ಕೋಡೂರು ; ಪಿಕಪ್ ಚಾನಲ್ ದಂಡೆ ದುರಸ್ತಿಗೆ ಆಗ್ರಹಿಸಿ ರೈತರಿಂದ ಪ್ರತಿಭಟನೆ

Written by Mahesha Hindlemane

Published on:

ರಿಪ್ಪನ್‌ಪೇಟೆ : ಕೋಡೂರು ಗ್ರಾಪಂ ವ್ಯಾಪ್ತಿಯ ಬುಲ್ಡೋಜರ್ ಗುಡ್ಡದ ಪಿಕಪ್ ಚಾನಲ್ ದಂಡೆ ಒಡೆದು ನೀರು ಜಮೀನಿಗೆ ನುಗ್ಗಿ ಸಾಕಷ್ಟು ನಷ್ಟವಾಗುತ್ತಿದೆ ಎಂದು ಆರೋಪಿಸಿ ಕುಸುಗುಂಡಿ, ಬುಲ್ಡೋಜರ್ ಗುಡ್ಡದ ಗ್ರಾಮಸ್ಥರು ಪ್ರತಿಭಟನೆ ನಡೆಸುವ ಮೂಲಕ ತುರ್ತು ದುರಸ್ಥಿ ಮಾಡುವಂತೆ ಒತ್ತಾಯಿಸಿದರು.

WhatsApp Group Join Now
Telegram Group Join Now
Instagram Group Join Now

ಇಂದು ಗ್ರಾಮ ಪಂಚಾಯ್ತಿ ಕಛೇರಿಗೆ ಕೃಷಿ ಸಲಕರಣೆಗಳೊಂದಿಗೆ ದಿಢೀರ್‌ ತೆರಳಿ ತಮ್ಮ ಗ್ರಾಮದಲ್ಲಿ ಭಾರಿ ಮಳೆಯಿಂದಾಗಿ ಬುಲ್ಡೋಜರ್‌ಗುಡ್ಡ ಮತ್ತು ಕಾರಕ್ಕಿ ಹಾಗೂ ಕುಸುಗುಂಡಿ ವ್ಯಾಪ್ತಿಯ ಸುಮಾರು 300 ಎಕರೆ ಜಮೀನಿಗೆ ನೀರು ಹರಿಸುವ ಈ ಚಾನಲ್‌ ಪ್ರತಿ ವರ್ಷ ಅತಿಯಾದ ಮಳೆಯಿಂದಾಗಿ ಒಡೆದು ಹೋಗುತ್ತಿದ್ದು ನಮ್ಮ ಜಮೀನುಗಳಿಗೆ ನೀರನ್ನು ಹರಿಸಲು ಸಾಧ್ಯವಾಗುತ್ತಿಲ್ಲ. ಈ ಬಗ್ಗೆ ತಕ್ಷಣ ಚಾನಲ್ ದಂಡೆ ದುರಸ್ಥಿ ಮಾಡುವಂತೆ ಒತ್ತಾಯಿಸಿದರು.

ಸಣ್ಣ ನೀರಾವರಿ ಇಲಾಖೆ ನಿರ್ಮಿಸಿರುವ 300 ಎಕರೆ ಜಮೀನಿಗೆ ನೀರು ಒದಗಿಸುವ ಪಿಕಪ್ ಚಾನಲ್ ದಂಡೆ ಕಳೆದ ವರ್ಷ ಸುರಿದ ಭಾರಿ ಮಳೆಗೆ ಒಡೆದು ನೂರಾರು ಎಕರೆ ಜಮೀನು ಜಲಾವೃತಗೊಂಡು ಭಾರಿ ನಷ್ಟ ಸಂಭವಿಸಿತ್ತು. ನಂತರ ನಮ್ಮ ಜಮೀನುಗಳಿಗೆ ನೀರನ್ನು ಹರಿಸಲು ಸಾಧ್ಯವಾಗುತ್ತಿರಲಿಲ್ಲ. ಈ ಬಗ್ಗೆ ನಾವು ಹಲವಾರು ಬಾರಿ ಸಂಬಂಧಪಟ್ಟ ನೀರಾವರಿ ಇಲಾಖೆಗೆ ದೂರು ಅರ್ಜಿ ಸಲ್ಲಿಸಿದ್ದರು ಇದುವರೆಗು ಸಹ ಚಾನಲ್ ದಂಡೆ ದುರಸ್ತಿ ಕಾರ್ಯ ಮಾಡದಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.

