ರಿಪ್ಪನ್ಪೇಟೆ: ವೈದ್ಯರು, ಪ್ರಾಧ್ಯಾಪಕರು ಹಾಗೂ ನ್ಯಾಯಮೂರ್ತಿಗಳ ಮಾದರಿಯಲ್ಲಿ ಶಿಕ್ಷಕರ ಹೆಸರಿನ ಮುಂದೆಯೂ ‘Tr’ ಎಂದು ಬಳಸುವಂತೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ನೀಡಿರುವ ಸೂಚನೆಯನ್ನು ಶಾಂತವೇರಿ ಗೋಪಾಲಗೌಡ ಸಮಾಜವಾದಿ ಅಧ್ಯಯನ ಕೇಂದ್ರ ಟ್ರಸ್ಟ್ ಸ್ವಾಗತಿಸಿದೆ. ಇದೇ ನಿಟ್ಟಿನಲ್ಲಿ, ದೇಶದ ಬೆನ್ನೆಲುಬಾಗಿರುವ ರೈತರನ್ನು ಗೌರವಿಸಲು ಅವರ ಹೆಸರಿನ ಮುಂದೆಯೂ ‘Fr’ (Farmer) ಎಂಬ ಅಂಕಿತನಾಮವನ್ನು ಸೇರಿಸುವಂತೆ ಟ್ರಸ್ಟ್ನ ಟ್ರಸ್ಟಿ ಕಲ್ಲೂರು ಮೇಘರಾಜ್ ಅವರು ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಸ್ಥಳೀಯ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ ರೈತ ಮಹಿಳೆಯರು ಹಾಗೂ ಪುರುಷರ ಭೂದಾಖಲೆಗಳು, ಆರ್.ಟಿ.ಸಿ (ಪಹಣಿ) ಮತ್ತು ಮ್ಯುಟೇಷನ್ಗಳಲ್ಲಿ ಅವರ ಹೆಸರಿನ ಜೊತೆ ‘Fr’ ಎಂದು ನಮೂದಿಸಬೇಕು. ಈ ಮೂಲಕ ಅನ್ನದಾತರಿಗೆ ನಿಜವಾದ ಗೌರವ ನೀಡಿದಂತಾಗುತ್ತದೆ ಹಾಗೂ ಇದೊಂದು ದೇಶಕ್ಕೆ ಮಾದರಿಯಾಗುವ ಕ್ರಾಂತಿಕಾರಕ ನಿರ್ಧಾರವಾಗಲಿದೆ ಎಂದು ಅಭಿಪ್ರಾಯಪಟ್ಟರು.
ಸರ್ಕಾರಿ ನೌಕರರ ಶನಿವಾರದ ರಜೆ ರದ್ದತಿಗೆ ಆಗ್ರಹ:
ಇದೇ ವೇಳೆ ಸರ್ಕಾರಿ ನೌಕರರಿಗೆ ಪ್ರಸ್ತುತ ನೀಡಲಾಗುತ್ತಿರುವ 2ನೇ ಹಾಗೂ 4ನೇ ಶನಿವಾರದ ರಜೆಗಳನ್ನು ರದ್ದುಪಡಿಸಬೇಕು ಎಂದು ಅವರು ಆಗ್ರಹಿಸಿದರು. ಅಲ್ಲದೆ, ಸಾರ್ವಜನಿಕರು ಮತ್ತು ರೈತರು ರಜಾ ದಿನಗಳಲ್ಲಿ ಮಾಡುವ ಮೊಬೈಲ್ ಕರೆಗಳನ್ನು ಸರ್ಕಾರಿ ಅಧಿಕಾರಿಗಳು ಕಡ್ಡಾಯವಾಗಿ ಸ್ವೀಕರಿಸುವಂತೆ ಸರ್ಕಾರ ಕಟ್ಟುನಿಟ್ಟಿನ ಆದೇಶ ಹೊರಡಿಸಬೇಕು ಎಂದು ಅವರು ಮನವಿ ಮಾಡಿದರು.
ಪತ್ರಿಕಾಗೋಷ್ಠಿಯ ಬಳಿಕ ಅವರು ಹೋಬಳಿ ಕೇಂದ್ರಕ್ಕೆ ತೆರಳಿ ಈ ಬೇಡಿಕೆಗಳನ್ನೊಳಗೊಂಡ ಮನವಿ ಪತ್ರವನ್ನು ಸರ್ಕಾರಕ್ಕೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ಆರ್.ಎ. ಚಾಬುಸಾಬ್, ಹೆಚ್.ಎಂ. ಸಂಗಯ್ಯ, ಡಿ.ಎಸ್.ಎಸ್ ಅಧ್ಯಕ್ಷ ಸೋಮೇಶ್ವರ ಹಾಗೂ ಮುಡುಬ ಧರ್ಮಪ್ಪ ಉಪಸ್ಥಿತರಿದ್ದರು.

