ಜಿಲ್ಲಾ ಮಟ್ಟದ ದಸರಾ ಕ್ರೀಡಾಕೂಟಕ್ಕೆ ಚಾಲನೆ: “ಕ್ರೀಡಾ ಸಾಧಕರು ಸದಾ ಸ್ಪೂರ್ತಿದಾಯಕರು” – ಎಸ್.ಮಧು ಬಂಗಾರಪ್ಪ

Written by Koushik G K

Published on:

ಶಿವಮೊಗ್ಗ:ಶಿವಮೊಗ್ಗದಲ್ಲಿ ಜಿಲ್ಲಾ ಮಟ್ಟದ ದಸರಾ ಕ್ರೀಡಾಕೂಟ ಭರ್ಜರಿಯಾಗಿ ಆರಂಭಗೊಂಡಿದ್ದು, ರಾಜ್ಯದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವರು ಹಾಗೂ ಜಿಲ್ಲೆಯ ಉಸ್ತುವಾರಿ ಸಚಿವರಾದ ಎಸ್. ಮಧು ಬಂಗಾರಪ್ಪ ಅವರು ಮಂಗಳವಾರ ನೆಹರು ಕ್ರೀಡಾಂಗಣದಲ್ಲಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.

WhatsApp Group Join Now
Telegram Group Join Now
Instagram Group Join Now
📢 Stay Updated! Join our WhatsApp Channel Now →

ಸಚಿವರು ಮಾತನಾಡುತ್ತಾ, “ಯಾವುದೇ ಕ್ಷೇತ್ರದಲ್ಲಾದರೂ ಸಾಧನೆ ಮಾಡಿದವರು ಸಮಾಜಕ್ಕೆ ಸ್ಫೂರ್ತಿದಾಯಕರಾಗಿರುತ್ತಾರೆ. ಕ್ರೀಡಾಪಟುಗಳು ನಮ್ಮ ಹೆಮ್ಮೆಯವರು, ಇವರ ಸಾಧನೆ ಮಕ್ಕಳು ಮತ್ತು ಯುವಕರಿಗೆ ಪ್ರೇರಣೆ ನೀಡುತ್ತದೆ,” ಎಂದು ಹೇಳಿದರು.

“ಶಿಕ್ಷಣದ ಜೊತೆಗೆ ಕ್ರೀಡೆ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳು ಮಾನವೀಯ ಮೌಲ್ಯ ಬೆಳೆಸಲು ಸಹಾಯ ಮಾಡುತ್ತವೆ. ದಸರಾ ಕ್ರೀಡಾಕೂಟದಲ್ಲಿ ವಯಸ್ಸಿನ ಮಿತಿ ಇಲ್ಲದಿರುವುದು ವಿಶಿಷ್ಟ. ಮಕ್ಕಳು ಮಾತ್ರವಲ್ಲ, ವಯಸ್ಸಾದವರು ಕೂಡ ಕ್ರೀಡೆಯಲ್ಲಿ ಪಾಲ್ಗೊಳ್ಳುತ್ತಿರುವುದು ಸಂತಸದ ವಿಚಾರ,” ಎಂದು ಅಭಿಪ್ರಾಯ ಪಟ್ಟರು.

ಪ್ರಸ್ತುತ 5,000ಕ್ಕೂ ಹೆಚ್ಚು ಕ್ರೀಡಾಪಟುಗಳು ಪಾಲ್ಗೊಂಡಿದ್ದು, ಮುಂದಿನ ದಿನಗಳಲ್ಲಿ ಈ ಸಂಖ್ಯೆ ಇನ್ನಷ್ಟು ಹೆಚ್ಚುವ ನಿರೀಕ್ಷೆಯಿದೆ. “ಬರ್ಲಿನ್‌ನಲ್ಲಿ ನಡೆದ ಅಂತರಾಷ್ಟ್ರೀಯ ಬಾಲಕರ ಜ್ಯೂನಿಯರ್ ಹಾಕಿ ಪಂದ್ಯಾವಳಿಯಲ್ಲಿ ಭಾಗವಹಿಸಿದ ಕ್ರೀಡಾಪಟು ಸುನೀಲ್ ಅವರ ಸಾಧನೆಯು ನಮ್ಮ ಹೆಮ್ಮೆಯ ವಿಷಯವಾಗಿದೆ,” ಎಂದು ಅವರು ವಿಶೇಷವಾಗಿ ಪ್ರಸ್ತಾಪಿಸಿದರು.

“ಕ್ರೀಡೆ ಆರೋಗ್ಯದ ಮೂಲ” – ಡಾ. ಧನಂಜಯ ಸರ್ಜಿ

ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯರಾದ ಡಾ. ಧನಂಜಯ ಸರ್ಜಿ ಮಾತನಾಡಿ, ಇಂದಿನ ಜನ ಜೀವನಶೈಲಿಯೇ ಅನೇಕ ಕಾಯಿಲೆಗಳ ಮೂಲ ಎಂದು ಅಭಿಪ್ರಾಯಪಟ್ಟರು. “ಬೆಳಿಗ್ಗೆ ಬೇಗ ಏಳುವುದು, ನಗುವುದು, ಉತ್ತಮ ಆಹಾರ ಸೇವಿಸುವುದು ಹಾಗೂ ಆಟ-ಕ್ರೀಡೆಗಳಲ್ಲಿ ತೊಡಗುವುದು ಎಲ್ಲಕ್ಕಿಂತ ದೊಡ್ಡ ಔಷಧಿ. ಒಂದು ಗಂಟೆ ಆಟ ಆಡುವುದರಿಂದ 200–500 ಕ್ಯಾಲರಿ ಕರಗುತ್ತದೆ, ಜ್ಞಾಪಕಶಕ್ತಿ ಹೆಚ್ಚುತ್ತದೆ,” ಎಂದು ಹೇಳಿದರು.

