ಹೊಸನಗರ ; ಪೌರ ಕಾರ್ಮಿಕರು, ದೇಶವನ್ನು ಕಾಯುವ ಸೈನಿಕರು ಹಾಗೂ ಅನ್ನ ಕೊಡುವ ರೈತರು ದೇವರ ಸುಪುತ್ರರು ದೇವರಿಲ್ಲದಿದ್ದರೇ ಹೇಗೆ ಪ್ರಪಂಚ ಉಳಿಯುವುದಿಲ್ಲವೂ ಹಾಗೇ ಒಂದು ಊರಿನಲ್ಲಿ ಒಂದು ಗ್ರಾಮದಲ್ಲಿ ಪೌರ ಕಾರ್ಮಿಕರಿಲ್ಲದಿದ್ದರೇ ಊರೇ ಉಳಿಯುವುದಿಲ್ಲ ಎಂದು ಶಾಸಕ ಬೆಳೂರು ಗೋಪಾಲಕೃಷ್ಣ ಹೇಳಿದರು.
ಇಲ್ಲಿನ ಪಟ್ಟಣ ಪಂಚಾಯತಿಯ ಸಮುದಾಯ ಭವನದ ಆವರಣದಲ್ಲಿ ಪೌರ ಕಾರ್ಮಿಕರ ದಿನಾಚರಣೆಯನ್ನು ಏರ್ಪಡಿಸಲಾಗಿದ್ದು ಈ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪೌರ ಕಾರ್ಮಿಕರ ಯೋಗಕ್ಷೇಮ ಚನ್ನಾಗಿದ್ದರೇ ಸಮಾಜ ನೆಮ್ಮದಿಯಾಗಿರುತ್ತದೆ. ದೇಶ ಸುಂದರವಾಗಿ ಹಾಗೂ ಚನ್ನಾಗಿರಬೇಕಾದರೆ ಸ್ವಚ್ಚತೆ ಇರಬೇಕು. ಇಂತಹ ಸ್ವಚ್ಚತಾ ಕಾರ್ಯದಲ್ಲಿ ನಿರತರಾಗಿರುವ ಪೌರ ಕಾರ್ಮಿಕರು ದೇವರ ಸ್ವರೂಪಿ ಎಂದರು.
ಪೌರ ಕಾರ್ಮಿಕರನ್ನು ಮಹಾತ್ಮ ಗಾಂಧಿಯವರು ದೇವರಿಗೆ ಹೋಲಿಸಿದ್ದು ಈ ದೇವತ ಮನುಷ್ಯರು ಇವರು ಇಲ್ಲವಾದರೆ ಪಟ್ಟಣವೂ ಸೌಖ್ಯವಾಗಿರದೆ ರೋಗಗಳಿಂದ ತುಂಬಿರುತ್ತಿತ್ತು. ಎಲ್ಲಿ ನೋಡಿದರೂ ಜನರು ರೋಗಗಳಿಗೆ ತುತ್ತಾಗಬೇಕಾಗಿತ್ತು. ಇವುಗಳ ನಿರ್ಮೂಲನೆ ಪೌರ ಕಾರ್ಮಿಕರಿಂದ ಮಾತ್ರ ಸಾಧ್ಯ. ಪೌರ ಕಾರ್ಮಿಕರು ಸಮಾಜದ ಉಳ್ಳವರ ಮನಸ್ಸನ್ನು ಸಹ ಬದಲಾಯಿಸುವ ಕೆಲಸ ಮಾಡಿದ್ದಾರೆ. ಬರ-ನೆರೆ ಪರಿಸ್ಥಿತಿಯಲ್ಲಿ ತಮ್ಮ ಕಲ್ಯಾಣ ನಿಧಿಯ ಹಣ ನೀಡಿದ್ದಾರೆ ಕೊರೊನಾ ಸಮಯದಲ್ಲಿ ತಮ್ಮ ಜೀವದ ಹಂಗು ತೊರೆದು ಸೇವೆ ಸಲ್ಲಿಸಿದ್ದಾರೆ. ಮುಂದಿನ ದಿನದಲ್ಲಿ ಪೌರ ಕಾರ್ಮಿಕರ ಬೇಡಿಕೆ ಈಡೇರಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆ ಎಂದರು.

ಪೌರ ಕಾರ್ಮಿಕರ ಮಕ್ಕಳು ಉದ್ಯೋಗಿಗಳಾಗಬೇಕು ;
ಪೌರ ಕಾರ್ಮಿಕರ ಮಕ್ಕಳು ತಂದೆ ನೆಟ್ಟ ಆಲದಮರದ ಹಾಗೇ ಅದೇ ಕೆಲಸ ಮಾಡಬೇಕೆಂಬುವುದಿಲ್ಲ? ಪೌರ ಕಾರ್ಮಿಕರ ಮಕ್ಕಳಿಗೆ ವಿದ್ಯಾಭ್ಯಾಸ ಮಾಡಬೇಕು. ಸರ್ಕಾರಿ ಉದ್ಯೋಗ ಪಡೆಯಬೇಕು ಇದಕ್ಕೆ ಬೇಕಾಗಿರುವ ಎಲ್ಲ ಸವಲತ್ತುಗಳನ್ನು ಓದಿಸುವ ಹೊಣೆಯನ್ನು ಪಟ್ಟಣ ಪಂಚಾಯಿತಿಯವರು ಮಾಡುವ ಕೆಲಸ ಆಗಬೇಕು ಎಂದರು.
