ಹೊಸನಗರ : ಭಾರತೀಯ ಸನಾತನ ಧರ್ಮ ಪರಂಪರೆಯ ಜನಸಮುದಾಯವನ್ನು ಧಾರ್ಮಿಕ ಪ್ರಜ್ಞೆ ಬೆಳೆಸುವಂತೆ ಪ್ರೇರೇಪಿಸುತ್ತದೆ. ಜೈನ ಧರ್ಮ ಶಾಸ್ತ್ರದನ್ವಯ ಪರ್ವದಿನಗಳಲ್ಲಿ ಶ್ರದ್ಧಾ ಭಕ್ತಿಯಿಂದ ದೇವರ ಪೂಜೆ ಸಮರ್ಪಿಸಿದಾಗ ಇಷ್ಟಾರ್ಥ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆ ಅಚಲವಾದುದು” ಎಂದು ಅತಿಶಯ ಶ್ರೀಕ್ಷೇತ್ರ ಹೊಂಬುಜ ಶ್ರೀಜೈನ ಮಠದ ಪೀಠಾಧೀಶ ಪರಮಪೂಜ್ಯ ಜಗದ್ಗುರು ಸ್ವಸ್ತಿಶ್ರೀ ಡಾ. ದೇವೇಂದ್ರಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮಿಗಳು ಅನುಗ್ರಹ ಪ್ರವಚನದಲ್ಲಿ ತಿಳಿಸಿದರು.

ಅತಿಶಯ ಶ್ರೀಕ್ಷೇತ್ರ ಹೊಂಬುಜ ಶ್ರೀ 1008 ಪಾರ್ಶ್ವನಾಥ ಸ್ವಾಮಿ ಮತ್ತು ಮಹಾಮಾತೆ ಯಕ್ಷಿ ಶ್ರೀ ಪದ್ಮಾವತಿ ದೇವಿ ಸನ್ನಿಧಿಯಲ್ಲಿ ಶ್ರಾವಣ ಮಾಸದ ಪ್ರಥಮ ಸಂಪತ್ ಶುಕ್ರವಾರದ ವಿಶೇಷ ಪೂಜೆಯಲ್ಲಿ ಪಾಲ್ಗೊಂಡು ಊರ ಪರವೂರ ಭಕ್ತರನ್ನುದ್ದೇಶಿಸಿ “ತ್ರಿಕರಣಪೂರ್ವಕ ದೇವರ ಪೂಜೆ ಸಲ್ಲಿಸುವುದರಿಂದ ಮಾನಸಿಕ ನೆಮ್ಮದಿ ದೊರೆತು, ಜೀವನದಲ್ಲಿ ಯಶಸ್ಸು ಲಭಿಸುತ್ತದೆ” ಎಂದು ಶ್ರೀಗಳು ಆಶೀರ್ವದಿಸಿದರು.

ಶ್ರೀ ನೇಮಿನಾಥ ಸ್ವಾಮಿ, ಶ್ರೀ ಮಹಾವೀರ ಸ್ವಾಮಿ, ಶ್ರೀ ಆದಿನಾಥ ಸ್ವಾಮಿ, ಶ್ರೀ ಕೂಷ್ಮಾಂಡಿನಿ ದೇವಿ, ಶ್ರೀ ಸರಸ್ವತಿ ದೇವಿ, ಶ್ರೀ ಕ್ಷೇತ್ರಪಾಲ, ಶ್ರೀ ನಾಗಸನ್ನಿಧಿಯಲ್ಲಿ ಆಗಮೋಕ್ತ ವಿಧಾನಗಳು ನೆರವೇರಿದವು. ಪೂರ್ವಪರಂಪರೆಯಂತೆ ಭಕ್ತರು ಉಡಿ-ಸೀರೆ ಸಮರ್ಪಿಸಿ ಧನ್ಯರಾದರು.

ಉಪಹಾರ ಹಾಗೂ ಭೋಜನ ದಾನಿಗಳಾದ ಮುಂಬೈನ ಮುಖೇಶ್ ಅಮೃತ್ಲಾಲ್ ಶಹಾ ಸಂಗೀತ ಮುಖೇಶ ಶಹಾ ಕುಟುಂಬದವರು ತಮ್ಮ ಸೇವೆಯನ್ನು ಅರ್ಪಿಸಿದರು. ಶರ್ಕರ ವ್ಯಂಜನಗಳನ್ನು ಭಕ್ತರು ಸಮರ್ಪಿಸಿದರು.

