ರಿಪ್ಪನ್ಪೇಟೆ ; ಮನೆಮನೆಗೆ ಶುದ್ಧ ಕುಡಿಯುವ ನೀರಿನ ಸೌಲಭ್ಯವನ್ನು ಕಲ್ಪಿಸುವ ಮಹತ್ವಾಕಾಂಕ್ಷಿ ಯೋಜನೆಯಾದ ಜೆ.ಜೆ.ಎಂ ಕಾಮಗಾರಿ ಪೂರ್ಣಗೊಳಿಸುವ ತರಾತುರಿಯಿಂದಾಗಿ ಕಳೆದ ವರ್ಷದಲ್ಲಿ ಕೋಟ್ಯಂತರ ರೂ. ವೆಚ್ಚದಲ್ಲಿ ಶಾಂತಪುರ-ಗರ್ತಿಕೆರೆ ಸಂಪರ್ಕದ ಲೋಕೋಪಯೋಗಿ ಇಲಾಖೆಯವರು ನಿರ್ವಹಿಸಲಾದ ಜಿಲ್ಲಾ ಮುಖ್ಯ ರಸ್ತೆಯನ್ನು ಜೆ.ಜೆ.ಎಂ ಕಾಮಗಾರಿಯ ಗುತ್ತಿಗೆದಾರ ಜೆ.ಸಿ.ಬಿ ಯಂತ್ರದ ಮೂಲಕ ಪೈಪ್ಲೈನ್ ಅಳವಡಿಕೆಗೆ ಹೊಂಡ ತೆಗೆಯುವ ನೆಪದಲ್ಲಿ ಕಿತ್ತು ಹಾಕುವ ಮೂಲಕ ಹಾಳು ಮಾಡಿದ್ದಾರೆಂದು ಕೋಡೂರು ಗ್ರಾಮ ಪಂಚಾಯಿತ್ ಅಧ್ಯಕ್ಷ ಜಯಪ್ರಕಾಶಶೆಟ್ಟಿ ಆರೋಪಿಸಿ ಕಾಮಗಾರಿ ಮುಂದುವರಿಸದಂತೆ ಸೂಚಿಸಿದ್ದಾರೆ.
ಕಳೆದ ವರ್ಷದಲ್ಲಿ ಇಲ್ಲಿನ ಶಾಂತಪುರ-ಗರ್ತಿಕೆರೆ ಗ್ರಾಮದ ಲೋಕೋಪಯೋಗಿ ಇಲಾಖೆಯ ಸಂಪರ್ಕ ರಸ್ತೆಯನ್ನು ಡಾಂಬರೀಕರಣ ಮಾಡಲಾಗಿದ್ದು ಆ ರಸ್ತೆಯ ಅಂಚಿನಲ್ಲಿ ಕುಡಿಯುವ ನೀರಿನ ಪೈಪ್ಲೈನ್ ಅಳವಡಿಸುವ ನಿಯಮವಿದ್ದರೂ ಕೂಡಾ ಜೆಜೆಎಂ ಗುತ್ತಿಗೆದಾರ ಅದನ್ನು ಉಲ್ಲಂಘಿಸಿ ಜೆಸಿಬಿ ಯಂತ್ರದಲ್ಲಿ ಪೈಪ್ಲೈನ್ ಆಳವಡಿಕೆಗೆ ಸುವ್ಯವಸ್ಥೆಯಲ್ಲಿದ್ದ ಡಾಂಬರೀಕಣ ರಸ್ತೆಯನ್ನು ಕಿತ್ತು ಹಾಕಿ ಹೊಂಡ ತೆಗೆಯುತ್ತಿದ್ದಾರೆಂದು ಆರೋಪಿಸಿ ಗ್ರಾಮಸ್ಥರೊಂದಿಗೆ ಕೋಡೂರು ಗ್ರಾಮ ಪಂಚಾಯಿತ್ ಅಧ್ಯಕ್ಷ ಜಯಪ್ರಕಾಶಶೆಟ್ಟಿ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಕಾಮಗಾರಿಯನ್ನು ನಿಲ್ಲಿಸುವಂತೆ ಸೂಚಿಸಿರುವ ಪ್ರಸಂಗ ನಡೆದಿದೆ.
ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸುವವರೆಗೂ ಯಾವುದೇ ಕಾಮಗಾರಿ ಮಾಡದಂತೆ ಸೂಚಿಸಲಾದರೂ ಅಧ್ಯಕ್ಷರ ಮಾತಿಗೆ ಕವಡೆ ಕಾಸಿನ ಬೆಲೆ ನೀಡದೆ ಗುತ್ತಿಗೆದಾರ ರಾತ್ರೋರಾತ್ರಿ ಜೆಸಿಬಿ ಯಂತ್ರದ ಮೂಲಕ ಪೈಪ್ ಲೈನ್ ನೆಪದಲ್ಲಿ ರಸ್ತೆಯನ್ನು ಅಗೆದು ಹಾಳು ಮಾಡಿದ್ದಾರೆಂದು ಇಲ್ಲಿನ ಗ್ರಾಮಸ್ಥರು ಮತ್ತು ಕೋಡೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಜಯಪ್ರಕಾಶ ಶೆಟ್ಟಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

