ಹೊಂಬುಜ ; “ಹಾಲನ್ನು ನಿಸ್ವಾರ್ಥವಾಗಿ ನೀಡುತ್ತಿರುವ ಗೋವುಗಳು ಜನಸಮುದಾಯವನ್ನು ಪೋಷಣೆ ಮಾಡುವ ಮಾತೆ. ದೀಪಾವಳಿಯ ಪಾಡ್ಯ ಸುದಿನದಂದು ಗೋಪೂಜೆ ಸಂಸ್ಕಾರವು ಭಾರತೀಯ ಧರ್ಮಪರಂಪರೆಯ ಮಹತ್ವವನ್ನು ಸಾರುತ್ತವೆ” ಎಂದು ಹೊಂಬುಜ ಅತಿಶಯ ಶ್ರೀಕ್ಷೇತ್ರದ ಪೀಠಾಧೀಶರಾದ ಪರಮಪೂಜ್ಯ ಜಗದ್ಗುರು ಸ್ವಸ್ತಿಶ್ರೀ ಡಾ. ದೇವೇಂದ್ರಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮಿಗಳವರು ಶ್ರೀಕ್ಷೇತ್ರದ ಗೋಶಾಲೆಯಲ್ಲಿ ಗೋವುಗಳಿಗೆ ಪೂಜಾ ವಿಧಿ-ವಿಧಾನ ಸಮರ್ಪಿಸಿ, ಪ್ರವಚನದಲ್ಲಿ “ಕಾಮಧೇನು ಎಂಬ ಪವಿತ್ರ ಭಾವನೆಯೊಂದಿಗೆ ಕೃಷಿಕರು ಗೋವುಗಳನ್ನು ಆರೈಕೆ ಮಾಡುವಂತಾಗಲು ಗೋಪೂಜೆಯಲ್ಲಿ ನಾವೆಲ್ಲರೂ ಪಾಲ್ಗೊಳ್ಳೋಣ” ಎಂದರು.

ಭಗವಾನ ಶ್ರೀ ಪಾರ್ಶ್ವನಾಥ ಸ್ವಾಮಿ, ಮಹಾಮಾತೆ ಯಕ್ಷಿ ಶ್ರೀ ಪದ್ಮಾವತಿ ದೇವಿ ಸನ್ನಿಧಿಯಲ್ಲಿ ಆಗಮೋಕ್ತ ವಿಧಿಯಲ್ಲಿ ಪೂಜೆ ಸಲ್ಲಿಸಲಾಯಿತು. ಶ್ರೀ ನೇಮಿನಾಥ ಸ್ವಾಮಿ, ಶ್ರೀ ಮಹಾವೀರ ಸ್ವಾಮಿ, ಶ್ರೀ ಆದಿನಾಥ ಸ್ವಾಮಿ, ಶ್ರೀ ಸರಸ್ವತಿ ದೇವಿ, ಶ್ರೀ ಕೂಷ್ಮಾಂಡಿನಿ ದೇವಿ, ಶ್ರೀ ಕ್ಷೇತ್ರಪಾಲ ಹಾಗೂ ಶ್ರೀ ನಾಗ ಸನ್ನಿಧಿಯಲ್ಲಿ ಪೂಜೆ ಸಮರ್ಪಿಸಲಾಯಿತು.

ಊರಪರವೂರ ಭಕ್ತರು, ಶ್ರೀ ಪದ್ಮಾವತಿ ಮಹಿಳಾ ಸಮಾಜದ ಶ್ರಾವಕೆಯರು, ಶ್ರೀ ಕುಂದಕುಂದ ಗುರುಕುಲ ವಿದ್ಯಾಪೀಠದ ವಿದ್ಯಾರ್ಥಿಗಳು ಭಕ್ತಿಯಿಂದ ಗೋಮಾತೆಯ ಪೂಜಾ ವಿಧಿಯಲ್ಲಿ ಭಾಗಿಯಾದರು.

ಗಜರಾಣಿ ಐಶ್ವರ್ಯ, ಅಶ್ವಗಳಾದ ಮಾನವಿ, ಮಾನಸಿ, ಚೇತಕ್, ಪವನ್ ಶ್ರೀಗಳವರಿಂದ ಶ್ರೀಫಲ ಮಂತ್ರಾಕ್ಷತೆ ಸ್ವೀಕರಿಸಿದವು.


