ವಿದ್ಯುತ್ ಖಾಸಗೀಕರಣ ಹುನ್ನಾರಕ್ಕೆ ಸಿಬ್ಬಂದಿಗಳ ತೀವ್ರ ಆಕ್ಷೇಪ : ಹೊಸನಗರದಲ್ಲಿ ಕಚೇರಿ ಎದುರು ನೌಕರರ ಪ್ರತಿಭಟನೆ

Written by Mahesha Hindlemane

Published on:

ಹೊಸನಗರ : ಸರ್ಕಾರದ ಅಧೀನದ ವಿದ್ಯುತ್ ವಿತರಣಾ ಮೆಸ್ಕಾಂ ಸಂಸ್ಥೆ ಸೇರಿದಂತೆ ರಾಜ್ಯದ ಹಲವು ಭಾಗದ ವಿದ್ಯುತ್ ವಿತರಣಾ ಸಂಸ್ಥೆಗಳನ್ನು ಖಾಸಗೀಕರಣಗೊಳಿಸಿ, ಟಾಟಾ ಪವರ್ ಕಂಪನಿ ಲಿಮಿಟೆಡ್ ಎಂಬ ಲಾಭದಾಯಕ ಖಾಸಗಿ ಸಂಸ್ಥೆಯ ಕೈಗೆ ಇಡೀ ವ್ಯವಸ್ಥೆಯನ್ನು ನೀಡಲು ಉದ್ದೇಶಿತ ಸರ್ಕಾರದ ನೀತಿಗೆ ಮೆಸ್ಕಾಂ ಸಿಬ್ಬಂದಿಗಳಿಂದ ವ್ಯಾಪಕ ಆಕ್ಷೇಪ ವ್ಯಕ್ತವಾಗಿದೆ.

WhatsApp Group Join Now
Telegram Group Join Now
Instagram Group Join Now
📢 Stay Updated! Join our WhatsApp Channel Now →

ಇಲ್ಲಿನ ಮೆಸ್ಕಾಂ ಕಚೇರಿ ಎದುರು ಗುರುವಾರ ಸಭೆ ಸೇರಿದ ಸಿಬ್ಬಂದಿಗಳು ಸಂಸ್ಥೆಯ ಖಾಸಗೀಕರಣಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದರು.

ಈ ವೇಳೆ ಸಾಗರ ಮೆಸ್ಕಾಂ ವಿಭಾಗದ ಕಾರ್ಯಪಾಲಕ ಅಭಿಯಂತರ ಚಂದ್ರಶೇಖರ್ ಮಾತನಾಡಿ, ಖಾಸಗೀಕರಣವು ಕೇವಲ ನಗರ ಹಾಗು ಕೈಗಾರಿಕಾ ಪ್ರದೇಶಗಳ ಆಯ್ಕೆಗೆ ಮಾತ್ರ ಸೀಮಿತವಾಗಿದ್ದು, ಇದರಿಂದ ಗ್ರಾಮೀಣ ಭಾಗದಲ್ಲಿ ಹಗಲಿರುಳು ಸೇವೆ ಸಲ್ಲಿಸುತ್ತಿರುವ ಎಲ್ಲಾ ವಿದ್ಯುತ್ ಸಂಸ್ಥೆಗಳು ಭಾರೀ ಆರ್ಥಿಕ ಸಂಕಷ್ಟ ಎದುರಿಸಬೇಕಾಗುತ್ತದೆ. ಖಾಸಗೀಕರಣದಿಂದ ಮೆಸ್ಕಾಂ ಸಂಸ್ಥೆ ಈಗಾಗಲೇ ಹೊಂದಿರುವ ಕೋಟ್ಯಂತರ ರೂಪಾಯಿಗಳ ಸರ್ಕಾರದ ಆಸ್ತಿ ಖಾಸಗಿ ಸಂಸ್ಥೆಯ ಪಾಲಾಗಿ ಇಂದಿನ ನೌಕರರ ಬದುಕು ಹೀನಾಯ ಸ್ಥಿತಿ ತಲುಪುತ್ತದೆ ಎಂಬ ಆತಂಕ ವ್ಯಕ್ತಪಡಿಸಿದರು.

ಖಾಸಗೀಕರಣ ವಿರೋಧಿ ಒಕ್ಕೂಟ ಅಧ್ಯಕ ಎಸ್.ಡಿ. ದುರ್ಗಪ್ಪ ಮಾತನಾಡಿ, ಕೃಷಿಯನ್ನೇ ನಂಬಿ ಗ್ರಾಮೀಣ ಪ್ರದೇಶಗಳಲ್ಲಿ ಬದುಕು ಕಟ್ಟಿಕೊಂಡಿರುವ ಸಾವಿರಾರು ರೈತರಿಗೆ ಮೆಸ್ಕಾಂ ಖಾಸಗೀಕರಣದ ಬಿಸಿ ತಟ್ಟಲಿದೆ. ಕೇವಲ ಲಾಭದ ಉದ್ದೇಶ ಹೊಂದಿದ್ದರೆ ಗ್ರಾಮೀಣ ಬಡ ರೈತರ ಮತ್ತು ಬಡ ಗ್ರಾಹಕರ ಸಬ್ಸಿಡಿ ಆಧಾರಿತ ಗ್ರಾಹಕ ವರ್ಗದ ಮೂಲ ಆಶಯಕ್ಕೆ ಖಾಸಗೀಕರಣ ಮಾರಕವಾಗಿದೆ ಎಂದರು.

