ಸಾಗರ: ಶರಾವತಿ ಹಿನ್ನೀರಿನ ಹಲ್ಕೆ–ಮುಪ್ಪಾನೆ ಮಾರ್ಗದಲ್ಲಿ ಕಳೆದ 22 ದಿನಗಳಿಂದ ಸ್ಥಗಿತಗೊಂಡಿದ್ದ ಲಾಂಚ್ ಸೇವೆ ಶನಿವಾರದಿಂದ ಮತ್ತೆ ಕಾರ್ಯಾರಂಭಿಸಿದೆ. ಸೇವೆ ಪುನರಾರಂಭದ ಹಿನ್ನೆಲೆಯಲ್ಲಿ ಮಾಜಿ ಸಚಿವ ಹರತಾಳು ಹಾಲಪ್ಪ ಲಾಂಚ್ನಲ್ಲಿ ಸ್ಥಳೀಯ ಮುಖಂಡರು ಹಾಗೂ ಪ್ರಯಾಣಿಕರೊಂದಿಗೆ ಸಂಚರಿಸಿದರು.
ಕರೂರು ಮತ್ತು ಭಾರಂಗಿ ಹೋಬಳಿಗಳನ್ನು ಸಂಪರ್ಕಿಸುವ ಈ ಜಲಮಾರ್ಗದಲ್ಲಿ ಸಂಚರಿಸುತ್ತಿದ್ದ ಲಾಂಚ್ ತಾಂತ್ರಿಕ ದೋಷದಿಂದ ದುರಸ್ತಿಗೆ ಒಳಗಾಗಿತ್ತು. ದುರಸ್ತಿ ಪೂರ್ಣಗೊಳ್ಳಲು ಸಮಯ ಬೇಕಾಗಿರುವ ಹಿನ್ನೆಲೆಯಲ್ಲಿ ತಾತ್ಕಾಲಿಕವಾಗಿ ಹೊಸ ಬದಲಿ ಲಾಂಚ್ ವ್ಯವಸ್ಥೆ ಮಾಡಲಾಗಿದೆ ಎಂದು ಹರತಾಳು ಹಾಲಪ್ಪ ತಿಳಿಸಿದ್ದಾರೆ.
“ಸುಮಾರು ಒಂಬತ್ತು ವರ್ಷಗಳ ಹಿಂದೆ ನಾನು ಶಾಸಕನಾಗಿದ್ದ ಸಂದರ್ಭದಲ್ಲಿ ಈ ಲಾಂಚ್ ಸೇವೆ ಆರಂಭವಾಗಿತ್ತು. ಇತ್ತೀಚೆಗೆ ತಾಂತ್ರಿಕ ಸಮಸ್ಯೆಯಿಂದ 22 ದಿನಗಳ ಕಾಲ ಸೇವೆ ಸ್ಥಗಿತಗೊಂಡಿತ್ತು. ಕಾರವಾರ ಬಂದರು ಅಧಿಕಾರಿಗಳೊಂದಿಗೆ ಚರ್ಚಿಸಿ ಬದಲಿ ಲಾಂಚ್ ವ್ಯವಸ್ಥೆ ಮಾಡಲಾಗಿದೆ. ಶನಿವಾರ ಸ್ಥಳೀಯ ಮುಖಂಡರು ಮತ್ತು ಪ್ರಯಾಣಿಕರೊಂದಿಗೆ ಲಾಂಚ್ನಲ್ಲಿ ಸಂಚರಿಸಿದ್ದೇವೆ,” ಎಂದು ಅವರು ಹೇಳಿದರು.
ತಾಂತ್ರಿಕ ದೋಷದಿಂದ ಸೇವೆ ಸ್ಥಗಿತ
ಆಗಸ್ಟ್ 29ರಿಂದ ದುರಸ್ತಿ ಹಿನ್ನೆಲೆಯಲ್ಲಿ ಲಾಂಚ್ ಸಂಚಾರ ಸ್ಥಗಿತಗೊಂಡಿತ್ತು. ಈ ಮಾರ್ಗದಲ್ಲಿ ಸಿಗಂದೂರು ಮಾದರಿಯ ಪ್ಲಾಟ್ಫಾರ್ಮ್ ವ್ಯವಸ್ಥೆ ಇಲ್ಲದ ಕಾರಣ, ಲಾಂಚ್ ಅನ್ನು ಮಣ್ಣಿನ ದಂಡೆಯಲ್ಲೇ ನಿಲ್ಲಿಸುವ ಪರಿಸ್ಥಿತಿ ಇದೆ. ಈ ವೇಳೆ ನೀರಿನಲ್ಲಿರುವ ಮರದ ದಿಮ್ಮಿಗಳು ಲಾಂಚ್ನ ತಳಭಾಗಕ್ಕೆ ಬಡಿದು ಎಂಜಿನ್ಗೆ ತಾಂತ್ರಿಕ ತೊಂದರೆ ಉಂಟಾಗಿತ್ತು ಎನ್ನಲಾಗಿದೆ.
