ಶಿವಮೊಗ್ಗ: ಮಲೆನಾಡು ಭಾಗದ ಅಡಿಕೆ ತೋಟಗಳಲ್ಲಿ ಎಲೆಚುಕ್ಕಿ ಮತ್ತು ಕೊಳೆ ರೋಗಗಳು ವ್ಯಾಪಕವಾಗಿ ಹರಡುತ್ತಿದ್ದು, ರೈತರ ಆರ್ಥಿಕ ಸ್ಥಿತಿಗೆ ದೊಡ್ಡ ಹೊಡೆತ ನೀಡುತ್ತಿದೆ ಎಂದು ಸಾಗರ ಕ್ಷೇತ್ರದ ಶಾಸಕ ಗೋಪಾಲಕೃಷ್ಣ ಬೇಳೂರು ಕಳವಳ ವ್ಯಕ್ತಪಡಿಸಿದ್ದಾರೆ.
ಕೃಷಿ ವಿಜ್ಞಾನಿಗಳತ್ತ ಕಣ್ಣು
ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯದಲ್ಲಿ ನಡೆದ 13ನೇ ಸಂಸ್ಥಾಪನಾ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು. “ಎತ್ತರಕ್ಕೆ ಬೆಳೆಯಬೇಕಾದ ಅಡಿಕೆ ಮರಗಳು ರೋಗದಿಂದ ನೆಲಕಚ್ಚುತ್ತಿವೆ. ರೈತರ ಬದುಕು ಹಾಳಾಗುತ್ತಿದೆ. ಕೃಷಿ ವಿಜ್ಞಾನಿಗಳು ಸ್ಥಳೀಯ ಹಾಗೂ ಅಂತರಾಷ್ಟ್ರೀಯ ವಿಜ್ಞಾನಿಗಳೊಂದಿಗೆ ಸಮಾಲೋಚನೆ ನಡೆಸಿ, ನವೀನ ತಂತ್ರಜ್ಞಾನ ಬಳಸಿ ಪರಿಣಾಮಕಾರಿ ಔಷಧಿ ಕಂಡುಹಿಡಿಯಬೇಕು” ಎಂದು ಅವರು ಒತ್ತಾಯಿಸಿದರು.
ರೈತರ ಪ್ರಗತಿಗೆ ಮಹತ್ವ
“ರೈತರು ಪ್ರಗತಿಯಾದಾಗ ಮಾತ್ರ ದೇಶ ಪ್ರಗತಿಯಾಗುತ್ತದೆ. ಆದರೆ ಇತ್ತೀಚಿಗೆ ಕೃಷಿ ವಲಯ ನಷ್ಟವನ್ನು ಅನುಭವಿಸುತ್ತಿದೆ. ಉತ್ಪಾದನೆ ಕುಸಿದಿದೆ. ರೈತರು ಹೊಸ ತಂತ್ರಜ್ಞಾನವನ್ನು ಅಳವಡಿಸಿಕೊಂಡರೆ ಮಾತ್ರ ಆರ್ಥಿಕವಾಗಿ ಬಲಿಷ್ಠರಾಗುತ್ತಾರೆ” ಎಂದು ಹೇಳಿದರು.
ಲೇಖನವನ್ನು ಮುಂದುವರಿಸಿ ಓದಿ
ಇಲಾಖೆಗಳ ಜವಾಬ್ದಾರಿ
ಕೃಷಿ ಮತ್ತು ತೋಟಗಾರಿಕೆ ಇಲಾಖೆಗಳು ವಿಶ್ವವಿದ್ಯಾಲಯದ ಮೂಲಕ ಅನೇಕ ಯೋಜನೆಗಳನ್ನು ರೈತರಿಗೆ ತಲುಪಿಸುತ್ತಿವೆ. “ರೈತರು ಈ ಯೋಜನೆಗಳ ಸದುಪಯೋಗ ಪಡೆದು, ನಷ್ಟ ತಪ್ಪಿಸಿಕೊಂಡು ಉತ್ಪಾದನೆ ಹೆಚ್ಚಿಸಬೇಕು. ಇದರಿಂದ ಅವರ ಬದುಕು ಸಮೃದ್ಧವಾಗುತ್ತದೆ. ವಿಶ್ವವಿದ್ಯಾಲಯಗಳು ರೈತರ ಜೊತೆ ನೇರ ಸಂಪರ್ಕ ಬೆಳೆಸಬೇಕು” ಎಂದು ಬೇಳೂರು ಸಲಹೆ ನೀಡಿದರು.
