ಹೊಸನಗರ: ನಮ್ಮ ಮನೆ ಸುತ್ತಲಿನ ಪರಿಸರವನ್ನು ನಿರಂತರವಾಗಿ ಪರಿಶುದ್ಧವಾಗಿಟ್ಟುಕೊಳ್ಳುವುದು ಅತ್ಯಗತ್ಯ. ಮನೆಯ ಮುಂಭಾಗದ ರಸ್ತೆಗಳನ್ನು ನಾವೇ ಸ್ವಚ್ಛಗೊಳಿಸಿಕೊಳ್ಳುವುದರಿಂದ ಸಾಂಕ್ರಾಮಿಕ ರೋಗಗಳು ಹರಡುವುದನ್ನು ತಡೆಯಬಹುದು ಎಂದು ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ಸುಮಾ ಸುರೇಶ್ ತಿಳಿಸಿದರು.
ಬಿಜೆಪಿಯ ‘ಸೇವಾ ಸಂಕಲ್ಪ ಅಭಿಯಾನ’ದ ಭಾಗವಾಗಿ ಮಹಿಳಾ ಮೋರ್ಚಾ ವತಿಯಿಂದ ಹೊಸನಗರದ ಶ್ರೀ ದುರ್ಗಾಂಬಾ ದೇವಾಲಯದ ಆವರಣದಲ್ಲಿ ಆಯೋಜಿಸಲಾಗಿದ್ದ ಸ್ವಚ್ಛತಾ ಕಾರ್ಯಕ್ರಮದಲ್ಲಿ ಭಾಗವಹಿಸಿ, ದೇವಸ್ಥಾನವನ್ನು ಶುಚಿಗೊಳಿಸಿದ ನಂತರ ಅವರು ಮಾತನಾಡಿದರು.
ಪೌರಕಾರ್ಮಿಕರ ಮೇಲಿನ ಕೆಲಸದ ಹೊರೆಯನ್ನು ತಗ್ಗಿಸಲು ಪ್ರತಿಯೊಬ್ಬರೂ ತಮ್ಮ ಮನೆಯ ತ್ಯಾಜ್ಯವನ್ನು ತಾವೇ ಸೂಕ್ತವಾಗಿ ನಿರ್ವಹಿಸಬೇಕು. ನಮ್ಮ ವಾಸಸ್ಥಳ ಸ್ವಚ್ಛವಾಗಿದ್ದರೆ ಇಡೀ ಊರೇ ಸುಂದರವಾಗಿರುತ್ತದೆ. ಅದೇ ರೀತಿ, ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ ನೀಡುವ ಪ್ರತಿಯೊಬ್ಬ ಭಕ್ತರೂ ಅಲ್ಲಿ ಕಸ ಚೆಲ್ಲದೆ, ಕಂಡ ಕಸವನ್ನು ತೆರವುಗೊಳಿಸುವ ಅಭ್ಯಾಸ ಬೆಳೆಸಿಕೊಂಡರೆ ದೇವಾಲಯದ ಆವರಣವು ಯಾವಾಗಲೂ ಸ್ವಚ್ಛ ಮತ್ತು ರಮಣೀಯವಾಗಿ ಕಂಗೊಳಿಸುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.
ಈ ಸ್ವಚ್ಛತಾ ಕಾರ್ಯಕ್ರಮದಲ್ಲಿ ಮಹಿಳಾ ಮೋರ್ಚಾದ ಪ್ರಮುಖರಾದ ಸುಗುಣ ಅಶೋಕ್, ಮಾಲಾ ನಾಗರಾಜ್, ಕಾರ್ಯಕ್ರಮದ ಉಸ್ತುವಾರಿ ವಹಿಸಿದ್ದ ರುಕ್ಮಿಣಿ ರಾಜು ಹಾಗೂ ಹೊಸನಗರ ಮಂಡಲ ಕಾರ್ಯದರ್ಶಿ ಚಿಕ್ಕನಕೊಪ್ಪ ಶ್ರೀಧರ್ ಭಾಗವಹಿಸಿದ್ದರು.
ಇವರೊಂದಿಗೆ ಶಕ್ತಿ ಕೇಂದ್ರದ ಅಧ್ಯಕ್ಷ ಸತ್ಯನಾರಾಯಣ, ಸಂಚಾಲಕಿ ಕಾವೇರಿ ವಿಜಯಕುಮಾರ್, ಜಿಲ್ಲಾ ಮುಖಂಡ ಎ. ವಿ. ಮಲ್ಲಿಕಾರ್ಜುನ, ಮಹಿಳಾ ಮೋರ್ಚಾ ಉಪಾಧ್ಯಕ್ಷೆ ಕೃಷ್ಣವೇಣಿ, ಸದಸ್ಯರಾದ ಕಮಲಮ್ಮ, ಗಾಯತ್ರಿ ನಾಗರಾಜ್, ಒಬಿಸಿ ಮೋರ್ಚಾ ಕಾರ್ಯದರ್ಶಿ ಸುಶೀಲಮ್ಮ, ಭಾರತಿ, ಶಕ್ತಿ ಕೇಂದ್ರದ ಅಧ್ಯಕ್ಷ ಸುಧೀರ್, ರಾಘವೇಂದ್ರ, ಹೊಸನಗರ ಟೌನ್ ಘಟಕದ ಅಧ್ಯಕ್ಷ ಶ್ರೀಪತಿರಾವ್, ಮಂಜುನಾಥ್ ಸಂಜೀವ ಸೇರಿದಂತೆ ಹಲವು ಕಾರ್ಯಕರ್ತರು ಹಾಗೂ ಸ್ಥಳೀಯರು ಉಪಸ್ಥಿತರಿದ್ದರು.

