ಹೊಸನಗರ : ಚುನಾವಣಾ ಆಯೋಗ ನಡೆಸುತ್ತಿರುವ ಎಸ್ಐಆರ್ ಹೆಸರಿನ ಮತಪಟ್ಟಿ ಪರಷ್ಕರಣೆಯ ಪ್ರಕ್ರಿಯೆಯು ಬಿಜೆಪಿ ಕಾಂಗ್ರೆಸ್ ಹಾಗೂ ಇತರ ವಿರೋಧ ಪಕ್ಷಗಳನ್ನು ಮಣಿಸಲು ರಚಿಸಿರುವ ಷಡ್ಯಂತ್ರವಾಗಿದೆ. ಆದರೆ ಕಾಂಗ್ರೆಸ್ ಇಂತಹ ಕುಂತ್ರಂತ್ರಗಳಿಗೆ ತಕ್ಕ ಪ್ರತ್ಯುತ್ತರ ನೀಡಲಿದೆ ಎಂದು ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ, ಕಾಂಗ್ರೆಸ್ ಪಕ್ಷದ ಮುಖಂಡ ಕಲಗೋಡು ರತ್ನಾಕರ ಹೇಳಿದರು.
ಅವರು ಇಲ್ಲಿನ ಕಾಂಗ್ರೆಸ್ ಕಛೇರಿಯಲ್ಲಿ ಗುರುವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿ, ಚುನಾವಣಾ ಆಯೋಗವನ್ನು ಬಿಜೆಪಿ ತನ್ನ ದಾಳವಾಗಿಸಿಕೊಂಡಿದೆ. ನಮ್ಮ ವಿರುದ್ಧ ಕುತಂತ್ರ ನಡೆಸಿದೆ ಎಂದು ಅವರು ಆರೋಪಿಸಿದರು.
ಮುಂದಿನ ಹಲವು ವರ್ಷಗಳ ಕಾಲ ಹೇಗೆ ಅಧಿಕಾರದಲ್ಲಿರಬೇಕು ಎನ್ನುವ ಯೋಜನೆ ಬಿಜೆಪಿಯದ್ದು. ಎಸ್ಐಆರ್ ಬಳಸಿ ದಲಿತರು, ಅಲ್ಪ ಸಂಖ್ಯಾತರ ವೋಟುಗಳನ್ನು ಕಾಂಗ್ರೆಸ್ ಪಕ್ಷಕ್ಕೆ ಬೀಳದಂತೆ ನೋಡಿಕೊಳ್ಳುವುದು ಇದರ ಮೂಲ ಉದ್ದೇಶ. ಪಶ್ಚಿಮ ಬಂಗಾಳದಲ್ಲಿ ಇಂತಹದೇ ಕುತಂತ್ರ ನಡೆಸಿ ಬಿಜೆಪಿ ಯಸಸ್ಸು ಕಂಡಿದೆ. ಆದರೆ ಅಲ್ಲಿ ಸಮಾಯವಕಾಶ ಕಡಿಮೆ ಇತ್ತು. ಕರ್ನಾಟಕದಲ್ಲಿ ಆ ರೀತಿ ಆಗಲು ಕಾಂಗ್ರೆಸ್ ಪಕ್ಷ ಯಾವ ಕಾರಣಕ್ಕೂ ಬಿಡುವುದಿಲ್ಲ. ಸಂವಿಧಾನಾತ್ಮಕವಾಗಿ ದೊರೆತಿರುವ ಮತದಾನದ ಹಕ್ಕು ಒಬ್ಬರಿಂದಲೂ ವಂಚಿತರಾಗಲು ಪಕ್ಷ ಬಿಡುವುದಿಲ್ಲ. ಎಲ್ಲಾ ರೀತಿಯಲ್ಲಿಯೂ ಮತದಾರರ ಸಹಾಯಕ್ಕೆ ನಿಂತಿದೆ ಎಂದರು.
