ರಿಪ್ಪನ್ಪೇಟೆ ; ಯುವಕರನ್ನು ಹೋರಾಟದಲ್ಲಿ ತೊಡಗಿಸಿಕೊಳ್ಳುವ ಸಂಕಲ್ಪದೊಂದಿಗೆ ‘ಬದಲಾಗೋರು ತಮ್ಮ ಬದಲಾಗಿರಿ. ಬದಲಾಗುವ ಮುನ್ನ ಬದಲಾಗಿರಿ. ಹೊಸ ನಾಡು ಕಟ್ಟಲು ಮುಂದಾಗಿರಿ. ಜಾತಿ ಪಕ್ಷ ಮರೆತು ಒಂದಾಗಿರಿ…’ ಜಾತಿ-ಮತ-ಪಂಥ-ವರ್ಗ ವರ್ಣರಹಿತವಾಗಿ ಜಾತ್ಯಾತೀತವಾಗಿ ರಾಜಕೀಯ ಹೊರತಾಗಿ ಎಲ್ಲರು ಒಂದಾಗಿ ಪಕ್ಷಾತೀತವಾಗಿ ಈ ಭಾಗದ ಎಲ್ಲಾ ಮಠಾಧೀಶರನೊಳಗೊಂಡು ಹೊಸನಗರ ವಿಧಾನಸಭಾ ಕ್ಷೇತ್ರವನ್ನು ಮರುಸ್ಥಾಪನೆ ಮಾಡುವಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರದ ಗಮನಸೆಳೆಯುವ ಸದ್ದುದ್ದೇಶದಿಂದ ಏಪ್ರಿಲ್ 5 ರಿಂದ ನಗರದಿಂದ ಪಾದಯಾತ್ರೆಯನ್ನು 96 ವಯಸ್ಸಿನ ಮಾಜಿ ಶಾಸಕ ಬಿ.ಸ್ವಾಮಿರಾವ್ ಮತ್ತು ಮೂಲೆಗದ್ದೆ ಸದಾನಂದಾಶ್ರಮದ ಮಠಾಧೀಶರಾದ ಅಭಿನವ ಚನ್ನಬಸವ ಮಹಾಸ್ವಾಮೀಜಿಯವರ ನೇತೃತ್ವದಲ್ಲಿ ಪಾದಯಾತ್ರೆ ಆರಂಭಗೊಂಡು ಏಪ್ರಿಲ್ 6 ರಂದು ರಿಪ್ಪನ್ಪೇಟೆಯ ಸಾಗರ ರಸ್ತೆಯಲ್ಲಿರುವ ಸರ್ಕಾರಿ ಪದವಿಪೂರ್ವ ಕಾಲೇಜ್ ಆವರಣದಲ್ಲಿ ಬೃಹತ್ ಸಮಾವೇಶವನ್ನು ಆಯೋಜಿಸಲಾಗಿದ್ದು ಈಗಾಗಲೇ ತಾಲ್ಲೂಕಿನ ವ್ಯಾಪ್ತಿಯಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತಪಡಿಸುತ್ತಿದ್ದಾರೆಂದು ಸ್ವಾಮೀಜಿ ವಿವರಿಸಿದರು.

