ತೀರ್ಥಹಳ್ಳಿ : ನಾಲೂರು ಸಮೀಪ ತಡರಾತ್ರಿ ನಡೆದ ಭೀಕರ ಅಪಘಾತದಲ್ಲಿ ಮಹಿಳೆಯೊಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ನಡೆದಿದೆ.
ತೀರ್ಥಹಳ್ಳಿಯ ಆಗುಂಬೆ ಬಸ್ ನಿಲ್ದಾಣದ ಸಮೀಪ ಇರುವ ಶಬರಿ ಹೋಟೆಲ್ ಮಾಲೀಕರಾದ ಸುದರ್ಶನ್ ಅವರು ಕುಟುಂಬ ಸಮೇತ ಉಡುಪಿ ಜಿಲ್ಲೆಯ ಹೆಬ್ರಿ ಸಮೀಪ ಸಂಬಂಧಿಕರ ಮನೆ ಗೃಹಪ್ರವೇಶ ಕಾರ್ಯಕ್ರಮಕ್ಕೆ ಆಟೋದಲ್ಲಿ ತೆರಳಿದ್ದರು. ಕಾರ್ಯಕ್ರಮ ಮುಗಿಸಿಕೊಂಡು ವಾಪಸ್ ಆಗುವ ವೇಳೆ, ನಾಲೂರು ಸಮೀಪದ ತಿರುವಿನಲ್ಲಿ ಆಟೋ ಚಾಲಕನ ಅಜಾಗರೂಕ ಚಾಲನೆಯಿಂದ ಕಬ್ಬಿಣದ ಡಿವೈಡರ್ (ತಡೆಗೋಡೆ)ಗೆ ವಾಹನ ಡಿಕ್ಕಿ ಹೊಡೆದಿದೆ.
ಈ ಅಪಘಾತದಲ್ಲಿ ಆಟೋದ ಬಲಭಾಗದಲ್ಲಿ ಕುಳಿತಿದ್ದ ನಿಶ್ಮಿತಾ ಶೆಟ್ಟಿ (27) ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಅಪಘಾತದಲ್ಲಿ ಸುದರ್ಶನ್ (35) ಹಾಗೂ ಅವರ ಪುತ್ರ ಸಂಚಿತ್ (7) ಅವರಿಗೆ ಗಾಯಗಳಾಗಿದ್ದು, ಚಿಕಿತ್ಸೆಗಾಗಿ ಅವರನ್ನು ಜೆಸಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇಬ್ಬರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ತಿಳಿದುಬಂದಿದೆ.
ಈ ಸಂಬಂಧ ಕುರುವಳ್ಳಿ ಗ್ರಾಮದ ಯಲ್ಲಪ್ಪ ಎಂಬ ಆಟೋ ಚಾಲಕನ ವಿರುದ್ಧ ಆಗುಂಬೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಘಟನೆಯ ಕುರಿತು ತನಿಖೆ ಮುಂದುವರಿಸಿದ್ದಾರೆ.