“ನಾವೆಲ್ಲ ಒಂದೇ ಎಂಬ ಭಾವನೆ ಬೆಳೆಸುವುದು” – ಬಲ್ಕೀಶ್ ಬಾನು

ವಿಧಾನ ಪರಿಷತ್ ಸದಸ್ಯೆ ಬಲ್ಕೀಶ್ ಬಾನು ದಸರಾ ಕ್ರೀಡಾಕೂಟವು ಎಲ್ಲರನ್ನೂ ಒಂದೆಡೆ ಸೇರಿಸುವ ಉದ್ದೇಶ ಹೊಂದಿದೆ ಎಂದು ತಿಳಿಸಿದರು. ಅವರು ಮುಂದಿನ ದಿನಗಳಲ್ಲಿ ನಶಿಸುತ್ತಿರುವ ಗ್ರಾಮೀಣ ಆಟಗಳನ್ನೂ ಪುನರುಜ್ಜೀವನಗೊಳಿಸುವ ಸಲಹೆ ನೀಡಿದರು.

“ಕ್ರೀಡೆ ದೇಶಪ್ರೇಮದ ಪ್ರತೀಕ” – ಪಲ್ಲವಿ

ಎಸ್‌ಸಿ/ಎಸ್‌ಟಿ ಅಲೆಮಾರಿ ಮತ್ತು ಅರೆ ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಪಲ್ಲವಿ ಮಾತನಾಡಿ, “ಕ್ರೀಡೆಗಳು ಕೇವಲ ಆಟಗಳಲ್ಲ, ಅವು ಭಾವೈಕ್ಯತೆ ಮತ್ತು ದೇಶಪ್ರೇಮದ ಪ್ರತೀಕ. ಮಕ್ಕಳನ್ನು ಮೊಬೈಲ್‌ನಿಂದ ದೂರ ಇಟ್ಟು, ಹಳೆಯ ಆಟಗಳಲ್ಲಿ ತೊಡಗಿಸಬೇಕು,” ಎಂದರು.

“ಹಳೆಯ ಆಟಗಳನ್ನು ಮರೆಯಬೇಡಿ” – ಎಸ್.ಎನ್. ಚನ್ನಬಸಪ್ಪ

ಶಿವಮೊಗ್ಗ ಶಾಸಕರಾದ ಎಸ್.ಎನ್. ಚನ್ನಬಸಪ್ಪ ಅವರು “ಖೇಲೋ ಇಂಡಿಯಾ” ಯೋಜನೆ ಗ್ರಾಮೀಣ ಪ್ರತಿಭೆಗಳಿಗಾಗಿ ಶುರುವಾದದ್ದಾಗಿದೆ ಎಂದು ತಿಳಿಸಿ, “ಹಳೆಯ ಗ್ರಾಮೀಣ ಆಟಗಳು ಈಗಿನ ಮಕ್ಕಳಿಗೆ ಪರಿಚಿತವಲ್ಲ. ಅವುಗಳನ್ನು ಮರುಪರಿಚಯ ಮಾಡಿಸಬೇಕು. ಸೋಲು-ಗೆಲುವು ಕ್ರೀಡೆಯ ಭಾಗ, ಆದರೆ ಕ್ರೀಡಾಭಿಮಾನ ಬೆಳೆಸಿಕೊಳ್ಳುವುದು ಮುಖ್ಯ,” ಎಂದರು.

ಕಾರ್ಯಕ್ರಮದಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತವನ್ನು ಪ್ರತಿನಿಧಿಸಿ ಕೀರ್ತಿ ತಂದ ಹಾಕಿ ಕ್ರೀಡಾಪಟು ಸುನೀಲ್ ಅವರನ್ನು ಸನ್ಮಾನಿಸಲಾಯಿತು.

ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ರೇಖ್ಯಾನಾಯ್ಕ, ಕ್ರೀಡಾಪಟುಗಳು, ಅಧಿಕಾರಿಗಳು ಹಾಗೂ ಕ್ರೀಡಾಭಿಮಾನಿಗಳು ಭರ್ಜರಿಯಾಗಿ ಭಾಗವಹಿಸಿದರು.

ಗಣಪತಿ ವಿಸರ್ಜನೆ ವೇಳೆ ಗಾಯಗೊಂಡ ವ್ಯಕ್ತಿ ; ಆರೋಗ್ಯ ವಿಚಾರಿಸಿದ ಶಾಸಕ ಗೋಪಾಲಕೃಷ್ಣ ಬೇಳೂರು

Leave a Comment