ಹೊಸನಗರ: ಸಂಸ್ಥೆಗಳ ಸತತ ಪ್ರಗತಿ ಮತ್ತು ಭವಿಷ್ಯದ ಶ್ರೇಯಸ್ಸಿನಲ್ಲಿ ಷೇರುದಾರರ ಸಹಕಾರವೇ ಮೂಲಸ್ತಂಭ. ಸಾಲ ಪಡೆದ ಸದಸ್ಯರು ಸಮಯಕ್ಕೆ ಸರಿಯಾಗಿ ಕಂತುಗಳನ್ನು ಪಾವತಿಸಿದಾಗ ಮಾತ್ರ ಸಂಸ್ಥೆಗಳು ಸುಸ್ಥಿರವಾಗಿ ಬೆಳೆಯಲು ಸಾಧ್ಯ ಎಂದು ಹೊಸನಗರ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ (BEO) ಗಣೇಶ್ ವೈ. ಅಭಿಪ್ರಾಯಪಟ್ಟರು.
ಇಲ್ಲಿನ ಗಾಯತ್ರಿ ಮಂದಿರದಲ್ಲಿ ಆಯೋಜಿಸಲಾಗಿದ್ದ ಶಿಕ್ಷಕರ ಸಹಕಾರಿ ಸಂಘದ ವಾರ್ಷಿಕ ಸರ್ವಸದಸ್ಯರ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸಂಸ್ಥೆಯ ನಿಯಮಾವಳಿಗಳಿಗೆ ಬದ್ಧರಾಗಿ, ಶಿಸ್ತು ಮತ್ತು ಸಂಯಮದಿಂದ ವ್ಯವಹರಿಸುವುದು ಪ್ರತಿಯೊಬ್ಬ ಸದಸ್ಯರ ಕರ್ತವ್ಯ. ಅಂತಹ ತತ್ವಗಳನ್ನು ಪಾಲಿಸುವ ಸಂಸ್ಥೆಗಳು ದೀರ್ಘಕಾಲದವರೆಗೆ ಸದೃಢವಾಗಿ ಬೆಳೆದು ಸದಸ್ಯರ ಹಿತಕಾಯುತ್ತವೆ. ಪ್ರಸ್ತುತ ನಮ್ಮ ಶಿಕ್ಷಕರ ಸಂಘದಲ್ಲಿ ಸದಸ್ಯರು ನಿಯಮಿತವಾಗಿ ಸಾಲ ಮರುಪಾವತಿ ಮಾಡುತ್ತಿರುವುದರಿಂದ ಸಂಘವು ಆರ್ಥಿಕವಾಗಿ ಉತ್ತರೋತ್ತರ ಅಭಿವೃದ್ಧಿ ಹೊಂದುತ್ತಿದೆ ಎಂದರು.
₹6.29 ಲಕ್ಷಕ್ಕೂ ಅಧಿಕ ಲಾಭ:
ಸಂಘದ ವಾರ್ಷಿಕ ಆರ್ಥಿಕ ಸ್ಥಿತಿಗತಿಯ ಕುರಿತು ಮಾಹಿತಿ ನೀಡಿದ ಕಾರ್ಯದರ್ಶಿ ವೆಂಕಟೇಶ್ ಹೆಚ್., 2025-26ನೇ ಸಾಲಿನಲ್ಲಿ ಸಂಘವು ₹6,29,869 ಲಾಭಗಳಿಸಿದೆ. ಪ್ರಸ್ತುತ ವರ್ಷದಲ್ಲಿ ಷೇರು ಬಂಡವಾಳವು ₹63,900ರಷ್ಟು ಹೆಚ್ಚಳವಾಗಿದ್ದು, ಒಟ್ಟು ಬಂಡವಾಳವು ₹20,50,530 ತಲುಪಿದೆ. ಕರ್ನಾಟಕ ಸಹಕಾರಿ ಸಂಘಗಳ ಕಾಯ್ದೆ ಕಲಂ 122ರ ಪ್ರಕಾರ ಎಲ್ಲಾ 394 ಸದಸ್ಯರ ವಿವರಗಳನ್ನು ರಿಜಿಸ್ಟರ್ನಲ್ಲಿ ದಾಖಲಿಸಿ, ಷೇರು ಪ್ರಮಾಣಪತ್ರ ವಿತರಿಸಲಾಗಿದೆ ಎಂದು ವಿವರಿಸಿದರು.
