ಹೊಸನಗರ ; ತಾಲ್ಲೂಕಿನ ಎಂ.ಗುಡ್ಡೆಕೊಪ್ಪ ಗ್ರಾಮ ಪಂಚಾಯತಿ ವ್ಯಾಪ್ತಿಯ ಅರಳಿಕೊಪ್ಪ ಗ್ರಾಮದಲ್ಲಿ ಹೊಸನಗರ ಅರಣ್ಯ ಇಲಾಖೆಯ ಸಿಬ್ಬಂದಿಗಳು ಅರಣ್ಯ ಒತ್ತುವರಿ ಜಾಗ ತೆರವು ಕಾರ್ಯಾಚರಣೆ ನಡೆಸಿದ್ದು ಕಾರ್ಯಾಚರಣೆಯಲ್ಲಿ ಮನೆ ಧ್ವಂಸ ಮಾಡುವುದರ ಜೊತೆಗೆ ಮನೆಯಲ್ಲಿದ್ದ ಸಾಮಾಗ್ರಿಗಳನ್ನು ರಸ್ತೆಗೆ ಎಸೆದಿದ್ದಾರೆ ಎಂದು ಅರಣ್ಯ ಇಲಾಖೆಯವರ ಮೇಲೆ ಮನೆಯ ಮಾಲೀಕ ಭೋಜಪ್ಪ ಎಂಬುವರು ಹೊಸನಗರದ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ.
ದೂರಿನಲ್ಲಿ, ನಾವು ಸುಮಾರು 20 ವರ್ಷಗಳಿಂದ ಈ ಜಾಗದಲ್ಲಿ ವಾಸವಾಗಿದ್ದೇವೆ. ಅರಣ್ಯ ಇಲಾಖೆಯವರು ಯಾವುದೇ ನೋಟಿಸ್ ನೀಡದೆ ಜು. 30ರ ಬುಧವಾರ ಸುಮಾರು 12ಗಂಟೆಗೆ ಮನೆಯನ್ನು ಬೀಳಿಸಿ ಅದು ಅಲ್ಲದೇ ಮನೆಯೊಳಗೆ ನುಗ್ಗಿ ನಮ್ಮ ತಾಯಿಯಾದ ಪಾರ್ವತಮ್ಮ ಒಬ್ಬರೇ ಮನೆಯಲ್ಲಿದ್ದ ಸಂದಂರ್ಭದಲ್ಲಿ ಅರಣ್ಯ ಜಾಗವನ್ನು ಅಕ್ರಮ ಮಾಡಿದ್ದೀರಿ ಎಂದೂ ಮನೆಯನ್ನು ಹಾಳು ಮಾಡುವುದರ ಜೊತೆಗೆ ಮನೆಯಲ್ಲಿದ್ದ ದವಸ ಧಾನ್ಯ, ಸಾಮಾಗ್ರಿಗಳನ್ನು ರಸ್ತೆಗೆ ಎಸೆದಿದ್ದಾರೆ. ಇದರ ಜೊತೆಗೆ ಶುಂಠಿ ಬೆಳೆಗೆ ಸಿಂಪಡಿಸಲು ತಂದಿದ್ದ ಔಷಧಗಳನ್ನು ನಾಶ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
ನಮ್ಮ ತಾಯಿಯಾದ ಪಾರ್ವತಿಯವರ ಮೈ ಮೇಲೆ ಕೈ ಹಾಕಿ ಎಳೆದು ರಸ್ತೆಗೆ ಎಸೆದಿದ್ದಾರೆ. ಮನೆಯಲ್ಲಿದ್ದ ವಸ್ತು, ಪಾತ್ರೆ-ಪಗಡುಗಳನ್ನು ರಸ್ತೆಗೆ ಎಸೆದು ಅವಮಾನಿಸಿದ್ದಾರೆ. ಸುಮಾರು ಅಂದಾಜು 5 ಲಕ್ಷ ರೂ. ನಷ್ಟು ನಷ್ಟ ಮಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದು, ಇದರ ಹಿಂದೆ ರಾಜಕೀಯ ನಾಯಕರ ಕೈವಾಡ ಇರುವುದಾಗಿ ಸ್ಪಷ್ಟಪಡಿಸಿದ್ದು ನಮಗೆ ನ್ಯಾಯ ಕೊಡಿಸದೇ ಹೋದಲ್ಲಿ ಮುಂದಿನ ದಿನದಲ್ಲಿ ತಾಲ್ಲೂಕಿನದ್ಯಾಂತ ಹೋರಾಟ ಅನಿವಾರ್ಯವಾಗಲಿದೆ. ನಮಗೆ ರಕ್ಷಣಾ ಇಲಾಖೆ ನ್ಯಾಯ ಕೊಡಿಸಲಿ ಎಂದು ಮನೆಯ ಮಾಲೀಕ ಭೋಜಪ್ಪ ಹೊಸನಗರ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

