ರಿಪ್ಪನ್ಪೇಟೆ: ಇಲ್ಲಿನ ಪ್ರಮುಖ ಜಂಕ್ಷನ್ ಆದ ಸಾಗರ-ಹೊಸನಗರ-ಶಿವಮೊಗ್ಗ-ತೀರ್ಥಹಳ್ಳಿ ಸಂಪರ್ಕಿಸುವ ನಾಲ್ಕು ರಸ್ತೆಗಳ ವೃತ್ತದಲ್ಲಿ ನೂತನವಾಗಿ ಅಳವಡಿಸಲಾದ ಹೈಮಾಸ್ಟ್ ಹಾಗೂ ಬೀದಿ ದೀಪಗಳನ್ನು ಸಾಗರ-ಹೊಸನಗರ ಕ್ಷೇತ್ರದ ಶಾಸಕ ಗೋಪಾಲಕೃಷ್ಣ ಬೇಳೂರು ಉದ್ಘಾಟಿಸಿದರು.
ಗೌರಿ-ಗಣೇಶ ಹಬ್ಬದ ಸಂದರ್ಭದಲ್ಲಿ ಯುವಕರಿಗೆ ಹಾಗೂ ಸಾರ್ವಜನಿಕರಿಗೆ ಅನುಕೂಲವಾಗುವ ದೃಷ್ಟಿಯಿಂದ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಗುತ್ತಿಗೆದಾರರಿಗೆ ಸೂಚನೆ ನೀಡಿ, ಹಬ್ಬಕ್ಕೂ ಮುನ್ನವೇ ಈ ತುರ್ತು ಕಾಮಗಾರಿಯನ್ನು ಪೂರ್ಣಗೊಳಿಸಲಾಗಿದೆ ಎಂದು ಶಾಸಕರು ತಿಳಿಸಿದರು.
ಅಭಿವೃದ್ಧಿ ಕಾರ್ಯಗಳಿಗೆ ಅನುದಾನದ ವಿವರ :
ರಾಜ್ಯ ಸರ್ಕಾರದ 7 ಕೋಟಿ ರೂ. ಅನುದಾನದಲ್ಲಿ ರಿಪ್ಪನ್ಪೇಟೆ ವೃತ್ತದ ಸಮಗ್ರ ಅಭಿವೃದ್ಧಿ ಮಾಡಲಾಗಿದೆ. ರಸ್ತೆ ಅಗಲೀಕರಣ ಹಾಗೂ ಡಾಂಬರೀಕರಣ. ಬಾಕ್ಸ್ ಚರಂಡಿ ನಿರ್ಮಾಣ ಮತ್ತು ವಿದ್ಯುತ್ ಕಂಬಗಳ ಸ್ಥಳಾಂತರ. ಪಾದಚಾರಿ ಮಾರ್ಗದಲ್ಲಿ ಇಂಟರ್ಲಾಕ್ ಅಳವಡಿಕೆ ಹಾಗೂ ಸುಸಜ್ಜಿತ ಬಸ್ ತಂಗುದಾಣ ನಿರ್ಮಾಣ. ರಸ್ತೆಯ ಡಿವೈಡರ್ ಮಧ್ಯದಲ್ಲಿ ಬೀದಿ ದೀಪಗಳ ಅಳವಡಿಕೆ ಮಾಡಲಾಗಿದೆ ಎಂದರು.
ವಿಪಕ್ಷಗಳ ಟೀಕೆಗೆ ತಿರುಗೇಟು :
ಕಾರ್ಯಕ್ರಮದ ಬಳಿಕ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದ ಶಾಸಕರು, “ಗ್ಯಾರಂಟಿ ಯೋಜನೆಗಳಿಂದಾಗಿ ಸರ್ಕಾರ ದಿವಾಳಿಯಾಗಿದೆ, ಅಭಿವೃದ್ಧಿಗೆ ಹಣ ಬಿಡುಗಡೆಯಾಗುತ್ತಿಲ್ಲ” ಎಂಬ ವಿರೋಧ ಪಕ್ಷಗಳ ಆರೋಪವನ್ನು ತಳ್ಳಿಹಾಕಿದರು. ಆನಂದಪುರ-ರಿಪ್ಪನ್ಪೇಟೆ ರಸ್ತೆ ಅಭಿವೃದ್ಧಿಗೆ 20 ಕೋಟಿ ರೂ. ಹಾಗೂ ರಿಪ್ಪನ್ಪೇಟೆ ವೃತ್ತದ ಕಾಮಗಾರಿಗೆ 7 ಕೋಟಿ ರೂ. ಒದಗಿಸುವ ಮೂಲಕ ಸರ್ಕಾರ ಅಭಿವೃದ್ಧಿಗೆ ಬದ್ಧವಾಗಿದೆ ಎಂಬುದನ್ನು ಸಾಬೀತುಪಡಿಸಿದೆ ಎಂದರು.