ವಿಡಿಯೋ ವೀಕ್ಷಿಸಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ https://www.facebook.com/share/v/1Bf3mEnDZK/

ಒಕ್ಕೂಟದ ಎಸ್‌ಸಿ, ಎಸ್‌ಟಿ ಕೇಂದ್ರ ಕಲ್ಯಾಣ ಸಮಿತಿ ಸದಸ್ಯ ಮಂಜುನಾಥ್ ಮಾತನಾಡಿ, ಇದೊಂದು ಅವೈಜ್ಞಾನಿಕ ಯೋಜನೆ. ಖಾಸಗೀಕರಣದಿಂದ ಹಾಲಿ ನೌಕರರ ಬದುಕು, ಭವಿಷ್ಯ ಹಾಗೂ ಭದ್ರತೆ ಡೋಲಾಯಮಾನ ಸ್ಥಿತಿ ತಲುಪುವುದರಲ್ಲಿ ಅನುಮಾನ ಬೇಡ. ಸರ್ಕಾರಿ ಸಂಸ್ಥೆಯು ಆರ್ಥಿಕ ನಷ್ಟಕ್ಕೆ ಸಿಲುಕಿ ಸಿಬ್ಬಂದಿಗಳ ಭವಿಷ್ಯದ ನೇಮಕಾತಿ ಮೇಲೆ ತೀವ್ರ ಪರಿಣಾಮ ಬೀರಲಿದೆ ಎಂಬ ನೋವು ವ್ಯಕ್ತಪಡಿಸಿದರು.

ಸಿಬ್ಬಂದಿಗಳಿಗೆ ಮಾರಕವಾಗುವ ಉದ್ದೇಶಿತ ಈ ಖಾಸಗೀಕರಣ ಆಲೋಚನೆಯನ್ನು ಆಯೋಗ ಕೂಡಲೇ ಕೈಬಿಟ್ಟು ನೌಕರರ ಹಿತ ಕಾಪಾಡಬೇಕು. ಮೆಸ್ಕಾಂ ವಿದ್ಯುತ್ ಸಂಸ್ಥೆಯ ಆರ್ಥಿಕ ಸ್ಥಿರತೆ, ಸಾವಿರಾರು ಕಾರ್ಮಿಕರ ಭವಿಷ್ಯ ಹಾಗೂ ರೈತಾಪಿ ವರ್ಗ ಸೇರಿದಂತೆ ಗ್ರಾಮೀಣ ಭಾಗದ ಲಕ್ಷಾಂತರ ಗ್ರಾಹಕರ ಹಿತರಕ್ಷಣೆ ಪರಿಗಣಿಸಿ ಟಾಟಾ ಖಾಸಗಿ ಪವರ್ ಕಂಪನಿ ಲಿಮಿಟೆಡ್ ವಿದ್ಯುತ್ ವಿವರಣೆಗಾಗಿ ಸಲ್ಲಿಸಿರುವ ಅರ್ಜಿಯನ್ನು (MP/03/2026) ತಿರಸ್ಕರಿಸಬೇಕು. ಸಂಸ್ಥೆಯ ಕಾರ್ಮಿಕರು ಖಾಸಗೀಕರಣ ಕುರಿತು ತಮ್ಮ ತಮ್ಮ ಕರ್ತವ್ಯ ವ್ಯಾಪ್ತಿಯಲ್ಲಿ ಖಾಸಗೀಕರಣದಿಂದ ಆಗುವ ಅನಾನುಕೂಲ ಕುರಿತು ಜನಜಾಗೃತಿ ಮೂಡಿಸುವಂತೆ ತಾಂತ್ರಿಕ ವಿಭಾಗದ ಸಹಾಯಕ ಅಭಿಯಂತರ ಸಂತೃಪ್ತಿ ಕರೆ ನೀಡಿದರು.

ಈ ವೇಳೆ ಸ್ಥಳೀಯ ಅಧ್ಯಕ್ಷ ಸತೀಶ್, ಉಪಾಧ್ಯಕ್ಷ ಕುಮಾರ್, ಕಿರಿಯ ಅಭಿಯಂತರ ಪ್ರಕಾಶ್, ಸಹಾಯಕ ಅಭಿಯಂತರರಾದ ಮಾಯಣ್ಣಗೌಡ, ಅಶ್ವಲ್, ಒಕ್ಕೂಟದ ಸದಸ್ಯರು, ಗುತ್ತಿಗೆದಾರರ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.

Leave a Comment