ಅವರು ರಿಪ್ಪನ್ಪೇಟೆಯ ವಿನಾಯಕ ವೃತ್ತದಲ್ಲಿ ಏ. 5 ರಿಂದ 6 ರವರಗೆ ನಡೆಯುವ ಕ್ಷೇತ್ರದ ಮರುಸ್ಥಾಪನೆಯ ಮತ್ತು ಪಾದಯಾತ್ರೆಯ ಬೃಹತ್ ಸಮಾವೇಶದ ಕರಪತ್ರವನ್ನು ಬಿಡುಗಡೆಗೊಳಿಸಿ ‘ಹೊಸನಗರ ವಿಧಾನಸಭಾ ಕ್ಷೇತ್ರ ಬೇಕೇ ಬೇಕು’ ಎಂಬ ಸ್ಟೀಕರ್ ಅನ್ನು ವಾಹನಗಳಿಗೆ ಅಂಟಿಸುವುದರೊಂದಿಗೆ ಗ್ರಾಮ ಪಂಚಾಯಿತ್ ಕಛೇರಿಯಲ್ಲಿ ಪೂರ್ವಸಿದ್ದತೆಯ ಕುರಿತು ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು.
ಮಾಜಿ ಶಾಸಕ ಬಿ.ಸ್ವಾಮಿರಾವ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕ್ಷೇತ್ರದ ಮರುವಿಂಗಡೆಯ ಸಂದರ್ಭದಲ್ಲಿ ಹೊಸನಗರ ಕ್ಷೇತ್ರವನ್ನು ವಿಂಗಡಿಸಿ ಸಾಗರ-ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರಕ್ಕೆ ತಲಾ ಎರಡು ಹೋಬಳಿಗಳನ್ನು ಹರಿದು ಹಂಚಲಾಗಿದ್ದು ಇದರಿಂದಾಗಿ ಹೊಸನಗರ ಕ್ಷೇತ್ರ ಅನಾಥವಾಗುವಂತಾಗಿದೆ. ಅಲ್ಲದೆ ಅಭಿವೃದ್ದಿ ಸಹ ಕಾಣುವಲ್ಲಿ ವಿಫಲಗೊಂಡಿದೆ. ಇದರಿಂದಾಗಿ ಹೊಸನಗರ ಕ್ಷೇತ್ರವನ್ನು ಮರುಸ್ಥಾಪನೆ ಮಾಡುವುದರೊಂದಿಗೆ ಕ್ಷೇತ್ರದ ಜ್ವಲಂತ ಸಮಸ್ಯೆಗಳಿಗೆ ಸ್ಪಂದಿಸು ಜನನಾಯಕರನ್ನು ಆಯ್ಕೆ ಮಾಡಲು ಕ್ಷೇತ್ರದ ಅಗತ್ಯ ಇದೆ ಎಂದ ಅವರು ಕ್ಷೇತ್ರದ ಪ್ರತಿಮನೆಯವರು ತಲಾ ಒಬ್ಬರಂತೆ ಈ ಪಾದಯಾತ್ರೆಯಲ್ಲಿ ಪಾಲ್ಗೊಂಡು ಬೆಂಬಲ ನೀಡಲು ಕೋರಿದರು.

ಜಿಲ್ಲಾ ಪಂಚಾಯಿತ್ ಮಾಜಿ ಅಧ್ಯಕ್ಷ ಕಲಗೋಡು ರತ್ನಾಕರ್ ಮಾತನಾಡಿ, ಈಗಾಗಲೇ ಹೊಸನಗರ ಕ್ಷೇತ್ರ ಮರುಸ್ಥಾಪನೆ ಮಾಡುವಂತೆ ಆಗ್ರಹಿಸಿ ಏಪ್ರಿಲ್ 5 ಮತ್ತು 6 ರಂದು ನಡೆಯುವ ಪಾದಯಾತ್ರೆಗೆ ಮೂರು ತಂಡಗಳನ್ನಾಗಿ ರಚಿಸಲಾಗಿದ್ದು ಆ ತಂಡದವರು ಪಾದಯಾತ್ರೆಯಲ್ಲಿ ಭಾಗವಹಿಸುವವರಿಗೆ ಊಟೋಪಚಾರದ ಸಕಲ ರೀತಿಯ ವ್ಯವಸ್ಥೆಯನ್ನು ಮಾಡಿಕೊಳ್ಳಲು ಕಾರ್ಯಪ್ರವೃತ್ತರಾಗಿದ್ದಾರೆಂದರು.

ಮುಖಂಡರಾದ ಚಂದ್ರಮೌಳಿಗೌಡ, ಎನ್.ಆರ್.ದೇವಾನಂದ, ಎನ್.ವರ್ತೇಶ್, ವೀರೇಶ್ ಆಲವಳ್ಳಿ, ಆರ್.ಎ.ಚಾಬುಸಾಬ್, ಜಿಲ್ಲಾ ಪಂಚಾಯಿತ್ ಮಾಜಿ ಸದಸ್ಯರಾದ ಬಂಡಿ ರಾಮಚಂದ್ರ, ಸುರೇಶ ಸ್ವಾಮಿರಾವ್, ಪದ್ಮಾ ಸುರೇಶ್, ನಾಗರತ್ನ ದೇವರಾಜ್, ವಾಣಿ ಗೋಂದಪ್ಪ, ಆರ್.ಡಿ. ಶೀಲಾ, ಶೈಲಾ ಆರ್.ಪ್ರಭು, ಶಾಹಿದಾಬಾನು, ಡಿ.ಈ.ಮಧುಸೂದನ್, ಆಸಿಫ್ ಬಾಷಾ, ನಿರೂಪ್ ಕುಮಾರ್, ಚಿದಂಬರ್ ಹೂವಿನಕೋಣೆ, ಗಣಪತಿ ಗವಟೂರು, ಜಿ.ಡಿ.ಮಲ್ಲಿಕಾರ್ಜುನ, ಧನಲಕ್ಷ್ಮಿ, ಇನ್ನಿತರರು ಹಾಜರಿದ್ದರು.

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್ಸೈಟ್ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 7 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್ಸೈಟ್ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ ‘ಮಲ್ನಾಡ್ ಟೈಮ್ಸ್’ ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ.





