ರಿಪ್ಪನ್ಪೇಟೆ ; ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರದ ಹೊಸನಗರ ಹುಂಚ ಹೋಬಳಿಯ ಹೆದ್ದಾರಿಪುರ ಗ್ರಾಮ ಪಂಚಾಯಿತ್ ವ್ಯಾಪ್ತಿಯ ಕಣಬಂದೂರು ಗ್ರಾಮದಲ್ಲಿ ಶತಮಾನೋತ್ಸವ ಆಚರಿಸಿದ ಸರ್ಕಾರಿ ಕಿರಿಯ ಪ್ರಾಥಮಿಕ ಪಾಠ ಶಾಲೆಯಲ್ಲಿ ಒಂದರಿಂದ 5ನೇ ತರಗತಿಗೆ ವರೆಗೆ ಎರಡು ಕೊಠಡಿಗಳಿದ್ದು ಆದರಲ್ಲಿ ಒಂದು ಕೊಠಡಿಯನ್ನು ಅಂಗನವಾಡಿಗೆ ಬಿಟ್ಟುಕೊಟ್ಟು ಒಂದೇ ಕೊಠಡಿಯಲ್ಲಿ ನಾಲ್ಕು ತರಗತಿಗಳನ್ನು ನಡೆಸುವ ಏಕೈಕ ಶಿಕ್ಷಕನ ಪರಿಪಾಠ ಹೇಳದಂತಾಗಿದೆ.
ಶಾಲೆಯ ಪಕ್ಕದಲ್ಲಿ ಸುಮಾರು 25 ಲಕ್ಷ ರೂ. ವೆಚ್ಚದಲ್ಲಿ ಸುಮಾರು 15 ವರ್ಷದ ಹಿಂದೆ ನಿರ್ಮಿಸಲಾದ ಅಂಗನವಾಡಿ ಕಟ್ಟಡ ಸಂಪೂರ್ಣವಾಗಿ ಶಿಥಿಲಗೊಂಡಿದ್ದು ಈ ಕಟ್ಟಡದ ಬಾಗಿಲು, ಕಿಟಕಿಗಳು ಸಹ ಉದುರಿ ಬೀಳುವಂತಾಗಿರುವ ಕಾರಣ ಸರ್ಕಾರಿ ಶಾಲೆಯಲ್ಲಿನ ಒಂದು ಕೊಠಡಿಯನ್ನು ಅಂಗನವಾಡಿಗಾಗಿ ಬಿಡಿಸಿಕೊಟ್ಟಿದ್ದಾರೆ. ಆದರೆ ಇಂತಹ ಕಿಷ್ಕಿಂದೆಯಂತಾಗಿರುವ ಶಾಲೆಯ ಒಂದೇ ಕೊಠಡಿಯಲ್ಲಿ ಬಿಸಿಯೂಟದ ಆಹಾರದ ದವಸ-ಧಾನ್ಯಗಳ ದಾಸ್ತಾನು,
ಟೇಬಲ್ ಕುರ್ಚಿ ಮತ್ತು ಅಲ್ಮೆರಾ ಬೀರು, ಕ್ರೀಡಾ ಸಾಮಗ್ರಿಗಳು ಸೇರಿದಂತೆ ಬೇಕು ಬೇಡವಾದ ಹಳೆಯ ಶಾಲೆಯ ವಸ್ತುಗಳು ಹೀಗೆ ಇರುವ ಒಂದರಿಂದ ನಾಲ್ಕನೇ ತರಗತಿಯ 15 ವಿದ್ಯಾರ್ಥಿಗಳನ್ನು ಕಿಷ್ಕಿಂದೆಯಂತಾದ ಒಂದೇ ಕೊಠಡಿಯಲ್ಲಿ ಕೂರಿಸಿ ಪಾಠವನ್ನು ಎಲ್ಲ ತರಗತಿಗೂ ಓರ್ವ ಶಿಕ್ಷಕನೇ ನಿರ್ವಹಿಸುವ ದುಸ್ಥಿತಿ ಬಂದಿದೆ ಎಂದು ಗ್ರಾಮಸ್ಥರು ಜನಪ್ರತಿನಿಧಿಗಳ ನಿರ್ಲಕ್ಷ್ಯಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಶತಮಾನೋತ್ಸವ ಆಚರಿಸಿಕೊಂಡಂತಹ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಎರಡು ಕೊಠಡಿಗಳಿದ್ದು 10 ಕ್ಕೂ ಆಧಿಕ ವಿದ್ಯಾರ್ಥಿಗಳು ಒಂದರಿಂದ ನಾಲ್ಕನೇ ತರಗತಿ ವ್ಯಾಸಂಗ ಮಾಡುತ್ತಿದ್ದು ಇರುವ ಒಂದು ಕೊಠಡಿಯಲ್ಲಿ ಅಂಗನವಾಡಿ ಕೇಂದ್ರಕ್ಕೆ ಬಿಟ್ಟುಕೊಡಲಾಗಿ ಮಕ್ಕಳು ಇಕ್ಕಟಾದ ಕೊಠಡಿಯಲ್ಲಿ ಕುಳಿತು ಪಾಠ ಪ್ರವಚನಚನವನ್ನು ಕೇಳಬೇಕಾಗಿದೆ ಎಂದು ಪುಟಾಣಿ ವಿದ್ಯಾರ್ಥಿಗಳು ಮಾಧ್ಯಮದವರ ಮುಂದೆ ತಮ್ಮ ನೋವಿನ ತೊದಲು ಮಾತಿನಲ್ಲಿ ವ್ಯಕ್ತಪಡಿಸಿದ ದೃಶ್ಯ ಮನಕುಲಕುವಂತೆ ಮಾಡಿತು.
ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಕಡಿಮೆಯಿದ್ದು ಕೊಠಡಿಗಳು ಹೆಚ್ಚು ಇರುತ್ತವೆ. ಆದರೆ ಮಕ್ಕಳ ಸಂಖ್ಯೆ ಕಡಿಮೆಯಿಲ್ಲದೆ ಸರ್ಕಾರಿ ಶಾಲೆಯಲ್ಲಿಯೇ ನಮ್ಮ ಬಡ ಮಕ್ಕಳು ವ್ಯಾಸಂಗ ಮಾಡಬೇಕು ಎನ್ನುವ ಆಲೋಚನೆಯಲ್ಲಿ ಗ್ರಾಮಸ್ಥರು ಸಾಕಷ್ಟು ಭಾರಿ ಕ್ಷೇತ್ರದ ಜನಪ್ರತಿನಿಧಿಗಳಿಗೆ ಮತ್ತು ಹೆದ್ದಾರಿಪುರ ಗ್ರಾಮ ಪಂಚಾಯಿತ್ಗೆ ಸಿಡಿಪಿಓಗಳಿಗೆ ಮನವಿ ಮೂಲಕ ಅಂಗನವಾಡಿ ಕಟ್ಟಡವನ್ನು ದುರಸ್ಥಿಗೊಳಿಸಿ ಶಾಲೆಯ ಕೊಠಡಿಯಿಂದ ಅಂಗನವಾಡಿಗೆ ಸ್ಥಳಾಂತರ ಮಾಡೋಣ ಎಂದು ಮನವಿ ಮಾಡಿಕೊಂಡರೂ ಏನು ಪ್ರಯೋಜನವಾಗಿಲ್ಲ ಎಂದು ಗ್ರಾಮಸ್ಥರು ತಿಳಿಸಿದರು.
ಓರ್ವ ಶಿಕ್ಷಕ, ಅಂಗನವಾಡಿ ಕಾರ್ಯಕರ್ತೆ ಮತ್ತು ಬಿಸಿಯೂಟದ ಕಾರ್ಯಕರ್ತೆ ಮತ್ತು ಅಂಗನವಾಡಿ ಸಹಾಯಕಿ ಹೀಗೆ ಶಾಲೆಯ ವಿದ್ಯಾರ್ಥಿಗಳು ಮತ್ತು ಅಂಗನವಾಡಿ ಮಕ್ಕಳು ಶತಮಾನೋತ್ಸವ ಆಚರಿಸಿಕೊಂಡ ಶಾಲೆ ಈಗ ಕಿಷ್ಕಿಂದೆಯಂತಾಗಿರುವುದು ಜನಪ್ರತಿನಿಧಿಗಳ ನಿರ್ಲಕ್ಷ್ಯಕ್ಕೆ ಪೋಷಕರು ತೀವ್ರ ಅಸಮದಾನಕ್ಕೆ ಕಾರಣವಾಗಿದೆ.