ದುರಸ್ತಿ ಕಾರ್ಯಕ್ಕೆ ಹೆಚ್ಚು ಸಮಯ ಬೇಕಾಗುವ ಸಾಧ್ಯತೆ ಹಿನ್ನೆಲೆಯಲ್ಲಿ ಪ್ರಯಾಣಿಕರ ಅನುಕೂಲಕ್ಕಾಗಿ ಬದಲಿ ಲಾಂಚ್ ತರಿಸಿ ಸೇವೆ ಪುನರಾರಂಭಿಸಲಾಗಿದೆ.
ನೂರಾರು ಪ್ರಯಾಣಿಕರಿಗೆ ಪ್ರಮುಖ ಸಂಪರ್ಕ ಮಾರ್ಗ :
ತುಮರಿ–ಸಿಗಂದೂರು ಭಾಗದ ಜನರು ಕಾರ್ಗಲ್ ಪೊಲೀಸ್ ಠಾಣೆ ಹಾಗೂ ಜೋಗದ ವಿದ್ಯುತ್ ಕೇಂದ್ರವನ್ನು ತಲುಪಲು ಹಲ್ಕೆ–ಮುಪ್ಪಾನೆ ಜಲಮಾರ್ಗ ಪ್ರಮುಖ ಸಂಪರ್ಕವಾಗಿದೆ. ಪ್ರತಿದಿನ ನೂರಾರು ಮಂದಿ ಈ ಮಾರ್ಗವನ್ನು ಅವಲಂಬಿಸಿರುವುದರಿಂದ ಲಾಂಚ್ ಸೇವೆ ಸ್ಥಗಿತಗೊಂಡಿದ್ದರಿಂದ ಸಾರ್ವಜನಿಕರಿಗೆ ತೊಂದರೆಯಾಗಿತ್ತು.
ಒಂದೇ ವರ್ಷದಲ್ಲಿ ಎರಡನೇ ಬಾರಿ ವ್ಯತ್ಯಯ :
ಈ ವರ್ಷ ಜೂನ್ನಲ್ಲಿ ಶರಾವತಿ ಹಿನ್ನೀರಿನ ಮಟ್ಟ ಗಣನೀಯವಾಗಿ ಕುಸಿದ ಪರಿಣಾಮ ಲಾಂಚ್ ಸಂಚಾರ ಮೊದಲ ಬಾರಿಗೆ ಸ್ಥಗಿತಗೊಂಡಿತ್ತು. ಬಳಿಕ ಮಳೆ ಆರಂಭವಾಗಿ ನೀರಿನ ಮಟ್ಟ ಏರಿದ ನಂತರ ಸೇವೆ ಪುನರಾರಂಭಗೊಂಡಿತ್ತು. ಆದರೆ ಕೆಲವೇ ದಿನಗಳಲ್ಲಿ ತಾಂತ್ರಿಕ ದೋಷ ಎದುರಾದ ಹಿನ್ನೆಲೆಯಲ್ಲಿ ಮತ್ತೆ ಸೇವೆ ಸ್ಥಗಿತಗೊಂಡಿತ್ತು. ಇದೀಗ ಬದಲಿ ಲಾಂಚ್ ಮೂಲಕ ಸಂಚಾರ ಪುನರಾರಂಭವಾಗಿರುವುದು ಸ್ಥಳೀಯರು ಹಾಗೂ ನಿತ್ಯ ಪ್ರಯಾಣಿಕರಲ್ಲಿ ಸಂತಸಕ್ಕೆ ಕಾರಣವಾಗಿದೆ.
ಈ ಸಂದರ್ಭದಲ್ಲಿ ದೇವೇಂದ್ರಪ್ಪ ಯಲಕುಂಡ್ಲಿ, ಬಿ.ಸಿ. ಲಕ್ಷ್ಮೀನಾರಾಯಣ, ರಾಜೇಶ್ ಯಲಕೋಡು, ದಿನೇಶ್ ಆರೋಡಿ, ಮಂಜಯ್ಯ ಜೈನ್, ಓಂಕಾರ್ ಜೈನ್, ಪ್ರಸನ್ನ ಇಡುವಾಣಿ, ನಾಗರಾಜ್ ವಾಟೇಮಕ್ಕಿ ಸೇರಿದಂತೆ ಹಲವು ಸ್ಥಳೀಯ ಮುಖಂಡರು ಉಪಸ್ಥಿತರಿದ್ದರು.