ಈ ಹಿಂದೆಯೂ ಹಲವು ಬಾರಿ ಮತಪಟ್ಟಿ ಪರಿಷ್ಕರಣೆಗಳು ಆಗಿವೆ. ಆದರೆ ಈ ಬಾರಿ ಅಸಾಧ್ಯವೆನಿಸುವ ನಿಯಮಗಳನ್ನು ರೂಪಿಸಿದ್ದಾರೆ. ವಿವಾಹಿತ ಮಹಿಳೆಯರಿಗೆ, ಹೆಸರು, ವಿಳಾಸಗಳಲ್ಲಿ ಸಣ್ಣ-ಪುಟ್ಟ ನ್ಯೂನತೆ ಹೊಂದಿದವರಿಗೆ ತಮ್ಮ ಹೆಸರನ್ನು ಮತಪಟ್ಟಿಯಲ್ಲಿ ಉಳಿಸಿಕೊಳ್ಳುವುದೇ ಸವಾಲಾಗಿ ಪರಿಣಮಿಸಿದೆ. ಆದರೆ ಬಿಜೆಪಿಯ ಈ ಷಡ್ಯಂತ್ರ ತಡೆಯುವಲ್ಲಿ ಕಾಂಗ್ರೆಸ್ ಪಕ್ಷ ಯಶಸ್ವಿಯಾಗಲಿದೆ. ರಾಜ್ಯದಲ್ಲಿ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಅವರ ನಾಯಕತ್ವದಲ್ಲಿ ಎಸ್ಐಆರ್ ಪ್ರಕ್ರಿಯೆಯಲ್ಲಿ ಮತದಾರರ ಹೆಸರು ಬಿಟ್ಟು ಹೋಗದಂತೆ ಜಾಗೃತೆ ವಹಿಸಲು ಸಾಕಷ್ಟು ಕ್ರಮಗಳನ್ನು ಪಕ್ಷ ತೆಗೆದುಕೊಂಡಿದೆ. ವಿಶೇಷ ಸಮಿತಿ ರಚನೆ ಮಾಡಿದೆ. ಪ್ರತಿ ಬೂತ್ ಹಂತದಲ್ಲಿಯೂ ಪಕ್ಷದ ಪ್ರತಿನಿಧಿ ಕೆಲಸ ಮಾಡಲಿದ್ದಾರೆ. ಪಶ್ಚಿಮಬಂಗಾಳ ಮೊದಲಾದ ರಾಜ್ಯಗಳಲ್ಲಿ ಆದಂತೆ ಮತದಾರರ ಹೆಸರು ಪಟ್ಟಿಯಿಂದ ಬಿಟ್ಟು ಹೋಗದಂತೆ ತಡೆಯುತ್ತೇವೆ ಎಂದರು.
ಒಮ್ಮೆ ಮತಪಟ್ಟಿಯಿಂದ ಹೆಸರು ಬಿಟ್ಟ ಹೋದರೆ ಕೇವಲ ಮತದಾನವಷ್ಟೇ ಅಲ್ಲ, ವಿವಿಧ ಸರ್ಕಾರಿ ಸೌಲಭ್ಯಗಳಿಂದಲೂ ವಂಚಿತರಾಗಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ಮತದಾರರೂ ಅಷ್ಟೇ ಮುತುವರ್ಜಿ ವಹಿಸುವ ಅಗತ್ಯವಿದೆ ಎಂದು ಅವರು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಜಿ.ಚಂದ್ರಮೌಳಿ, ಪ್ರಧಾನ ಕಾರ್ಯದರ್ಶಿ ಡಿ.ಎಂ.ಸದಾಶಿವ ಶ್ರೇಷ್ಠಿ, ಟೌನ್ ಘಟಕದ ಅಧ್ಯಕ್ಷ ಕೆ.ಎಸ್. ಗುರುರಾಜ್, ಅಶ್ವಿನಿಕುಮಾರ್, ಪ್ರಭಾಕರರಾವ್, ಕಳೂರು ಕೃಷ್ಣಮುರ್ತಿ, ಜಯನಗರ ಗುರು ಚಂದ್ರಮೂರ್ತಿ, ಮತ್ತಿತರರು ಇದ್ದರು.

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್ಸೈಟ್ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 7 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್ಸೈಟ್ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ ‘ಮಲ್ನಾಡ್ ಟೈಮ್ಸ್’ ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ.