ಪಟ್ಟಣ ಪಂಚಾಯತಿ ಸದಸ್ಯ ಅಶ್ವಿನಿಕುಮಾರ್ ಮಾತನಾಡಿ, ಇಂದು ಪೌರ ಕಾರ್ಮಿಕರ ದಿನಾಚರಣೆ ಒಂದು ದೊಡ್ಡ ಹಬ್ಬ. ಅವರಿಗೆ ಗೌರವ ಸಲ್ಲಿಸುವುದು ನಮ್ಮ ಆದ್ಯ ಕರ್ತವ್ಯವಾಗಿದ್ದು ದೊಡ್ಡ ಪ್ರಮಾಣದಲ್ಲಿ ಅಲ್ಲದಿದ್ದರೂ ಅಲ್ಪ ಪ್ರಮಾಣದಲ್ಲಿ ಕಾರ್ಯಕ್ರಮ ಏರ್ಪಡಿಸಿದ್ದೇವೆ. ಈ ಗೌರವವನ್ನು ಎಲ್ಲರೂ ಪಡೆದುಕೊಂಡು ಮುಂದಿನ ದಿನಗಳಲ್ಲಿ ಇನ್ನು ಹೆಚ್ಚಿನ ಸೌಲಭ್ಯ ಪೌರ ಕಾರ್ಮಿಕರಿಗೆ ನೀಡುವ ಭರವಸೆ ನೀಡಿದರು.
ಈ ಕಾರ್ಯಕ್ರಮದಲ್ಲಿ ಅಧ್ಯಕ್ಷತೆಯನ್ನು ನಾಗಪ್ಪ ವಹಿಸಿದ್ದರು. ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿ ಎಂ.ಎನ್.ಹರೀಶ್, ಪೌರ ನೌಕರರ ಸಂಘದ ಅಧ್ಯಕ್ಷ ನಾಗಪ್ಪ, ಪ.ಪಂ. ಉಪಾಧ್ಯಕ್ಷೆ ಚಂದ್ರಕಲಾ ನಾಗರಾಜ್, ಪಟ್ಟಣ ಪಂಚಾಯತಿ ಸದಸ್ಯರಾದ ಸಿಂಥಿಯಾ, ಕೃಷ್ಣವೇಣಿ, ಗಾಯಿತ್ರಿ ನಾಗರಾಜ್, ಶಾಹಿನ, ಗುರುರಾಜ್, ಗುಲಾಬಿ ಮರಿಯಪ್ಪ, ನಾಮ ನಿರ್ದೇಶಕರಾದ ಗುರುರಾಜ್ ಹೆಚ್.ಕೆ, ನೇತ್ರಾ ಸುಬ್ರಾಯಭಟ್, ಹೆಚ್.ಎಂ. ನಿತ್ಯಾನಂದ, ಪಟ್ಟಣ ಪಂಚಾಯಿತಿಯ ನೌಕರ ವರ್ಗದವರಾದ ಮಂಜುನಾಥ್, ಪರಶುರಾಮ್, ನೇತ್ರಾವತಿ, ಬಸವರಾಜ್, ಶೃತಿ, ರಾಧ, ಆಸ್ಮಾ ಬಾನು, ಗಿರೀಶ್, ಸರೋಜ, ಚಂದ್ರಪ್ಪ, ಸರ್ಕಲ್ ಇನ್ಸ್ಪೆಕ್ಟರ್ ಗುರಣ್ಣ ಎಸ್ ಹೆಬ್ಬಾಳ್, ತಹಸೀಲ್ದಾರ್ ರಶ್ಮಿ ಹಾಲೇಶ್, ಶಾಸಕರ ಆಪ್ತ ಕಾರ್ಯದರ್ಶಿ ಸಣ್ಣಕ್ಕಿ ಮಂಜು, ಪ್ರಭಾಕರ್, ಜಯನಗರ ಗುರು ಇನ್ನೂ ಮುಂತಾದವರು ಉಪಸ್ಥಿತರಿದ್ದರು.
ಹೊಸನಗರ ಪಟ್ಟಣ ಪಂಚಾಯತಿಯಲ್ಲಿ ಸೇವೆ ಸಲ್ಲಿಸುತ್ತಿರುವ ಎಲ್ಲ ಪೌರ ಕಾರ್ಮಿಕ ಕುಟುಂಬಗಳನ್ನು ಈ ಸಂದರ್ಭದಲ್ಲಿ ಸನ್ಮಾನಿಸಿದರು.