ಸಂಸ್ಥಾಪನಾ ದಿನದ ಉಪನ್ಯಾಸ
ಸಹ್ಯಾದ್ರಿ ವಿಜ್ಞಾನ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಡಾ.ಟಿ.ಎಸ್. ಹೂವಯ್ಯ ಗೌಡ ಸಂಸ್ಥಾಪನಾ ದಿನದ ಉಪನ್ಯಾಸ ನೀಡಿದರು. “ಒಂದು ಸಂಸ್ಥೆಯ ಹುಟ್ಟು, ಬೆಳವಣಿಗೆ, ಸಮಾಜಕ್ಕೆ ನೀಡಿದ ಕೊಡುಗೆಗಳನ್ನು ನೆನಪಿಸಿಕೊಳ್ಳುವ ದಿನವೇ ಸಂಸ್ಥಾಪನಾ ದಿನ. ಕೆಳದಿ ಶಿವಪ್ಪನಾಯಕ ಕೃಷಿ ವಿಶ್ವವಿದ್ಯಾಲಯವು ಈಗಾಗಲೇ ಹಲವು ಸಾಧನೆಗಳನ್ನು ಮಾಡಿ ಜನಮನ ಗೆದ್ದಿದೆ” ಎಂದರು.
ಅವರು ಶಿವಪ್ಪನಾಯಕರ ಆಡಳಿತದ ವೈಜ್ಞಾನಿಕ ತೆರಿಗೆ ನೀತಿಯನ್ನು ಉದಾಹರಿಸಿ, “ಶಿಸ್ತಿಗೆ ಮತ್ತೊಂದು ಹೆಸರು ಶಿವಪ್ಪನಾಯಕ. ಅವರ ಕಾಲದಲ್ಲಿ ವಿಧಿಸಿದ ಕಂದಾಯ ನೀತಿ ವೈಜ್ಞಾನಿಕತೆಯಿಂದ ಕೂಡಿತ್ತು. ಇಂದಿಗೂ ಮಾದರಿಯಾಗಿದೆ” ಎಂದು ಪ್ರಶಂಸಿಸಿದರು.
ಕೃಷಿ ವಿಜ್ಞಾನಕ್ಕೆ ಪ್ರೋತ್ಸಾಹ
“ರಾಜ್ಯದಲ್ಲಿ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನ ವಿಶ್ವವಿದ್ಯಾಲಯಗಳನ್ನು ಸ್ಥಾಪಿಸುವ ಮೂಲಕ ಸರ್ಕಾರ ಶಿಕ್ಷಣ ಕ್ಷೇತ್ರಕ್ಕೆ ದೊಡ್ಡ ಕೊಡುಗೆ ನೀಡಿದೆ. ವಿದ್ಯಾರ್ಥಿಗಳು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬೇಕು. ಹಿಂದಿನ ದಿನಗಳಲ್ಲಿ ಎಂ.ಎಸ್. ಸ್ವಾಮಿನಾಥನ್, ವರ್ಗೀಸ್ ಕುರಿಯನ್ ಹಸಿರು ಕ್ರಾಂತಿ ಮತ್ತು ಶ್ವೇತ ಕ್ರಾಂತಿಯ ಮೂಲಕ ಕೃಷಿಗೆ ಹೊಸ ಉಸಿರು ತುಂಬಿದರು. ಇಂದಿನ ಯುವ ವಿಜ್ಞಾನಿಗಳೂ ಹೊಸ ಯೋಜನೆಗಳ ಮೂಲಕ ರೈತರಿಗೆ ನೆರವಾಗಬೇಕು” ಎಂದು ಹೂವಯ್ಯ ಗೌಡ ಸಲಹೆ ನೀಡಿದರು.
ಪ್ರಶಸ್ತಿ ಪ್ರದಾನ
ಕಾರ್ಯಕ್ರಮದಲ್ಲಿ ವಿಶ್ವವಿದ್ಯಾಲಯದ ಅತ್ಯುತ್ತಮ ಶಿಕ್ಷಕ, ಸಂಶೋಧಕ, ವಿಸ್ತರಣಾ ವಿಜ್ಞಾನಿ ಹಾಗೂ ಬಾಹ್ಯ ಅನುದಾನಿ ಯೋಜನೆ ವಿಜ್ಞಾನಿಗಳಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಗಣ್ಯರ ಉಪಸ್ಥಿತಿ
ಕಾರ್ಯಕ್ರಮದಲ್ಲಿ ಕುಲಪತಿ ಡಾ. ಆರ್.ಸಿ. ಜಗದೀಶ್, ಕುಲಸಚಿವ ಡಾ.ಜಿ.ಕೆ. ಗಿರಿಜೇಶ್, ಪ್ರಗತಿಪರ ರೈತರು, ಕೃಷಿ ಉದ್ಯಮಿಗಳು ಹಾಗೂ ವಿಶ್ವವಿದ್ಯಾಲಯದ ಸಿಬ್ಬಂದಿ ಹಾಜರಿದ್ದರು.