₹10 ಲಕ್ಷದವರೆಗೆ ಸಾಲ ಮಿತಿ ಹೆಚ್ಚಳಕ್ಕೆ ಚಿಂತನೆ:
ಇಲ್ಲಿಯವರೆಗೆ ಸದಸ್ಯರಿಗೆ 30 ಕಂತುಗಳಲ್ಲಿ ಮರುಪಾವತಿಸುವಂತೆ ಗರಿಷ್ಠ ₹3 ಲಕ್ಷದವರೆಗೆ ಸಾಲ ನೀಡಲಾಗುತ್ತಿತ್ತು. ಮುಂದಿನ ದಿನಗಳಲ್ಲಿ ಈ ಮಿತಿಯನ್ನು ₹10 ಲಕ್ಷಕ್ಕೆ ಏರಿಸಿ, ಮರುಪಾವತಿಯನ್ನು 72 ಕಂತುಗಳಿಗೆ ವಿಸ್ತರಿಸುವ ಯೋಜನೆ ಇದೆ. ಇದರಿಂದ ಸದಸ್ಯರಿಗೆ ಕಂತು ಪಾವತಿ ಸುಲಭವಾಗಲಿದೆ. ಅಲ್ಲದೆ, ಸಂಘದ ಆಡಳಿತದಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳಲು ಹಾಗೂ ಲೆಕ್ಕಪತ್ರ ವಹಿವಾಟನ್ನು ಸರಳಗೊಳಿಸಲು ಶಿವಮೊಗ್ಗದ ‘ಸಿಲಿಕಾನ್ ಸಾಫ್ಟ್ವೇರ್’ ಸಂಸ್ಥೆಯ ನೂತನ ತಂತ್ರಾಂಶವನ್ನು ಅಳವಡಿಸಿಕೊಳ್ಳಲಾಗಿದೆ. ಮುಂದಿನ ದಿನಗಳಲ್ಲಿ ಚುನಾಯಿತ ಪ್ರತಿನಿಧಿಗಳ ಪೈಕಿ ಒಬ್ಬರನ್ನು ಸಂಘದ ಅಧ್ಯಕ್ಷರನ್ನಾಗಿ ಆಯ್ಕೆ ಮಾಡುವ ಪ್ರಸ್ತಾವನೆಯನ್ನೂ ಸಲ್ಲಿಸಲಾಗಿದೆ ಎಂದು ತಿಳಿಸಿದರು.

ಸಭೆಯಲ್ಲಿ ನೌಕರರ ಸಂಘದ ಅಧ್ಯಕ್ಷ ಸೋಮಶೇಖರ ಬಿ.ಪಿ., ಪ್ರಮುಖರಾದ ಎಂ. ರಂಗನಾಥ್, ಶೇಷಾಚಲ ಜಿ. ನಾಯ್ಕ್, ವೆಂಕಟಾಚಲಪತಿ, ಚಂದ್ರಕಾಂತ್, ಪುಟ್ಟಸ್ವಾಮಿ, ಪೃಥ್ವಿರಾಜ್, ಶಿವಪ್ಪ, ಸಂಘದ ನಿರ್ದೇಶಕರಾದ ಅಕ್ಬರ್ ಬಾಷಾ, ದೇವೇಂದ್ರಪ್ಪ ಎಂ., ಮಹಂತೇಶ್ ಟಿ.ಎಸ್., ರವಿ ಮಾವಿನಸರ, ರವಿ ಕೆ., ಜಯಪ್ಪ ಬಿ., ಫಕೀರಪ್ಪ, ಕೃಷ್ಣಪ್ಪ ಅರ್ಕಾಚಾರಿ, ತಾಜುನ್, ಮೇಘರಾಜ್, ಸುಜಾತ, ಉಮೇಶ್, ಪ್ರವೀಣ್, ಸುರೇಶ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

