕೆ ಅರ್ಜಿ ಸಲ್ಲಿಸಲಾಗಿದೆ ಎಂದು ಉಡಾಫೆ ಉತ್ತರ ನೀಡಲಾಗುತ್ತಿದೆ. ಇಷ್ಟೆಲ್ಲ ಸಮಸ್ಯೆಗಳ ಮಹಾಪೂರವೇ ಅಂಬೇಡ್ಕರ್ ಶಾಲೆಯಲ್ಲಿ ಅಡಗಿದೆ. ಇದರಿಂದ ಪೋಷಕರು ಮನನೊಂದು ರಕ್ಷಣೆಯಿಲ್ಲದ ಶಾಲೆಗೆ ಹೆಣ್ಣುಮಕ್ಕಳು ಬಿಟ್ಟು ತೆರಳಲು ಭಯವಾಗುತ್ತಿದೆ ಎಂದರು.
ಅಂತಿಮವಾಗಿ ಪೋಷಕರು ಹಾಗೂ ದಲಿತಪರ ಮುಖಂಡರುಗಳ ಒತ್ತಾಯದ ಮೇರೆಗೆ ಶಿಕ್ಷಕಿ ವಿರುದ್ಧ ಕ್ರಮ ಕೈಗೊಂಡು ಅಮಾನತ್ತುಗೊಳಿಸಬೇಕು ಎಂದು ಒತ್ತಾಯಿಸಿದರು. ಮುಂದೆನಾದರೂ ಶಾಲೆಯಲ್ಲಿ ಇದೇ ರೀತಿ ಮುಂದುವರೆದ್ದಲ್ಲಿ ಪೋಷಕರ ಸಮೇತ ಶಾಲೆಯಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ಮುಖಂಡರುಗಳು ತಿಳಿಸಿದರು.
ಈ ಸಂದರ್ಭದಲ್ಲಿ ದಸಂಸ ಜಿಲ್ಲಾ ಸಂಚಾಲಕ ಕಬ್ಬಿಕೆರೆ ಮೋಹನ್ಕುಮಾರ್, ಮುಖಂಡರುಗಳಾದ ಗಂಗಾಧರ್, ಹರೀಶ್, ಶಾಲೆಯ ಸಿಬ್ಬಂದಿಗಳು ಹಾಜರಿದ್ದರು.