ಹೊಸನಗರ

ಬೆಳೆ ಸಮೀಕ್ಷೆ ಮಾಡಿದರೂ ಪಹಣಿಯಲ್ಲಿ ಬೆಳೆ ಬಾರದಿರುವ ಕುರಿತು ರೈತರ ಆಕ್ರೋಶ

ರಿಪ್ಪನ್‌ಪೇಟೆ : ಪ್ರತಿ ವರ್ಷ ಕಂದಾಯ ಇಲಾಖೆಯ ಗ್ರಾಮ ಲೆಕ್ಕಾಧಿಕಾರಿಗಳು ಮತ್ತು ಕೃಷಿ ಇಲಾಖೆಯ ಗ್ರಾಮ ಸಹಾಯಕರು ಬೆಳೆ ಸಮೀಕ್ಷೆ ಮಾಡಲಾದರೂ ಕೂಡಾ ಆರ್.ಟಿ.ಸಿಯಲ್ಲಿ ಬೆಳೆ ಬಾರದೇ ರೈತರು ಸಹಕಾರಿ ಸಂಘ ಮತ್ತು ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಬೆಳೆ ಸಾಲ ಪಡೆಯಲು ಹೋದರೆ ಪಹಣಿಯಲ್ಲಿ ಬೆಳೆ ನಮೂದಾಗದೇ ಇದ್ದು ಇದರಿಂದ ಗ್ರಾಮ ಲೆಕ್ಕಾಧಿಕಾರಿಗಳ ಬಳಿ ಅಲೆಯಬೇಕಾದ ಅನಿವಾರ್ಯತೆ ಎದುರಾಗಿದೆ ಎಂದು ರೈತ ಮುಖಂಡ ಬಿ.ಟಿ. ತೀರ್ಥಪ್ಪ ಮತ್ತು ಇನ್ನಿತರ ಗ್ರಾಮದ ರೈತರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪ್ರತಿ ವರ್ಷ ಸರ್ಕಾರ ನವೆಂಬರ್, ಡಿಸೆಂಬರ್ ಅಂತ್ಯದಲ್ಲಿ ಬೆಳೆ ಸಮೀಕ್ಷೆ ನಡೆಸುತ್ತಿದ್ದು ಶಾಶ್ವತ ಬೆಳೆಗಳಾದ ಅಡಿಕೆ ತೋಟ ನೋಂದಣಿಯಾಗಿದ್ದರೂ ಕೂಡಾ ಆರ್.ಟಿ.ಸಿ.ಯಲ್ಲಿ ಬೆಳೆ ಕಾಲಂನಲ್ಲಿ (ನೋ ಕ್ರಾಪ್ಸ್) ಖಾಲಿ ಯಾವ ಬೆಳೆ ಎಂದು ಬರುತ್ತಿಲ್ಲ ಎಂದು ರೈತರು ಪ್ರಶ್ನಿಸುವಂತಾಗಿದೆ.

ಕೋಟ್ಯಂತರ ರೂಪಾಯಿ ಹಣ ಖರ್ಚು ಮಾಡಿ ಸರ್ಕಾರ ರೈತರ ಜಮೀನಿನಲ್ಲಿನ ಬೆಳೆ ಸಮೀಕ್ಷೆ ನಡೆಸಲಾದರೂ ಆರ್.ಟಿ.ಸಿ.ಯಲ್ಲಿ ಬೆಳೆ ನಮೂದಾಗದಿರುವುದರ ಹಿಂದೆ ಏನು ಕಾರಣ ಇದೆ ಎಂಬ ಸಂಶಯ ರೈತರಲ್ಲಿ ಕಾಡುವ ಪ್ರಶ್ನಿಯಾಗಿದ್ದರೆ. ಕೆಲವು ರೈತರ ಹೆಸರುಗಳೇ ಬದಲಾಗಿ ಬರುತ್ತಿದ್ದು ಇದರಿಂದ ಇನ್ನೂ ರೈತರಲ್ಲಿ ದುಗುಡತೆ ಹೆಚ್ಚಾಗುವಂತಾಗಿದೆ.

ಇನ್ನಾದರೂ ಸರ್ಕಾರ ಹಾಗೂ ಜಿಲ್ಲಾಧಿಕಾರಿಗಳು ತಹಸೀಲ್ದಾರ್ ಇವರು ಗಮನಹರಿಸಿ ಗಣಕಯಂತ್ರದಲ್ಲಿನ ತಾಂತ್ರಿಕ ದೋಷವನ್ನು ಸರಿಪಡಿಸುವುದರೊಂದಿಗೆ ಆರ್.ಟಿ.ಸಿಯಲ್ಲಿ ಆಗುತ್ತಿರುವ ದೋಷವನ್ನು ಸರಿಪಡಿಸುವತ್ತಾ ಗಮನಹರಿಸುವರೇ ಕಾದುನೋಡಬೇಕಾಗಿದೆ ಎಂದು ರೈತ ಮುಖಂಡ ಬಿ.ಟಿ.ತೀರ್ಥಪ್ಪ ಮತ್ತು ಇನ್ನಿತರ ಗ್ರಾಮದ ರೈತರ ಆಶಯವಾಗಿದೆ.

Leave a Comment