ಇದೇ ವೇಳೆ, ರಿಪ್ಪನ್ಪೇಟೆ ಗ್ರಾಮ ಪಂಚಾಯಿತಿಯನ್ನು ಪಟ್ಟಣ ಪಂಚಾಯಿತಿಯನ್ನಾಗಿ ಮೇಲ್ದರ್ಜೆಗೇರಿಸಲು ಸರ್ಕಾರದ ಮಟ್ಟದಲ್ಲಿ ಒತ್ತಡ ಹೇರುವ ಭರವಸೆಯನ್ನು ನೀಡಿದರು.
ಗ್ಯಾರಂಟಿ ಯೋಜನೆ ಮತ್ತು ಜನಪರ ಕಾಳಜಿ :
11 ಕೋಟಿ ರೂ. ವೆಚ್ಚ: ತಾಲ್ಲೂಕಿನ ಸುಮಾರು 25,000 ಫಲಾನುಭವಿಗಳಿಗೆ ಸರ್ಕಾರದ ಗ್ಯಾರಂಟಿ ಯೋಜನೆಗಳ ಮೂಲಕ ಪ್ರತಿ ತಿಂಗಳು 11 ಕೋಟಿ ರೂ. ತಲುಪುತ್ತಿದೆ.
ಹಬ್ಬಕ್ಕೆ ಆರ್ಥಿಕ ನೆರವು: ಈ ಬಾರಿಯ ಗಣೇಶೋತ್ಸವವನ್ನು ಯುವಕರು ಸಂಭ್ರಮದಿಂದ ಆಚರಿಸಲಿ ಎಂಬ ಉದ್ದೇಶದಿಂದ ಎರಡು ತಾಲ್ಲೂಕುಗಳ 700ಕ್ಕೂ ಅಧಿಕ ಗಣಪತಿ ಸೇವಾ ಸಮಿತಿಗಳಿಗೆ ವೈಯಕ್ತಿಕವಾಗಿ ಆರ್ಥಿಕ ನೆರವು ನೀಡಲಾಗಿದೆ.

ಮಾಜಿ ಮುಖ್ಯಮಂತ್ರಿ ದಿ. ಬಂಗಾರಪ್ಪನವರ ಆದರ್ಶಗಳನ್ನು ಪಾಲಿಸುತ್ತಿರುವ ತಾನು, ಯಾವುದೇ ಜಾತಿ, ಪಕ್ಷದ ಭೇದಭಾವವಿಲ್ಲದೆ ಜನರ ಕಷ್ಟಗಳಿಗೆ ಸ್ಪಂದಿಸುತ್ತಿದ್ದೇನೆ. ತನ್ನನ್ನು ಟೀಕಿಸುವವರಿಗೆ ಕ್ಷೇತ್ರದಲ್ಲಿ ನಡೆಯುತ್ತಿರುವ ಈ ಅಭಿವೃದ್ಧಿ ಕಾರ್ಯಗಳೇ ಕನ್ನಡಿಯಾಗಿವೆ ಎಂದು ಶಾಸಕ ಬೇಳೂರು ತಿಳಿಸಿದರು.
ಸಭೆಯಲ್ಲಿ ಹೊಸನಗರ ತಾಲ್ಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚಂದ್ರಮೌಳಿ, ಮಾಜಿ ಜಿ.ಪಂ. ಸದಸ್ಯ ಬಂಡಿ ರಾಮಚಂದ್ರ, ಎಪಿಎಂಸಿ ಮಾಜಿ ಅಧ್ಯಕ್ಷ ಹೆಚ್.ವಿ. ಈಶ್ವರಪ್ಪಗೌಡ, ಗ್ಯಾರಂಟಿ ಸಮಿತಿ ಅಧ್ಯಕ್ಷ ಚಿದಂಬರ್ ಹೂವಿನಕೋಣೆ, ಮುಖಂಡರಾದ ಕೆರೆಹಳ್ಳಿ ರವೀಂದ್ರ, ಡಿ.ಇ. ಮಧುಸೂದನ್, ಧನಲಕ್ಷ್ಮಿ, ನೇಮಪ್ಪ ಸೇರಿದಂತೆ ಹಲವು ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಹಾಜರಿದ್ದರು.