ಚಾನಲ್ ದಂಡೆ ತುರ್ತಾಗಿ ದುರಸ್ತಿ ಮಾಡುವಂತೆ ಗ್ರಾಪಂ ಮುಂಭಾಗ ಗುದ್ದಲಿ, ಬುಟ್ಟಿ ಸಮೇತವಾಗಿ ಆಗಮಿಸಿ ಪ್ರತಿಭಟನೆ ನಡೆಸಿ ಗ್ರಾಮ ಪಂಚಾಯ್ತಿ ಅಧ್ಯಕ್ಷರ ಮೂಲಕ ಸಂಬಂಧಿಸಿದ ಇಲಾಖೆಗೆ ಮನವಿ ಪತ್ರ ಸಲ್ಲಿಸಿದರು.

ಈ ಬಗ್ಗೆ ಮಾತನಾಡಿದ ಗ್ರಾ.ಪಂ ಅಧ್ಯಕ್ಷ ಜಯಪ್ರಕಾಶ್, ಪ್ರತಿ ವರ್ಷವು ಕೂಡ ನೀರಾವರಿ ಚಾನಲ್ ದಂಡೆಯನ್ನು ತಾತ್ಕಾಲಿಕವಾಗಿ ದುರಸ್ತಿಯನ್ನು ಮಾಡಿಕೊಡುತ್ತಿದ್ದು ಆದರೆ ಸಣ್ಣ ನೀರಾವರಿ ಇಲಾಖೆಯವರು ಅನೇಕ ಬಾರಿ ಸ್ಥಳ ಭೇಟಿ ಮಾಡಿ ದುರಸ್ತಿ ಕಾರ್ಯದ ಬಗ್ಗೆ ಕ್ರಿಯಾ ಯೋಜನೆ ಅಂದಾಜು ಪಟ್ಟಿ ತಯಾರಿಸಿ ಕಾಮಗಾರಿ ಮಾಡುವುದಾಗಿ ಭರವಸೆ ನೀಡಿದ್ದರು. ಆದರೂ ಕೂಡ ಇದುವರೆಗೆ ಕಾಮಗಾರಿ ಪ್ರಾರಂಭಿಸಿಲ್ಲ. ಆದ್ದರಿಂದ ಸಂಬಂಧಪಟ್ಟ ಸಣ್ಣ ನೀರಾವರಿ ಇಲಾಖೆಯವರು ತುರ್ತಾಗಿ ಚಾನಲ್ ದಂಡೆಯನ್ನು ದುರಸ್ತಿ ಮಾಡುವಂತೆ ಇಲಾಖೆಯ ಸಹಾಯಕ ಇಂಜಿನಿಯರ್ ರವರಿಗೆ ಮನವಿ ಪತ್ರ ಕಳುಹಿಸಲಾಗುವುದು ಎಂದರು.

ಈ ಸಂದರ್ಭದಲ್ಲಿ ಗ್ರಾಪಂ ಉಪಾಧ್ಯಕ್ಷ ಸುಧಾಕರ್, ಸದಸ್ಯರುಗಳು, ಪಿಡಿಒ ನಾಗರಾಜ್, ಗ್ರಾಮಸ್ಥರಾದ ರಂಗನಾಥ, ಸುಬ್ರಹ್ಮಣ್ಯ, ಹೆಚ್.ಕೆ.ಕೃಷ್ಣಮೂರ್ತಿ, ಈರಪ್ಪ, ನಾಗಪ್ಪ, ಮಹಾಬಲ, ಜನಾರ್ಧನ, ಸತ್ಯಪ್ಪ, ಮಂಜುನಾಥ ಮತ್ತಿತರರು ಇದ್ದರು‌.

Leave a Comment