ಹೊಸನಗರ

ಅರಸಾಳು ರೈಲು ನಿಲ್ದಾಣಕ್ಕೆ ಡಿಆರ್‌ಎಂ ಮುದಿತ್ ಮಿತ್ತಲ್ ಭೇಟಿ, ಪರಿಶೀಲನೆ

ರಿಪ್ಪನ್‌ಪೇಟೆ : ಅರಸಾಳು ರೈಲ್ವೆ ನಿಲ್ದಾಣಕ್ಕೆ ಮೈಸೂರು ವಿಭಾಗೀಯ ರೈಲ್ವೆ ವ್ಯವಸ್ಥಾಪಕ (ಡಿಆರ್‌ಎಂ) ಮುದಿತ್ ಮಿತ್ತಲ್ ಶನಿವಾರ ಭೇಟಿ ನೀಡಿ ನಿಲ್ದಾಣದ ಸ್ಥಿತಿಗತಿಗಳನ್ನು ಪರಿಶೀಲನೆ ನಡೆಸುವುದರೊಂದಿಗೆ ನಿಲ್ದಾಣದ ಬಳಿಯಲ್ಲಿರುವ ಮಾಲ್ಗುಡಿ ಮ್ಯೂಸಿಯಂ ವೀಕ್ಷಿಸಿದರು.

ಅರಸಾಳು ರೈಲ್ವೆ ನಿಲ್ದಾಣದಲ್ಲಿನ ಶುಚಿತ್ವ. ಪ್ರಯಾಣಿಕರಿಗೆ ಕುಡಿಯುವ ನೀರು, ನಿರ್ವಹಣೆ ಹಾಗೂ ಮೂಲಸೌಕರ್ಯಗಳ ಕೊರತೆ ಕುರಿತು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಮುದಿತ್ ಮಿತ್ತಲ್, ಸಮಸ್ಯೆಗಳು ತಮ್ಮ ಗಮನಕ್ಕೆ ಬಂದಿದ್ದು ಈ ಕುರಿತು ಸಂಬಂಧಪಟ್ಟ ಅಧಿಕಾರಿಗಳಿಗೆ ಕೂಡಲೇ ಪರಿಹರಿಸುವಂತೆ ಆದೇಶಿಸಲಾಗಿದೆ. ಆದಷ್ಟು ಬೇಗ ರೈಲ್ವೆ ಪ್ರಯಾಣಿಕರ ಮೂಲಭೂತ ಸಮಸ್ಯೆಗಳ ಕುರಿತು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ಮಲೆನಾಡಿನ ಅತಿ ಹೆಚ್ಚು ಪ್ರಯಾಣಿಕರು ಸಂಚರಿಸುತ್ತಿರುವ ಅರಸಾಳು ನಿಲ್ದಾಣ ಮತ್ತು ಮಾಲ್ಗುಡಿ ಮ್ಯೂಸಿಯಂನಲ್ಲಿ ಸಮರ್ಪಕ ನಿರ್ವಹಣೆ ಹಾಗೂ ಅಗತ್ಯ ಮೂಲಸೌಕರ್ಯಗಳ ಕೊರತೆ ಮ್ಯೂಸಿಯಂ ಅಭಿವೃದ್ದಿಗೆ ರೈಲ್ವೆ ಇಲಾಖೆ ಹೆಚ್ಚಿನ ಆದ್ಯತೆ ನೀಡದಿರುವುದಕ್ಕೆ ಕಾರಣವೇನು? ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಮಾಲ್ಗುಡಿ ಮ್ಯೂಸಿಯಂ ಅಭಿವೃದ್ದಿಗಾಗಿ ಅಗತ್ಯ ಹೆಚ್ಚಿನ ಆನುದಾನದ ಬೇಡಿಕೆಯನ್ನು ಈಗಾಗಲೇ ಸಲ್ಲಿಸಲಾಗಿದೆ. ಅನುದಾನ ಬಿಡುಗಡೆಯಾದ ಬಳಿಕ ಮ್ಯೂಸಿಯಂಯನ್ನು ಅಗತ್ಯ ರೀತಿಯಲ್ಲಿ ಅಭಿವೃದ್ದಿಪಡಿಸಲಾಗುವುದು ಎಂದು ಹೇಳಿದರು.

ರೈಲ್ವೆ ಇಲಾಖೆಯ ಮುಖ್ಯ ಕಾರ್ಯ ರೈಲುಗಳ ಸಂಚಾರವನ್ನು ನಿರ್ವಹಿಸುವುದು ಸೇರಿದಂತೆ ಇತರೆ ಸ್ಥಳೀಯ ಅಭಿವೃದ್ದಿ ಕಾರ್ಯಗಳ ಬಗ್ಗೆ ರಾಜ್ಯ ಸರ್ಕಾರಗಳು ಹಾಗೂ ಸಂಬಂಧಪಟ್ಟ ಸ್ಥಳೀಯ ಸಂಸ್ಥೆಗಳು ಚಿಂತಿಸಿ ಕ್ರಮ ಕೈಗೊಳ್ಳಬೇಕು ಇಲಾಖೆಯು ಸಹಕರಿಸಲಿದೆ ಎಂದು ಆಭಿಪ್ರಾಯಪಟ್ಟರು.

ನಂತರ ಅರಸಾಳು ರೈಲ್ವೆ ನಿಲ್ದಾಣ ಪರಿಶೀಲಿಸಿದ ಮುದಿತ್ ಮುತ್ತಲ್, ನಿಲ್ದಾಣದಲ್ಲಿರುವ ಮಾಲ್ಗುಡಿ ಚಾಯ್ ಕೇಂದ್ರಕ್ಕೆ ಭೇಟಿ ಚಹಾ ಸವಿದರು.

ಈ ಸಂದರ್ಭದಲ್ಲಿ ರೈಲ್ವೆ ಇಲಾಖೆಯ ಆರ್.ಪಿ.ಎಫ್, ಉಸ್ತುವಾರಿ ಕೊಂಡರೆಡ್ಡಿ, ಜಗದೀಶ್, ಮೂರ್ತಿ ಸೇರಿದಂತೆ ಹಲವು ಇಲಾಖೆಯ ಅಧಿಕಾರಿಗಳು ಹಾಜರಿದ್ದರು.

Leave a Comment